ವಿಜಯಪುರ: ನಗರದ ಬಸ್ ನಿಲ್ದಾಣದಿಂದ ಹುಬ್ಬಳ್ಳಿ, ಬೆಳಗಾವಿ, ಹೊಸಪೇಟೆ, ಬಾಗಲಕೋಟೆ, ಕಲಬುರಗಿ ಸೇರಿದಂತೆ ವಿವಿಧ ನಗರ, ಪಟ್ಟಣಗಳಿಗೆ ಈಶಾನ್ಯ ಕರ್ನಾಟಕ ಸಾರಿಗೆ ಬಸ್ ಗಳು ಸಂಚಾರ ಆರಂಭಿಸಿದವು. ಲಾಕ್ಡೌನ್ ಬಳಿಕ ಬಸ್ ಪ್ರಯಾಣ ಆರಂಭವಾದ ಪ್ರಥಮ ದಿನವಾದ ಕಾರಣ ಪ್ರಯಾಣಿಕರ ಸಂಖ್ಯೆ ವಿರಳವಾಗಿದೆ.
ಬೆಳಿಗ್ಗೆ 7ರಿಂದ ಸಂಜೆ 7ರ ವರೆಗೆ ಸುಮಾರು 250 ಬಸ್ಗಳು ವಿವಿಧ ಮಾರ್ಗಗಳಲ್ಲಿ ಸಂಚಾರ ನಡೆಸಲಿವೆ ಎಂದು ಸಂಸ್ಥೆಯ ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ ಗಂಗಾಧರ್ ತಿಳಿಸಿದರು.
ಪ್ರತಿ ಬಸ್ ನಿರ್ವಾಹಕ, ಚಾಲಕರಿಂದ ಆರೋಗ್ಯಕ್ಕೆಸಂಬಂಧಿಸಿದಂತೆ ಸ್ವಯಂ ದೃಢೀಕರಣ ಪತ್ರ ಪಡೆದು, ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಬಸ್ ನಿಲ್ದಾಣದಲ್ಲಿ ಮತ್ತು ಬಸ್ಗಳ ಒಳಗೆ ಅಂತರ ಕಾಯ್ದುಕೊಳ್ಳಲುಮಾರ್ಕ್ ಮಾಡಲಾಗಿದೆ. ಪ್ರಯಾಣಿಕರು ಮಾಸ್ಕ್ ಧರಿಸುವುದು ಕಡ್ಡಾಯ.
ಟಿಕೆಟ್ ನೀಡುವ ಮುನ್ನಾ ಪ್ರಯಾಣಿಕರ ಹೆಸರು, ವಯಸ್ಸು, ವಿಳಾಸ, ಫೋನ್ ನಂಬರ್ ಪಡೆಯಲಾಗುತ್ತಿದೆ. ಕೊರೊನಾ ಜಾಗೃತಿ ಮತ್ತು ಪಾಲಿಸಬೇಕಾದ ನಿಯಮಗಳ ಕುರಿತು ಧ್ವನಿ ವರ್ದಕದ ಮೂಲಕ ಪ್ರಯಾಣಿಕರಿಗೆ ತಿಳಿಸಲಾಗುತ್ತಿದೆ.
‘ಎರಡು ತಿಂಗಳಿಂದ ಕೆಲಸವಿಲ್ಲದೆ ಮನೆಯಲ್ಲಿ ಕುಳಿತು ಬೇಸರವಾಗಿತ್ತು. ಇಂದು ಕೆಲಸಕ್ಕೆ ಬಂದಿದ್ದೇನೆ. ಹೋಟೆಲ್ ಇಲ್ಲದಿರುವುದರಿಂದ ಊಟಕ್ಕೆ ಸಮಸ್ಯೆಯಾಗಬಾರದು ಎಂದು ಬುತ್ತಿ ಕಟ್ಟಿಕೊಂಡು ಬಂದಿದ್ದೇನೆ’ಎಂದು ನಿರ್ವಾಹಕ ನಾಗರಾಜ ತಿಡಗುಂದಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.