
ಗೋವಿಂದ ಕಾರಜೋಳ
ವಿಜಯಪುರ: ‘ಮಹಾತ್ಮ ಗಾಂಧಿ ಹೆಸರಲ್ಲಿ ಭ್ರಷ್ಟಾಚಾರ ನಡೆಯಬಾರದು ಎಂಬ ಕಾರಣಕ್ಕೆ ಮನರೇಗಾ ಹೆಸರು ಬದಲಾವಣೆ ಮಾಡಲಾಗಿದೆ. ಮನರೇಗಾವನ್ನು ವಿಬಿ ಜಿ ರಾಮ್ ಜಿ ಎಂದು ಬದಲಾವಣೆ ಮಾಡಿರುವುದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ’ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ‘ನರೇಗಾದಲ್ಲಿದ್ದ ಗಾಂಧಿ ಹೆಸರು ತೆಗೆದು ಕೇಂದ್ರ ಸರ್ಕಾರವು ಪ್ರಧಾನಿ ಮೋದಿ ಹೆಸರು ಇಟ್ಟಿಲ್ಲ ಅಥವಾ ಅವರ ಕುಟುಂಬದವರ ಹೆಸರು ಇಟ್ಟಿಲ್ಲ. ಅಷ್ಟಕ್ಕೂ ಕಾಂಗ್ರೆಸ್ಗೆ ರಾಮನ ಬಗ್ಗೆ ಅಲರ್ಜಿ ಏಕೆ’ ಎಂದು ಪ್ರಶ್ನಿಸಿದರು.
‘ಕಾಂಗ್ರೆಸ್ ಆರೋಪಿಸುತ್ತಿರುವಂತೆ ನೂತನ ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ ಗ್ರಾಮ ಪಂಚಾಯಿತಿಗಳು ಯಾವುದೇ ಯೋಜನೆ ಕೈಗೊಳ್ಳುವಂತಿಲ್ಲ ಎಂಬುದು ಸುಳ್ಳು. ಗ್ರಾಮ ಪಂಚಾಯಿತಿಗಳೇ ತಮಗೆ ಬೇಕಾದ ಯೋಜನೆಗಳನ್ನು ರೂಪಿಸಲು ಅವಕಾಶ ಕಲ್ಪಿಸಲಾಗಿದೆ, ಹೆಚ್ಚಿನ ಅನುದಾನವನ್ನು ಒದಗಿಸಲಾಗಿದೆ, 125 ದಿನ ಕೆಲಸ ನೀಡಲಾಗುತ್ತಿದೆ, ಕೂಲಿಯನ್ನು ಹೆಚ್ಚಿಸಲಾಗಿದೆ’ ಎಂದು ಸಮರ್ಥಿಸಿದರು.
‘ಎನ್ಆರ್ಇಜಿಗೆ ಮೊದಲು ಜವಾಹರ ರೋಜ್ಗಾರ್ ಯೋಜನೆ ಎಂದು ಹೆಸರಿಡಲಾಗಿತ್ತು. ಬಳಿಕ ಮಹಾತ್ಮ ಗಾಂಧಿ ಹೆಸರು ಇಡಲಾಗಿದೆ. 60 ವರ್ಷಗಳ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಮಹಾತ್ಮ ಗಾಂಧಿ ಕಳೆದುಹೋಗಿದ್ದರು. ಎಲ್ಲಿಯೂ ಗಾಂಧೀಜಿ ಇರಲಿಲ್ಲ’ ಎಂದು ಟೀಕಿಸಿದರು.
‘ಗ್ರಾಮ ಸ್ವರಾಜ್ಯ ಮಹಾತ್ಮ ಗಾಂಧೀಜಿಯವರ ಕನಸಾಗಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವು ರಾಜ್ಯದ ಪ್ರತಿ ಗ್ರಾಮದಲ್ಲಿ ಮದ್ಯದ ಅಂಗಡಿ ತೆರೆಯುವ ಮೂಲಕ ಗಾಂಧೀಜಿ ಕನಸಿಗೆ ಕೊಳ್ಳಿ ಇಟ್ಟಿದೆ’ ಎಂದು ಆರೋಪಿಸಿದರು.
