ತಾಳಿಕೋಟೆ: ಬಿಜೆಪಿ ಅಧಿಕಾರದ ದುರಾಸೆಗಾಗಿ ಧರ್ಮದ ಹೆಸರಿನಲ್ಲಿ ಜನರ ಮನಸ್ಸುಗಳನ್ನು ಒಡೆಯುವ ಕೆಲಸ ಮಾಡುತ್ತಿದೆ. ನೆಮ್ಮದಿಯ ಬದುಕಿಗಾಗಿ ಸಾಮರಸ್ಯದ ಮರುಸ್ಥಾಪನೆಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ಶಾಸಕ ಸಿ. ಎಸ್.ನಾಡಗೌಡ (ಅಪ್ಪಾಜಿ) ಹೇಳಿದರು.
ತಾಲ್ಲೂಕಿನ ಮಿಣಜಗಿ ಗ್ರಾಮದಲ್ಲಿ ವಿಜಯಪುರ ಲೋಕಸಭಾ ಮೀಸಲು ಕ್ಷೇತ್ರದ ಅಭ್ಯರ್ಥಿ ರಾಜು ಆಲಗೂರ ಪರ ಚುನಾವಣಾ ಪ್ರಚಾರಾರ್ಥವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು
ರಾಜ್ಯದ ಜನರಿಗೆ ನೀಡಿದ್ದ ಐದು ಗ್ಯಾರಂಟಿ ಯೋಜನೆಗಳ ಭರವಸೆಯನ್ನು ಈಡೇರಿಸಿದ್ದೇವೆ. ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿರುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಒಂದೂ ಭರವಸೆಯನ್ನು ಈಡೇರಿಸಿಲ್ಲ. ಕೇವಲ ಸುಳ್ಳು ಹೇಳಿ ದೇಶದ ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ದೂರಿದರು.
ರಾಜ್ಯದಲ್ಲೀಗ ಭೀಕರ ಬರಗಾಲವಿದೆ. ಇದಕ್ಕಾಗಿ ನಾವು ₹16,000 ಕೋಟಿ ಪರಿಹಾರವನ್ನು ಕೇಳಿದ್ದೇವು. ಇಲ್ಲಿವರೆಗೂ ಒಂದು ಪೈಸೆನೂ ಕೊಟ್ಟಿಲ್ಲ. ನಮಗೆ ಸಿಗಬೇಕಾದ ಅನುದಾನವನ್ನು ಪಡೆದುಕೊಳ್ಳಲು ಸುಪ್ರೀಂ ಕೋರ್ಟ್ಗೆ ಹೋಗಬೇಕಾಯಿತು. ತಮ್ಮ ಆಡಳಿತವನ್ನು ವಿರೋಧಿಸುವವರನ್ನು ಜೈಲಿಗೆ ಅಟ್ಟುವ ಕೆಲಸ ಮಾಡಲಾಗುತ್ತಿದೆ. ನಿರಂಕುಶಾಧಿಕಾರದ ಸರ್ಕಾರವನ್ನು ಕಿತ್ತು ಹಾಕಬೇಕಾಗಿದೆ ಎಂದರು.
ವಿಜಯಪುರ ಲೋಕಸಭೆ ಕ್ಷೇತ್ರದಲ್ಲಿ 20 ವರ್ಷಗಳಿಂದ ನಮ್ಮ ಅಭ್ಯರ್ಥಿ ಗೆದ್ದಿಲ್ಲ. ಈ ಬಾರಿ ರಾಜು ಆಲಗೂರ ಅವರನ್ನು ಗೆಲ್ಲಿಸಬೇಕಾಗಿದೆ ಎಂದು ಹೇಳಿದರು.
ಅಭ್ಯರ್ಥಿ ರಾಜು ಆಲಗೂರು ಮಾತನಾಡಿ, ಜಿಲ್ಲೆಯಲ್ಲಿ ಮೂರು ಅವಧಿಯಿಂದ ಪ್ರತಿನಿಧಿಸುತ್ತಿರುವ ಸಂಸದರು ಜಿಲ್ಲೆಗಾಗಿ ಏನೂ ಕೆಲಸ ಮಾಡಿಲ್ಲ. ಈ ಬಾರಿ ನನಗೆ ಆಶೀರ್ವಾದ ಮಾಡಿ ನಿಮ್ಮ ಸೇವಕನಾಗಿ ಕೆಲಸ ಮಾಡುತ್ತೇನೆ ಎಂದರು.
ಗ್ಯಾರಂಟಿ ಯೋಜನೆಗಳ ತಾಲ್ಲೂಕು ಅನುಷ್ಠಾನ ಸಮಿತಿ ಅಧ್ಯಕ್ಷ ಶಂಕರಗೌಡ ಹಿರೇಗೌಡ ಹಾಗೂ ನಿವೃತ್ತ ಡಿವೈಎಸ್ಪಿ ಎಸ್.ಎಸ್. ಹುಲ್ಲೂರು ಮಾತನಾಡಿದರು.
ಧಾರ್ಮಿಕ ಮುಖಂಡ ಸೈಯದ ಶಕೀಲ ಅಹಮದ್ ಖಾಜಿ. ಮುಖಂಡರಾದ ಬಿ.ಎಸ್.ಪಾಟೇಲ (ಯಾಳಗಿ).ರಾಯನಗೌಡ ತಾತರಡ್ಡಿ, ಸಿ.ಬಿ.ಅಸ್ಕಿ, ಸಿದ್ದನಗೌಡ ಪಾಟೀಲ ನಾವದಗಿ, ವಿಜಯ ಸಿಂಗ್ ಹಜೇರಿ, ಗುರು ತಾರನಾಳ, ಎಂ.ಕೆ.ಚೋರಗಸ್ತಿ, ಪುರಸಭೆ ಸದಸ್ಯೆ ಅಕ್ಕಮಹಾದೇವಿ ಕಟ್ಟಿಮನಿ, ಮಾಜಾನಬಿ ಚನ್ನೂರ, ನೀಲಮ್ಮ ಪಾಟೀಲ, ಅಶೋಕಗೌಡ ಪಾಟೀಲ(ಕೂಚಬಾಳ) ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.