ಹೊರ್ತಿ: ‘ರೈತರಿಗೆ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಗಳು ಸಕಾಲಕ್ಕೆ ಸಾಲ ನೀಡುವ ಮೂಲಕ ರೈತ ಸ್ನೇಹಿಯಾಗಿ ಕಾರ್ಯ ನಿರ್ವಹಿಸುತ್ತಿವೆ’ ಎಂದು ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಶನಿವಾರ ಸಮೀಪದ ಬಸನಾಳ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ದಿ. ಪಾಂಡುರಂಗ ದೇಸಾಯಿ 1919ರಲ್ಲಿ ಡಿ.ಸಿ.ಸಿ. ಬ್ಯಾಂಕ್ ಆರಂಭ ಮಾಡಿದ್ದು, ಅದು ಇಂದು ಹೆಮ್ಮರವಾಗಿ ಬೆಳೆದಿದೆ. ಪಿಕೆಪಿಎಸ್ ಸಂಘಗಳು ಸ್ವ-ಸಹಾಯ ಗುಂಪುಗಳಿಗೆ ಹಾಗೂ ರೈತರಿಗೆ ಬಡ್ಡಿ ರಹಿತ ಸಾಲ ನೀಡುತ್ತಿದ್ದು ಇದರ ಸದುಪಯೋಗ ಪಡೆದು ಆರ್ಥಿಕವಾಗಿ ಸಬಲರಾಗಬೇಕು’ ಎಂದು ಹೇಳಿದರು.
ನಾಗಠಾಣ ಶಾಸಕ ವಿಠಲ ಕಟಕದೊಂಡ ಮಾತನಾಡಿ, ‘ಈ ನಾಡಿನಲ್ಲಿ ರಾಜಕಾರಣಿ, ಅಧಿಕಾರಿಗಳು ಕೆಲಸ ನಿಲ್ಲಿಸಿದರೆ ಏನೂ ತೊಂದರೆ ಆಗದು. ಆದರೆ ರೈತ ದುಡಿಯದಿದ್ದರೇ ದೇಶ ಹಸಿವಿನಿಂದ ಬಳಲುತ್ತದೆ. ನಾವು ಬದುಕಲೂ ಸಾಧ್ಯವಿಲ್ಲ’ ಎಂದು ಹೇಳಿದರು.
ಬಸನಾಳ ಪಿ.ಕೆ.ಪಿ.ಎಸ್ ಅಧ್ಯಕ್ಷ ಕಲಗೊಂಡ (ಅಪ್ಪುಗೌಡ)ಪ. ಸಾವುಕಾರ, ಉಪಾಧ್ಯಕ್ಷ ಸಿದ್ದಯ್ಯ ಗು.ಹಿರೇಮಠ, ಪಿಕೆಪಿಎಸ್ ಸಿಇಒ ಸಂತೋಷಕುಮಾರ ಶ. ಕಲ್ಮನಿ, ವಿ.ಡಿ.ಸಿ.ಸಿ. ಬ್ಯಾಂಕ್ ಉಪಾಧ್ಯಕ್ಷ ಆರ್.ಬಿ. ಗುಡದಿನ್ನಿ, ಕಾಂಗ್ರೆಸ್ ಮುಖಂಡ ಎಂ.ಆರ್.ಪಾಟೀಲ, ಬಸನಾಳ ಗ್ರಾಮ ಪಂಚಾಯತಿ ಅಧ್ಯಕ್ಷ ಮಲ್ಲಪ್ಪ ಶಿ. ಬಗಲಿ, ಉಪಾಧ್ಯಕ್ಷೆ ತಿಪ್ಪವ್ವ ಜಿಗಜಿಣಗಿ, ಅಣ್ಣಪ್ಪ ಖೈನೂರ, ಶ್ರೀಮಂತ ಇಂಡಿ, ಅರವಿಂದ ಪೂಜಾರಿ, ಬಾಬು ಚ.ಉಮದಿ ಸಂತೋಷ ರೇವತಗಾಂವ, ಸುರೇಶ ರೇವತಗಾಂವ ಹಾಗೂ ಬಸನಾಳ, ಅಗಸನಾಳ, ಕೊಟ್ನಾಳ, ಕ್ಯಾತನಕೇರಿ ಗ್ರಾಮದ ರೈತರು ಇದ್ದರು. ಬಾಬು ಉಮದಿ ಸ್ವಾಗತಿಸಿದರು. ಸಂತೋಷ ರೇವತಗಾಂವ ಕಾರ್ಯಕ್ರಮ ನಿರೂಪಿಸಿದರು. ಸುರೇಶ ರೇವತಗಾಂವ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.