ಅನ್ಯಾಯವಾಗಿಲ್ಲ:
‘16ನೇ ಹಣಕಾಸು ಆಯೋಗವು ರಾಜ್ಯ ಸರ್ಕಾರದ ಎಲ್ಲ ಶಿಫಾರಸುಗಳನ್ನು ಯಥಾವತ್ತಾಗಿ ಒಪ್ಪಿಕೊಂಡಿದೆ. ತೆರಿಗೆ ಪಾಲು ಹಂಚಿಕೆಯಲ್ಲಿ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಯಾವುದೇ ಅನ್ಯಾಯ ಮಾಡಿಲ್ಲ’ ಎಂದು ಹೇಳಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಗೆ, ಗುಬ್ಬಿ ಲೆಕ್ಕ ಹೇಳಿದರೆ ಸಾಲದು, ಮುಖ್ಯಮಂತ್ರಿಯಾಗಿ 7.6 ವರ್ಷವಾದರೂ ಇದುವರೆಗೂ ಒಂದೇ ಒಂದು ಜಿಎಸ್ಟಿ ಸಭೆಗೆ ಹೋಗಿಲ್ಲ, ಯಾವುದೋ ವಾಲಿಕಾರನ್ನನ್ನು ಜಿಎಸ್ಟಿ ಸಭೆಗೆ ಕಳಿಸಿದರೆ ಸಾಲದು, ಜಿಎಸ್ಟಿ ಕೌನ್ಸಿಲ್ ಸಭೆಗೆ ಖುದ್ದು ಹೋಗಿ ರಾಜ್ಯದ ಪ್ರಸ್ತಾವಗಳನ್ನು ಪ್ರೊಸಿಡಿಂಗ್ಸ್ ಮಾಡಿಸಬೇಕು’ ಎಂದು ಹೇಳಿದರು.
‘ಕೇಂದ್ರ ಬಜೆಟ್ ಬಗ್ಗೆ ವಿಶ್ಲೇಷಣೆ ಮಾಡುವ ಬದಲು ಕೇವಲ ರಾಜ್ಯಕ್ಕೆ ಚೊಂಬು ಕೊಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿರುವುದು ಸರಿಯಲ್ಲ. ಈ ರೀತಿ ರಸ್ತೆ ಮೇಲೆ ಹೇಳಿಕೊಂಡು ತಿರುಗಾಡಿದರೆ ಉಪಯೋಗವಿಲ್ಲ’ ಎಂದು ತಿರುಗೇಟು ನೀಡಿದರು.
‘ಕೇಂದ್ರ ಬಜೆಟ್ನಲ್ಲಿ ಕರ್ನಾಟಕ ಸೇರಿದಂತೆ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗಿಲ್ಲ.ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳಿಗೆ ತಾರತಮ್ಯ ಮಾಡಿಲ್ಲ’ ಎಂದರು.
‘ಗ್ರಾಮೀಣ ಉದ್ಯೋಗ ಸೃಷ್ಟಿ ಮತ್ತು ದೇಶದ ಆರ್ಥಿಕತೆಗೆ ಮಹತ್ವ ಕೊಟ್ಟ ಬಜೆಟ್ ಆಗಿದೆ, ಸಬ್ ಕಾ ಸಾತ್, ಸಬ್ ಕಾ ವಿಕಾಸ್ ಧ್ಯೇಯದೊಂದಿಗೆ ಬಜೆಟ್ ಮಂಡಿಸಲಾಗಿದೆ. ದೀರ್ಘ ಕಾಲದ ಭದ್ರತೆ, ಸ್ಥಿರತೆ ಇರುವ ಬಜೆಟ್ ಇದಾಗಿದೆ’ ಎಂದು ವಿಶ್ಲೇಷಿಸಿದರು.
‘ಯುನೆಸ್ಕೋ ಪಟ್ಟಿಗೆ ಗೋಳಗುಮ್ಮಟ ಸೇರದೇ ಇರುವುದಕ್ಕೆ ಹಲವು ಕಾರಣಗಳಿವೆ. ಯುನೆಸ್ಕೋ ಪಟ್ಟಿಗೆ ಸೇರ್ಪಡೆಯಾಗಬೇಕಾದರೆ ಕೆಲವು ನೀತಿ, ನಿರ್ಬಂಧಗಳಿವೆ. ಅವುಗಳನ್ನು ರಾಜ್ಯ ಸರ್ಕಾರ ಈಡೇರಿಸಿದರೆ ಗೋಳಗುಮ್ಮಟ ಯುನೆಸ್ಕೋ ಪಟ್ಟಿ ಸೇರ್ಪಡೆ ಮಾಡಲು ಅನುಕೂಲವಾಗಲಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತರುತ್ತೇನೆ’ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ, ಮುಖಂಡರಾದ ವಿಜುಗೌಡ ಪಾಟೀಲ, ರವೀಂದ್ರ ಲೋಣಿ, ವಿಜು ಜೋಶಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.