ವಿಜಯಪುರ: ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ತಗ್ಗಿದ್ದು, ಬಿಜೆಪಿಯವರು ಈಗ ಪ್ರವಾಸ ಕೈಗೊಂಡು ಏನು ವೀಕ್ಷಣೆ ಮಾಡುತ್ತಾರೆ ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಪ್ರಶ್ನಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಪ್ರವಾಹ ಪರಿಸ್ಥಿತಿ ಬಗ್ಗೆ ಮುಖ್ಯಮಂತ್ರಿಗಳು ವೈಮಾನಿಕ ಸಮೀಕ್ಷೆ ನಡೆಸಿದ ದಿನವೇ ಪರಿಹಾರವನ್ನೂ ಘೋಷಿಸಲಾಗಿದೆ. ಎನ್ ಡಿಆರ್ ಎಫ್ ಮಾರ್ಗಸೂಚಿಗಿಂತ ಹೆಚ್ಚುವರಿ ಪರಿಹಾರ ಸೇರಿ ಒಂದು ಹೆಕ್ಟೇರ್ಗೆ ಸುಮಾರು ₹17 ಸಾವಿರ ಪರಿಹಾರವನ್ನು ಘೋಷಿಸಲಾಗಿದೆ ಎಂದರು.
ಆಯಾ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಸಹ ಪರಿಸ್ಥಿತಿ ಅವಲೋಕಿಸಿದ್ದಾರೆ. ಈಗ ಪ್ರವಾಹ ತಗ್ಗಿದ್ದು, ಬಿಜೆಪಿಯವರು ಏನು ವೀಕ್ಷಣೆ ಮಾಡುತ್ತಾರೆ? ಇದು ರೈಲು ಹೋದ ನಂತರ ಟಿಕೆಟ್ ತೆಗೆಯಲು ಬರುವಂತಿದೆ ಎಂದು ವ್ಯಂಗ್ಯವಾಡಿದರು.
ಬಿಜೆಪಿಯಲ್ಲಿ ಆರ್.ಅಶೋಕ, ಬಿ.ವೈ.ವಿಜಯೇಂದ್ರ, ಪ್ರಹ್ಲಾದ ಜೋಶಿ, ವಿ.ಸೋಮಣ್ಣ ಸೇರಿದಂತೆ 20 ಬಣಗಳು ಇವೆ. ಬಿಜೆಪಿಗೆ ಒಂದಲ್ಲ, ನೂರು ಬಾಗಿಲುಗಳು ಇವೆ. ನೆರೆ ಪ್ರದೇಶಗಳಿಗೆ ಯಾವ ಬಾಗಿಲಿನ ಬಿಜೆಪಿಯವರು ಬರುತ್ತಿದ್ದಾರೆ ಗೊತ್ತಿಲ್ಲ ಎಂದರು.
ಕೇಂದ್ರ ಸರ್ಕಾರದಿಂದ 14, 15ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಸುಮಾರು ₹60 ರಿಂದ ₹ 70 ಸಾವಿರ ಕೋಟಿ ಅನ್ಯಾಯವಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ₹5,800 ಕೋಟಿ ಅನುದಾನ ಘೋಷಿಸಿದ್ದರೂ ಇನ್ನೂ ಒಂದು ರೂಪಾಯಿ ಸಹ ಬಿಡುಗಡೆ ಮಾಡಿಲ್ಲ. ಹೀಗಾಗಿ ಬಿಜೆಪಿಯವರು ಮೊದಲು ರಾಜ್ಯಕ್ಕೆ ಬರಬೇಕಾದ ಅನುದಾನ ಬಿಡುಗಡೆ ಮಾಡಿಸಲಿ ಎಂದರು.
ಎನ್ ಡಿಆರ್ ಎಫ್ ಮಾರ್ಗಸೂಚಿ ಪ್ರಕಾರ ಬೆಳೆ ಹಾನಿ ಪರಿಹಾರ ಬಹಳ ಕಡಿಮೆ ಇದೆ. ಒಣಬೇಸಾಯಕ್ಕೆ ಕೇವಲ ₹8,500 ನಿಗದಿಯಾಗಿದ್ದು, ಇದನ್ನು ₹20 ಸಾವಿರಕ್ಕೆ ಪರಿಷ್ಕರಣೆ ಮಾಡಿಸಲಿ. ಈ ನಿಟ್ಟಿನಲ್ಲಿ ಬಿಜೆಪಿಯವರು ದೆಹಲಿಗೆ ಹೋಗಲಿ. ಆದರೆ, ಅವರಿಗೆ ದೆಹಲಿಗೆ ಹೋಗುವ ತಾಕತ್ತು, ಧೈರ್ಯ ಇಲ್ಲ. ದೆಹಲಿಗೆ ಹೋಗಲು ಹೆದರಿಕೊಳ್ಳುತ್ತಾರೆ ಎಂದು ಕುಟುಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.