ಭೀಮಾ ನದಿ ಪ್ರವಾಹದಿಂದ ಧೂಳಖೇಡ ಗ್ರಾಮದ ಹೊಲದಲ್ಲಿ ಅಪಾರ ಪ್ರಮಾಣದ ನೀರು ಆವರಿಸಿದೆ
ಚಡಚಣ: ಎರಡು ದಿನಗಳಿಂದ ಚಡಚಣ ಹಾಗೂ ಮಹಾರಾಷ್ಟ್ರದ ಸಾಂಗಲಿ, ಸೋಲಾಪುರ ಜಿಲ್ಲೆಗಳಲ್ಲಿ ವರುಣನ ಆರ್ಭಟ ಕಡಿಮೆಯಾಗಿದ್ದರೂ, ಭೀಮಾ ಹಾಗೂ ಸೀನಾ ನದಿಗಳು ಮೈದುಂಬಿ ಹರಿಯುತ್ತಿದೆ.
ಹಳ್ಳ–ಕೊಳ್ಳಗಳಿಂದ ತುಂಬಿ ಹರಿಯು ತ್ತಿರುವ ಭೀಮಾ ನದಿಗೆ ಸೋಮವಾರ ಸಂಜೆ ಉಜನಿ ಜಲಾಶಯದಿಂದ 1.25 ಲಕ್ಷ ಕ್ಯೂಸೆಕ್ ನೀರು ಹರಿಸಿದ್ದರೆ, ಮಂಗಳವಾರ 50 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. ಉಜನಿ ಅಣೆಕಟ್ಟಿನ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವುದು ಮತ್ತು ನೀರಿನ ಒಳಹರಿವು ಹೆಚ್ಚಾಗಿರುವುದರಿಂದ, ಪ್ರವಾಹ ನಿಯಂತ್ರಣಕ್ಕಾಗಿ ಭೀಮಾ ಹಾಗೂ ಸೀನಾ ನದಿಗೆ ನೀರು ಹರಿಸಲಾಗುತ್ತಿದೆ.
ಇದರಿಂದ ಭೀಮಾ ನದಿಯಲ್ಲಿ ಪ್ರವಾಹ ಉಂಟಾಗಿ ನದಿ ತೀರದ ಹೊಲ–ಗದ್ದೆಗಳಲ್ಲಿ ನೀರು ಆವರಿಸಿ, ಅಪಾರ ಪ್ರಮಾಣದ ವಾಣಿಜ್ಯ ಬೆಳೆಗಳು ಹಾಳಾಗಿವೆ. ಮಹಾರಾಷ್ಟ್ರದ ಸೀನಾ ನದಿಗೂ ನೀರು ಹರಿಯುತ್ತಿರುವುದರಿಂದ ಸೋಲಾಪುರ–ವಿಜಯಪುರ ರಾಷ್ಟ್ರೀಯ ಹೆದ್ದಾರಿ ಜಲಾವೃತವಾಗಿ ರಸ್ತೆ ಸಂಪರ್ಕ ಕಡಿತವಾಗಿದೆ. ಸೀನಾ ನದಿ ಸುತ್ತಲಿನ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲೂ ನೀರು ಆವರಿಸಿಕೊಂಡಿದ್ದು, ಮಹಾರಾಷ್ಟ್ರದ ಹಲವಾರು ಗ್ರಾಮಗಳು ಜಲಾವೃತಗೊಂಡಿವೆ.
ಕರ್ನಾಟಕದ ದೂಳಖೇಡ ಹಾಗೂ ಮಹಾರಾಷ್ಟ್ರದ ಟಾಕಳಿ ಗ್ರಾಮಗಳ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿನ ಸೇತುವೆ ಕೆಳಗೆ 12.5 ಮೀಟರ್ ನೀರು ಹರಿದರೆ ನದಿ ಪಾತ್ರಕ್ಕೆ ಅಪಾಯ ಎದುರಾಗುತ್ತದೆ. ಆದರೆ, ಮಂಗಳವಾರ 13.5 ಮೀ.ನೀರು ಹರಿಯುತ್ತಿದ್ದು, ಪ್ರವಾಹದದ ಭೀತಿ, ನದಿ ತಟದ ಗ್ರಾಮಗಳನ್ನು ಆವರಿಸಿದೆ.
‘ಭೀಮಾ ನದಿಯಲ್ಲಿ ನೀರಿನ ಮಟ್ಟ ಏರಿಕೆ ಆಗುತ್ತಿರುವದರಿಂದ ಸುತ್ತಲಿನ ಪ್ರದೇಶದಲ್ಲಿ ವಾಸವಾಗಿರವ ರೈತ ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ. ಹಲವೆಡೆ ಕಾಳಜಿ ಕೇಂದ್ರ ತೆರೆಯಲಾಗಿದೆ. ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ಯಾವುದೇ ಪರಿಸ್ಥಿತಿ ನಿಭಾಯಿಸಲು ತಾಲ್ಲೂಕು ಆಡಳಿತ ಸಜ್ಜಾಗಿದೆ’ ಎಂದು ಚಡಚಣ ತಹಶೀಲ್ದಾರ್ ಸಂಜಯ ಇಂಗಳೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.