ADVERTISEMENT

ಕೊಲ್ಹಾರ: ಕೇಂದ್ರ ಜಲಶಕ್ತಿ ತಂಡ ಭೇಟಿ, ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2023, 12:54 IST
Last Updated 15 ಜೂನ್ 2023, 12:54 IST
ಕೇಂದ್ರ ಜಲಶಕ್ತಿ ತಂಡವು ಕೊಲ್ಹಾರ ತಾಲ್ಲೂಕಿನಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿತು.
ಕೇಂದ್ರ ಜಲಶಕ್ತಿ ತಂಡವು ಕೊಲ್ಹಾರ ತಾಲ್ಲೂಕಿನಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿತು.   

ಕೊಲ್ಹಾರ: ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ವತಿಯಿಂದ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಜಲಶಕ್ತಿ ಕಾರ್ಯಕ್ರಮದಡಿ ತಾಲ್ಲೂಕಿನಲ್ಲಿ ಕೈಗೊಂಡಿರುವ ವಿವಿಧ ನೈಸರ್ಗಿಕ ಸಂಪನ್ಮೂಲಗಳ ರಕ್ಷಣಾ ಕಾಮಗಾರಿ ಸ್ಥಳಗಳಿಗೆ ಸೋಮವಾರ ಕೇಂದ್ರ ಗಣಿ ಸಚಿವಾಲಯದ ನಿರ್ದೇಶಕ ವಿವೇಕ ಕುಮಾರ್ ಶರ್ಮಾ ಹಾಗೂ ತಾಂತ್ರಿಕ ಅಧಿಕಾರಿ ಆಯುಷ್ ಕೆಸರವಾಣಿ ಅವರನ್ನು ಒಳಗೊಂಡ ಕೇಂದ್ರ ಜಲಶಕ್ತಿ ತಂಡ ಭೇಟಿ ಮಾಡಿ ಪರಿಶೀಲನೆ ನಡೆಸಿತು.

ತಂಡವು ಮೊದಲು ಪಟ್ಟಣದ ಪ್ರವಾಸಿಮಂದಿರ ಆವರಣದಲ್ಲಿರುವ ಅಂತರ್ಜಲ ಮಟ್ಟ ಅಳೆಯುವ ಕೇಂದ್ರ ವೀಕ್ಷಿಸಿ ಪ್ರಸ್ತುತ ಭೂಮಿಯ ತಳಭಾಗದ ನೀರಿನ ಪ್ರಮಾಣ ಪರಿಶೀಲಿಸಿದರು.

ನಂತರ ರೋಣಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಅಮೃತ ಸರೋವರ ಕಾಮಗಾರಿ, ಅರಣ್ಯದಲ್ಲಿ ಕಂದಕಗಳ ನಿರ್ಮಾಣ ಸೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿರ್ಮಿಸಿರುವ ಮಳೆ ನೀರಿನ ಕೊಯ್ಲು ವೀಕ್ಷಿಸಿದರು. ಮುಳವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ನರೇಗಾ ಯೋಜನೆಯಡಿ ಅನುಷ್ಠಾನಗೊಂಡಿರುವ ದ್ರಾಕ್ಷಿ ಬೆಳೆ ಸ್ಥಳವನ್ನು ಪರಿಶೀಲಿಸಿದರು.

ADVERTISEMENT

ಈ ವೇಳೆ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ವಿಜಯಕುಮಾರ ಆಜೂರ, ಸಹಾಯಕ ಯೋಜನಾಧಿಕಾರಿ ಅರುಣ್ ಕುಮಾರ್ ದಳವಾಯಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಫ್. ಎಚ್ ಪಠಾಣ, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ (ನರೇಗಾ) ವಿ.ಎಸ್. ಹಿರೇಮಠ, ಹಿರಿಯ ಭೂ ವಿಜ್ಞಾನಿಗಳಾದ ಮಹೇಶ್ ಬೀರಜನವರ್, ಸಂತೋಷ ಚೌಗಲೆ, ತೋಟಗಾರಿಕೆ ಅಧಿಕಾರಿಗಳಾದ ಸಿದ್ದರಾಮಯ್ಯ ಬರಗಿಮಠ, ಸಿ. ಬಿ. ಪಾಟೀಲ್ ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು.

ಕೇಂದ್ರ ಜಲಶಕ್ತಿ ತಂಡವು ಕೊಲ್ಹಾರ ತಾಲ್ಲೂಕಿನಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.