ADVERTISEMENT

ದೇಶದಾದ್ಯಂತ ಬಿಜೆಪಿ ಅಲೆ: ಭಾಂಡಗೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 3:07 IST
Last Updated 4 ಮಾರ್ಚ್ 2026, 3:07 IST
ವಿಜಯಪುರದ ಸಾಯಿ ವಿಹಾರ ಮಂಗಲ ಕಾರ್ಯಾಲಯದಲ್ಲಿ ನಡೆದ ಬಿಜೆಪಿ ನಗರ ಮಂಡಳ ಕಾರ್ಯಕರ್ತರಿಗಾಗಿ ಆಯೋಜಿಸಿದ್ದ ಬಿಎಲ್ಎ-2 ಕಾರ್ಯಾಗಾರದಲ್ಲಿ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿದರು
ವಿಜಯಪುರದ ಸಾಯಿ ವಿಹಾರ ಮಂಗಲ ಕಾರ್ಯಾಲಯದಲ್ಲಿ ನಡೆದ ಬಿಜೆಪಿ ನಗರ ಮಂಡಳ ಕಾರ್ಯಕರ್ತರಿಗಾಗಿ ಆಯೋಜಿಸಿದ್ದ ಬಿಎಲ್ಎ-2 ಕಾರ್ಯಾಗಾರದಲ್ಲಿ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿದರು   

ವಿಜಯಪುರ: ‘ಬಿಜೆಪಿ ಪಕ್ಷದ ಬಗ್ಗೆ ಹಿಂದೆ ಹಾಸ್ಯ ಮಾಡುತ್ತಿದ್ದ ಕೆಲ ಕಾಂಗ್ರೆಸ್ ನಾಯಕರು ಇಂದು ತಮ್ಮ ಮಕ್ಕಳನ್ನೇ ಬಿಜೆಪಿಗೆ ಕಳುಹಿಸುತ್ತಿದ್ದಾರೆ’ ಎಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು.

ನಗರದ ಸಾಯಿ ವಿಹಾರ ಮಂಗಳ ಕಾರ್ಯಾಲಯದಲ್ಲಿ ಸೋಮವಾರ ಬಿಜೆಪಿ ನಗರ ಮಂಡಳದ ವತಿಯಿಂದ ಭೂತ್ ಮಟ್ಟದ ಏಜೆಂಟರಿಗೆ ಆಯೋಜಿಸಿದ್ದ ಮಾರ್ಗದರ್ಶನ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದಾದ್ಯಂತ ಬಿಜೆಪಿ ಪರ ಅಲೆ ಹರಿದಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಪಣಾ ಮನೋಭಾವ ಮತ್ತು ಅಭಿವೃದ್ಧಿಪರ ನಾಯಕತ್ವದಿಂದ ಪಕ್ಷವು ಬಲಿಷ್ಠವಾಗಿದೆ. ಹಿಂದೆ ಬೆರಳಣಿಕೆಯಷ್ಟು ಸ್ಥಾನಗಳನ್ನು ಗೆಲ್ಲುತ್ತಿದ್ದ ಬಿಜೆಪಿಯನ್ನು ಟೀಕಿಸುತ್ತಿದ್ದ ಕಾಂಗ್ರೆಸ್ ನಾಯಕರು ಇಂದು ತಮ್ಮ ಮಕ್ಕಳನ್ನು ಬಿಜೆಪಿಗೆ ಸೇರಿಸುತ್ತಿದ್ದಾರೆ. ಕಾಂಗ್ರೆಸ್ ವೆಂಟಿಲೇಟರ್‌ನಲ್ಲಿರುವ ಹಡಗಿನಂತಾಗಿದೆ; ಶೀಘ್ರದಲ್ಲೇ ಅದು ಮುಳುಗಲಿದೆ’ ಎಂದರು.

ADVERTISEMENT

‘ಬಿಜೆಪಿಯ ಬೆಳವಣಿಗೆಯ ಹಿಂದೆ ಅನೇಕ ದಿಗ್ಗಜ ನಾಯಕರ ತ್ಯಾಗ ಮತ್ತು ಪರಿಶ್ರಮ ಅಡಗಿದೆ. ವ್ಯಕ್ತಿಗಿಂತ ಪಕ್ಷ, ಪಕ್ಷಕ್ಕಿಂತ ರಾಷ್ಟ್ರ ಮುಖ್ಯ ಎನ್ನುವುದು ಬಿಜೆಪಿಯ ಸಿದ್ಧಾಂತ’ ಎಂದು ಹೇಳಿದರು.

‘ಭೂತ್ ಮಟ್ಟದ ಏಜೆಂಟರು ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಯಾರನ್ನೂ ನಿರ್ಲಕ್ಷಿಸದೆ ಎಲ್ಲರೊಂದಿಗೆ ಸಂಪರ್ಕ ಸಾಧಿಸಬೇಕು. ಹಿಂದೆ ಕಾಂಗ್ರೆಸ್‌ಗೆ ಮತಹಾಕಿದ್ದವರ ಮನಸ್ಥಿತಿ ಈಗ ಬದಲಾಗಿರಬಹುದು; ಬಿಜೆಪಿಯ ಅಭಿವೃದ್ಧಿ ಕಾರ್ಯಗಳು ಅವರನ್ನು ಸೆಳೆಯಬಹುದು’ ಎಂದು ತಿಳಿಸಿದರು.

ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ‘ಕಾರ್ಯಕರ್ತರೇ ಪಕ್ಷದ ಜೀವಾಳ. ಅವರ ಸಂಕಷ್ಟಗಳಿಗೆ ಸ್ಪಂದಿಸುವುದು ನಮ್ಮ ಧರ್ಮ. ಕಾರ್ಯಕರ್ತರ ಶ್ರಮದಿಂದಲೇ ನಾಯಕರು ರೂಪುಗೊಳ್ಳುತ್ತಾರೆ. ಯಾವುದೇ ತೊಂದರೆ ಇದ್ದರೂ ನೇರವಾಗಿ ತಿಳಿಸಬೇಕು, ಪರಿಹಾರಕ್ಕೆ ನಾನು ಬದ್ಧನಾಗಿದ್ದೇನೆ’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ, ನಗರ ಮಂಡಳ ಅಧ್ಯಕ್ಷ ಸಂದೀಪ್ ಪಾಟೀಲ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮೇಯರ್ ಎಂ.ಎಸ್. ಕರಡಿ, ಉಪ ಮೇಯರ್ ಸುಮಿತ್ರಾ ಜಾದವ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಳನಗೌಡ ಪಾಟೀಲ್, ಈರಣ್ಣ ರಾವೂರ, ರಾಜ್ಯ ಎಸ‌್‌ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ್ ಕಾರಜೋಳ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.