
ಇಂಡಿ: ನಾದ ಕೆ.ಡಿ. ಗ್ರಾಮ ಪಂಚಾಯಿತಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಅಪ್ನಾ ದೇಶ್– ಅಪ್ನಾ ಗ್ರಾಮ್ ಸಂಘಟನೆ ಮತ್ತು ರೈತರು, ಗ್ರಾಮಸ್ಥರು ಪಂಚಾಯಿತಿ ಕಾರ್ಯಾಲಯದ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಹಸಿರು ಸೇನೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ‘ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟ 2020–25ನೇ ಸಾಲಿನ ಆಯವ್ಯಯ ಪಟ್ಟಿಯನ್ನು ನೀಡಬೇಕು. ₹7 ಕೋಟಿಗೂ ಹೆಚ್ಚು ಮೊತ್ತದ ಅಕ್ರಮ ನಡೆದಿದೆ ಎಂಬ ಆರೋಪ ಇದೆ. ಈ ಕುರಿತು ಮಾಹಿತಿ ನೀಡಬೇಕು’ ಎಂದರು.
ಅಪ್ನಾ ದೇಶ್– ಅಪ್ನಾ ಗ್ರಾಮ್ ಸಂಘಟನೆಯ ಜಿಲ್ಲಾಧ್ಯಕ್ಷ ರವೀಂದ್ರ ಬೆಳ್ಳಿ ಮಾತನಾಡಿ, ‘ಗ್ರಾಮಗಳು ಅಭಿವೃದ್ಧಿ ಆಗಬೇಕಾದರೆ ಪಿಡಿಒ ಹಾಗೂ ಜನಪ್ರತಿನಿಧಿಗಳ ಕೆಲಸ ಪ್ರಮುಖ’ ಎಂದರು.
ರೈತ ಮುಖಂಡರಾದ ಎಸ್.ಟಿ. ಪಾಟೀಲ್ ಮಾತನಾಡಿ, ‘ಭ್ರಷ್ಟಾಚಾರ ನಿರ್ಮೂಲನೆ ಮಾಡಬೇಕಾದರೆ ಗ್ರಾಮದ ಪ್ರತಿಯೊಬ್ಬರ ಸಮ್ಮುಖದಲ್ಲಿ ಗ್ರಾಮಸಭೆ ಮಾಡಿ ಗ್ರಾಮದ ಅಭಿವೃದ್ಧಿಗಾಗಿ ಪಕ್ಷಾತೀತವಾಗಿ, ಜಾತ್ಯತೀತವಾಗಿ ಹಾಗೂ ಪಾರದರ್ಶಕವಾಗಿ ಕೆಲಸ ಮಾಡಬೇಕು’ ಎಂದು ಆಗ್ರಹಿಸಿದರು.
ತಾಲ್ಲೂಕು ಪಂಚಾಯಿತಿ ಇಒ ಬಿ.ಎಸ್. ಕನ್ನೂರ ಅವರು ಪಿಡಿಒ ಸುರೇಶ ಲೋಣಿ ಅವರನ್ನು ತರಾಟೆಗೆ ತೆಗೆದುಕೊಂಡರು. ‘ಗ್ರಾಮಸ್ಥರ ಬೇಡಿಕೆ ನ್ಯಾಯಸಮ್ಮತವಾಗಿದೆ. ಅವರಿಗೆ ಪಾರದರ್ಶಕವಾಗಿ ಮೂರು ದಿನಗಳಲ್ಲಿ ಮಾಹಿತಿ ಕೊಡಬೇಕು ಹಾಗೂ ಮೂಲಸೌಕರ್ಯಗಳನ್ನು ಒದಗಿಸಬೇಕು’ ಎಂದು ಸೂಚಿಸಿದರು.
ಶಿವಾನಂದ ಶಿವಾಚಾರ್ಯ, ಬಿ.ಕೆ. ಪಾಟೀಲ್, ಸುನೀಲ ನಾರಾಯಣಕರ, ಸಿದ್ದರಾಮ ಹಳ್ಳೂರ, ರಫಿಕ ವಾಲಿಕಾರ, ಕನ್ನಪ್ಪ ನಾದ, ಸಾಬ್ ಮುಲ್ಲಾ, ಶರಭಯ್ಯ ಹಿರೇಮಠ, ರಾಯಪ್ಪ ಗಡೆಕಾರ, ಕನ್ನಪ್ಪ ತೇಲಿ, ಶಿವಣ್ಣ ಗುಂಜಟ್ಟಿ, ಸಾಹೇಬಗೌಡ ಪಾಟೀಲ್, ಮಲ್ಲಪ್ಪ ಒಡೆಯರ, ವಿಠೋಭ ಕಣದಳ, ಶಂಕ್ರಪ್ಪ ಜಿದ್ದಿಮನಿ, ಅಸಿಫ್ ಗೊನ್ನಾಳಗಿ, ಭೀಮಶಾ ತೇಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.