ವಿಜಯಪುರ: ತ್ಯಾಗ, ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಶನಿವಾರ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಶ್ರದ್ಧೆ–ಭಕ್ತಿಯಿಂದ ಆಚರಿಸಲಾಯಿತು.
ಕೋವಿಡ್ ಹಿನ್ನೆಲೆಯಲ್ಲಿ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧವಿದ್ದ ಕಾರಣ ನಗರದ ಐತಿಹಾಸಿಕ ಜುಮ್ಮಾ ಮಸೀದಿ, ಮುಲ್ಕೆಜಹಾ ಮಸೀದಿ, ಬುಖಾರಿ ಮಸೀದಿ ಸೇರಿದಂತೆ ನೂರಾರುಮಸೀದಿಗಳಲ್ಲಿ ಮುಸ್ಲಿಮರು ಪರಸ್ಪರ ಅಂತರ ಕಾಯ್ದುಕೊಂಡು ಪ್ರಾರ್ಥನೆ ಸಲ್ಲಿಸಿದರು.
ಬೆಳಿಗ್ಗೆ 6ರಿಂದ 9ರ ಅವಧಿಯಲ್ಲಿ ನಡೆದ ಪ್ರಾರ್ಥನೆ ಸಂದರ್ಭದಲ್ಲಿ ಮಸೀದಿಯೊಳಗೆ ಒಮ್ಮಗೆ 50 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಕೇವಲ 15 ನಿಮಿಷಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಹೀಗಾಗಿ ಮಸೀದಿ ಹೊರಗಡೆ ಮುಸ್ಲಿಮರು ಸರದಿಯಲ್ಲಿ ಕಾಯುವಂತಾಯಿತು. ಕೋವಿಡ್ ಸಂಕಷ್ಟದಿಂದ ಜನರನ್ನು ಮತ್ತು ದೇಶವನ್ನು ರಕ್ಷಿಸುವಂತೆ ಧರ್ಮಗುರುಗಳು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಪ್ರಾರ್ಥನೆಗೂ ಮುನ್ನಾ ಥರ್ಮಲ್ ಸ್ಕ್ರೀನಿಂಗ್ ನಡೆಸಿ, ಹ್ಯಾಂಡ್ ಸ್ಯಾನಿಟೈಸ್ ಹಚ್ಚಲಾಯಿತು. ಮಾಸ್ಕ್ ಧರಿಸಿದವರನ್ನು ಮಾತ್ರ ಪ್ರಾರ್ಥನೆಗೆ ಬಿಡಲಾಯಿತು. ಎಲ್ಲ ಸಿದ್ಧತೆಗಳನ್ನು ಆಯಾ ಮಸೀದಿಯ ನಿರ್ವಹಣಾ ಸಮಿತಿಗೆ ವಹಿಸಲಾಗಿತ್ತು.
ನಗರದಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿಷೇಧವಿದ್ದ ಕಾರಣ, ಈ ಬಾರಿ ಎಲ್ಲ ಈದ್ಗಾ ಮೈದಾನಗಳಲ್ಲಿ ಪೊಲೀಸ್ ಕಾವಲು ಇತ್ತು.
ಹೊಸ ಉಡುಗೆ ತೊಟ್ಟು ಬಂದ ಮಕ್ಕಳು, ಹಿರಿಯರು ಸಂಭ್ರಮಿಸಿದರು. ಆದರೆ, ಪರಸ್ಪರ ಆಲಿಂಗಿಸಿಕೊಂಡು ಹಬ್ಬದ ಶುಭಾಷಯ ವಿನಿಮಯ ಮಾಡಿಕೊಳ್ಳುವುದಕ್ಕೆ ನಿರ್ಬಂಧವಿದ್ಧ ಕಾರಣ ದೂರದಿಂದಲೇ ಹಬ್ಬದ ಶುಭಷಯ ಕೋರಿದರು. ಬಹುತೇಕ ವಯಸ್ಸಾದವು, ಮಕ್ಕಳು ತಮ್ಮ ತಮ್ಮ ಮನೆಗಳಲ್ಲೇ ನಮಾಜ್ ಮಾಡಿದರು. ಸಿಹಿ ಜೊತೆಗೆ ಕೋಳಿ, ಕುರಿ ಮಾಂಸದ ಊಟ ಸವಿದರು. ಬಡವರಿಗೆ ದಾನ ಮಾಡಿದರು.
ಕೋವಿಡ್ ಹಿನ್ನೆಲೆಯಲ್ಲಿ ವ್ಯಾಪಾರ, ವಹಿವಾಟು ಹೆಚ್ಚಾಗಿರಲಿಲ್ಲ. ಪರಿಣಾಮ ಹಬ್ಬದಲ್ಲೂ ದೊಡ್ಡ ಪ್ರಮಾಣದ ಸಂಭ್ರಮ ಕಂಡುಬರಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.