ವಿಜಯಪುರ: ಹೊಟ್ಟೆ ಪಾಡಿಗಾಗಿ ಮಹಾರಾಷ್ಟ್ರಕ್ಕೆ ಹೋಗಿದ್ದ ಜಿಲ್ಲೆಯ 20 ಜನ ಬಡ ಕಾರ್ಮಿಕರು ಲಾಕ್ ಡೌನ್ನಿಂದಾಗಿ ಕೈಯಲ್ಲಿ ಕಾಸಿಲ್ಲದೆ, ಊಟಕ್ಕೂ ಗತಿ ಇಲ್ಲದೇ, ಊರಿಗೂ ಬರಲಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇಂಡಿ ತಾಲ್ಲೂಕಿನ ಬರಗುಡಿ ಗ್ರಾಮದ ಸುಮಾರು 20 ಜನ ಕೂಲಿ ಕಾರ್ಮಿಕರು ಸಾತಾರ ಜಿಲ್ಲೆಯ ಕರಾಡ ತಾಲ್ಲೂಕಿನ ಉಮರಜ್ ಗ್ರಾಮದಿಂದ ಸುಮಾರು 2 ಕಿ.ಮೀ. ದೂರದ ಪ್ರದೇಶವೊಂದರಲ್ಲಿ ಶೆಡ್ನಲ್ಲಿ ತೊಂದರೆಗೆ ಒಳಗಾಗಿದ್ದಾರೆ.
ಆರು ತಿಂಗಳ ಹಿಂದೆ ಮೂವರು ಮಕ್ಕಳು, 15 ಮಹಿಳೆಯರು ಸೇರಿ ಒಟ್ಟು 20 ಜನರು ಕೂಡಿಕೊಂಡು ಉದ್ಯೋಗ ಅರಸಿ ದೂರದ ಉಮರಜ್ಗೆ ಹೋಗಿದ್ದರು. ಪ್ರಾರಂಭದಲ್ಲಿ ದುಡಿಮೆಗೆ ತಕ್ಕ ಸಂಬಳ ಪಡೆದು ಇವರು ಗ್ರಾಮದ ಹೊರ ವಲಯದಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಇದರಿಂದಾಗಿ ಇವರಿಗೆ ಯಾವುದೇ ತೋಂದರೆ ಇರಲಿಲ್ಲ.
ಲಾಕ್ಡೌನ್ ಘೋಷಣೆಯಾದ ಬಳಿಕ ಸಾರಿಗೆ ಸಂಪರ್ಕ ಇಲ್ಲದ ಕಾರಣ ಊರು ಸೇರಲಾಗದೆ, ಇಟ್ಟಿಗೆ ತಯಾರಿಕೆ ಬಟ್ಟಿಯ ಪಕ್ಕ ಬಿಡಾರ ಹೂಡಿದ ಸ್ಥಳದಲ್ಲೆ ಉಳಿದುಕೊಂಡಿದ್ದರು.
ಪ್ರಾರಂಭದ ದಿನಗಳಲ್ಲಿ ಮಾಲೀಕನು ಅಗತ್ಯ ಸೌಲಭ್ಯ ಒದಗಿಸಿದ್ದರು. ಹಣದ ತೊಂದರೆಯೂ ಆಗಿರಲಿಲ್ಲ, ಆದರೆ, ಕಳೆದ 15 ದಿನಗಳ ಹಿಂದೆ ಇಟ್ಟಿಗೆ ಬಟ್ಟಿ ಮಾಲಲೀಕ ಉಮರಜ್ ಗ್ರಾಮದಲ್ಲೆ ಹೋಂ ಕ್ವಾರಂಟೈನ್ಗೆ ಒಳಗಾದ ಕಾರಣ, ಕಾರ್ಮಿಕರು ಕೈಯಲ್ಲಿ ಕಾಸಿಲ್ಲದೆ, ಹೊಟ್ಟೆಗೆ ಹಿಟ್ಟಿಲ್ಲದೆ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
ಅಂತರರಾಜ್ಯ ಪ್ರಯಾಣಕ್ಕೆ ಆನ್ ಲೈನ್ನಲ್ಲಿ ಅರ್ಜಿ ಸಲ್ಲಿಸಿ ಪಾಸ್ ನಿರೀಕ್ಷೆಯಲ್ಲಿದ್ದರು. ಆದರೆ, ಅಲ್ಲಿನ ಸರ್ಕಾರ ನಿಮಗೆ ಕರ್ನಾಟಕದವರು ಸೇರಿಸಿಕೊಳ್ಳುವುದಿಲ್ಲ ಎಂದು ಪಾಸ್ ನೀಡದೆ ಅರ್ಜಿ ತಿರಸ್ಕಾರ ಮಾಡಿದೆ ಎಂದು ಇಟ್ಟಿಗೆ ಕಾರ್ಮಿಕ ಬರಗುಡಿ ಗ್ರಾಮದ ನಿವಾಸಿ ಫಕ್ಕೀರಪ್ಪ ಪೂಜಾರಿ ದೂರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.