ADVERTISEMENT

ಬಿಜೆಪಿಗೆ ಪಾಠ ಕಲಿಸಲು ಉಪಚುನಾವಣೆ ಉತ್ತಮ ಅವಕಾಶ: ಡಿ.ಕೆ.ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 14:56 IST
Last Updated 16 ಅಕ್ಟೋಬರ್ 2021, 14:56 IST
ಸಿಂದಗಿ ಉಪಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಮುಖಂಡರು
ಸಿಂದಗಿ ಉಪಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಮುಖಂಡರು   

ವಿಜಯಪುರ: ಬೆಲೆ ಏರಿಕೆ ಬಿಸಿ ಎಲ್ಲ ವರ್ಗದವರಿಗೆ ತಟ್ಟಿದೆ. ಮತದಾರರಿಗೆ ತಮ್ಮ ನೊವು ತೋರಿಸಿಕೊಳ್ಳಲು, ಬಿಜೆಪಿಗೆ ಪಾಠ ಕಲಿಸಲು ಸಿಂದಗಿ, ಹಾನಗಲ್‌ ವಿಧಾನಸಭಾ ಉಪ ಚುನಾವಣೆ ಉತ್ತಮ ಅವಕಾಶ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು.

ಸಿಂದಗಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ. ಯಾರಿಗೂ ನೆಮ್ಮದಿ ಇಲ್ಲ. ಬಿಜೆಪಿ ವಿರುದ್ಧ ವೋಟ್‌ ಹಾಕುವ ಮೂಲಕ ಕಾಂಗ್ರೆಸ್‌ ಅಭ್ಯರ್ಥಿ ಬೆಂಬಲಿಸುವ ಮೂಲಕ ತಮ್ಮ ನೋವು ಹೊರಹಾಕಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿಂದಗಿ, ಹಾನಗಲ್‌ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪರ ಅಲೆ ಇದೆ. ಪ್ರಚಾರ, ಮತಯಾಚನೆ ಉತ್ತಮವಾಗಿ ನಡೆದಿದೆ. ಕ್ಷೇತ್ರಗಳಲ್ಲಿ ಬಹಳ ಉತ್ಸಾಹ ಕಾಣಿಸುತ್ತಿದೆ. ಅವಶ್ಯಕತೆ ಇದ್ದರೆ ಚುನಾವಣೆ ಮುಗಿಯುವವರೆಗೂ ಸಿಂದಗಿಯಲ್ಲೇ ಇರುತ್ತೇನೆ ಎಂದರು.

ADVERTISEMENT

ಈಗಾಗಲೇ ಅನೈತಿಕ ಪೊಲೀಸ್‌ ಗಿರಿಗೆ ಮುಖ್ಯಮಂತ್ರಿ ಬೆಂಬಲ ನೀಡಿರುವುದು ಅವಮಾನಕಾರಿ ವಿಷಯ. ಮುಖ್ಯಮಂತ್ರಿ ತಕ್ಷಣ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಮುಸ್ಲಿಂ ಮುಖಂಡರನ್ನು ರಾಜಕೀಯವಾಗಿ ಮುಗಿಸುತ್ತಿದ್ದಾರೆ ಎಂಬ ಎಚ್‌.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಮಾಜಕ್ಕೆ ಶಕ್ತಿ ತುಂಬುವ ಕೆಲಸ ನಮ್ಮ ಪಕ್ಷದ ನಾಯಕರು ಮಾಡುತ್ತಿದ್ದಾರೆ. ಅವರ ಹೇಳಿಕೆ ರಾಜಕಾರಣದ ಹೇಳಿಕೆಯೇ ಹೊರತು ವಾಸ್ತವದ ಹೇಳಿಕೆಯಲ್ಲ ಎಂದರು.

ಅಮಾನತುಗೊಳಿಸಿ:

ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಬೇಕು ಎಂಬ ಬಿಜೆಪಿ ಶಾಸಕ ಶಿವರಾಜ ಪಾಟೀಲ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಅವರು, ಬಿಜೆಪಿಗೆ ಅಖಂಡ ಕರ್ನಾಟಕದ ಬಗ್ಗೆ ನಂಬಿಕೆ ಇದ್ದರೆ ತಕ್ಷಣ ಅವರನ್ನು ಪಕ್ಷದಿಂದ ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ ಅಭ್ಯರ್ಥಿ ಅಶೋಕ ಮನಗೂಳಿ, ಕಾರ್ಯಾಧ್ಯಕ್ಷ ಧೃವನಾರಾಯಣ, ಶಾಸಕರಾದ ಎಂ.ಬಿ. ಪಾಟೀಲ್, ಯಶವಂತರಾಯಗೌಡ ಪಾಟೀಲ್, ಆನಂದ ನ್ಯಾಮಗೌಡ, ಅಜಯ್ ಸಿಂಗ್, ಶರಣಬಸಪ್ಪ ದರ್ಶನಾಪುರ, ಮಾಜಿ ಶಾಸಕ ಶರಣಪ್ಪ ಸುಣ್ಣಗಾರ, ಎಸ್. ರವಿ, ಪ್ರಕಾಶ್ ರಾಥೋಡ್, ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮಿಗಾ, ವಿಜಯಪುರ ಜಿಲ್ಲಾಧ್ಯಕ್ಷ ರಾಜು ಅಲಗೂರ, ಸಿಂದಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠಲ ಕೋಳೂರು, ಅಲಮೇಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ದೇವರಮನಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.