
ಚಡಚಣ: ಸಮೀಪದ ಶ್ರೀ ದತ್ತ ಶುಗರ್ಸ್ ಸಕ್ಕರೆ ಕಾರ್ಖಾನೆಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಹಲವು ಯಂತ್ರೋಪಕರಣಗಳು ಹೊತ್ತಿ ಉರಿದರೆ, ಪಕ್ಕದಲ್ಲಿರುವ ಕಬ್ಬಿನಸಿಪ್ಪೆ ಧಗಧಹಿಸಿ ಉರಿದ ಘಟನೆ ಬುಧವಾರ ಸಂಭವಿಸಿದೆ.
ಮಧ್ಯಾಹ್ನ 2 ಗಂಟೆ ಸುಮಾರಿಗೆ ಕಬ್ಬು ನುರಿಸುವ ಪ್ರಕ್ರೀಯೆ ನಡೆಯುತ್ತಿರುವಾಗ ಸಿಪ್ಪೆ ಸಾಗಿಸುವ ಬೆಲ್ಟ್ನಲ್ಲಿ ಕಿಡಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಕಾರ್ಮಿಕರು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಇದೇ ಸಂದರ್ಭದಲ್ಲಿ ಅದರಲ್ಲಿನ ಕಿಡಿ ಸಿಡಿದು, ಪಕ್ಕದಲ್ಲಿರುವ ಕಬ್ಬಿನ ಸಿಪ್ಪೆಯ ದಿಮ್ಮೆಗೆ ಹೊತ್ತಿದ ಪರಿಣಾಮ ಬೆಂಕಿ ಕಾಡ್ಗಿಚ್ಚಿನಂತೆ ಆವರಸಿಕೊಂಡಿತು.
ಈ ಹಂತದಲ್ಲಿ ನೂರಾರು ಕಾರ್ಮಿಕರು ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಕೂಡಲೇ ಇವರೆಲ್ಲರನ್ನು ಕಾರ್ಖಾನೆಯಿಂದ ಸ್ಥಳಾಂತರಿಸಿದ್ದರಿಂದ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಯಂತ್ರೋಪಕರಣಗಳಿಗೆ ಹೊತ್ತಿಕೊಂಡ ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದರೆ. ಕಬ್ಬಿನ ಸಿಪ್ಪೆಯ ದಿಮ್ಮೆಗೆ ಹೊತ್ತಿಕೊಂಡ ಬೆಂಕಿಯ ಕೆನ್ನಾಲಿಗೆ ನಂದಿಸಲು ತಡರಾತ್ರಿಯವರೆಗೂ ಪ್ರಯತ್ನಿಸುತ್ತಿದ್ದರು.
ಘಟನೆಯಲ್ಲಿ ಕಬ್ಬು ಸಾಗಿಸುವ ಬೆಲ್ಟ್ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಬಾಯ್ಲರ್ ವ್ಯವಸ್ಥೆಗೆ ಅಲ್ಪ ಪ್ರಮಾಣದ ಹಾನಿ ಉಂಟಾಗಿದೆ. ಕೇಬಲ್ ವ್ಯವಸ್ಥೆ ಸಂಪೂರ್ಣ ಸುಟ್ಟು ಹೋಗಿದೆ. ಘಟನೆಯಲ್ಲಿ ಅಂದಾಜು ₹4–5 ಕೋಟಿ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ತಾಲ್ಲೂಕು ದಂಡಾಧಿಕಾರಿ ಸಂಜಯ ಇಂಗಳೆ, ಆಹಾರ ನಿರೀಕ್ಷಕ ಶಿವಾನಂದ ಕೋಳಿ, ಕಾರ್ಖಾನೆ ಆಡಳಿತ ಮಂಡಳಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.