ವಿಜಯಪುರ: ಮಾಜಿ ಶಾಸಕ, ಕಾಂಗ್ರೆಸ್ನ ಹಿರಿಯ ಮುಖಂಡ ಆರ್.ಆರ್.ಕಲ್ಲೂರ (92) ಗುರುವಾರ ನಿಧನರಾದರು. ಅವರಿಗೆ ಪತ್ನಿ ಮತ್ತು ಇಬ್ಬರು ದತ್ತು ಪುತ್ರರು ಇದ್ದಾರೆ. ಇಲ್ಲಿನ ಇಂಡಿ ರಸ್ತೆಯಲ್ಲಿರುವ ಅವರದೇ ಆದ ಬಿ.ಇಡಿ ಮಹಾವಿದ್ಯಾಲಯದ ಆವರಣದಲ್ಲಿ ಅಂತ್ಯಕ್ರಿಯೆ ನಡೆಯಿತು.
ಇಂಡಿ ತಾಲ್ಲೂಕಿನ ಹಿರೇಮಸಳಿ ಗ್ರಾಮದವರಾಗಿದ್ದ ಇವರು 1978, 1983 ಮತ್ತು 1989ರಲ್ಲಿ ಇಂಡಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.
1983ರಲ್ಲಿ ಬರಗಾಲ ಬಿದ್ದಾಗ ಕ್ಷೇತ್ರದ ರೈತರ ಬಾವಿಗಳಿಗೆ ಉಚಿತ ವಿದ್ಯುತ್ ಮತ್ತು ಪಂಪ್ಸೆಟ್ ನೀಡಲು ಆಗಿನ ಮುಖ್ಯಮಂತ್ರಿ ಗುಂಡೂರಾವ್ ಅವರನ್ನು ಆಗ್ರಹಿಸಿ, ಹೆಚ್ಚು ರೈತರಿಗೆ ಮಂಜೂರು ಮಾಡಿಸಿಕೊಟ್ಟಿದ್ದರು. ಹೀಗಾಗಿ ಇಂದಿಗೂ ರಾಜ್ಯದಲ್ಲಿಯೇ ಅತೀ ಹೆಚ್ಚು ತೆರೆದ ಬಾವಿಗಳಿರುವ ಕ್ಷೇತ್ರ ಎಂದರೆ ಅದು ಇಂಡಿ ತಾಲ್ಲೂಕಾಗಿದೆ.
ಶಾಸಕರಾಗಿದ್ದ ಅವಧಿಯಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರನ್ನು ಇಂಡಿ ಪಟ್ಟಣಕ್ಕೆ ಕರೆಯಿಸಿ, ಬೆಳ್ಳಿ ಪಂಪ್ ಸೆಟ್ ನೀಡಿ ಗೌರವಿಸಿದ್ದರು. ಇಂಡಿಗೆ ಭೀಮಾ ನದಿಯಿಂದ ಕುಡಿಯುವ ನೀರು ತರುವ ಯೋಜನೆ ರೂವಾರಿ ಆಗಿದ್ದರು. ಕರ್ನಾಟಕ ಭೂಸೇನಾ ನಿಗಮದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.