
ವಿಜಯಪುರ: ಕೋಲ್ಹಾರ ತಾಲ್ಲೂಕಿನ ಮಟ್ಟಿಹಾಳ ಗ್ರಾಮದಲ್ಲಿ ದಲಿತ ಕುಟುಂಬಗಳು ವಾಸವಿದ್ದ ಶೆಡ್ ಗಳನ್ನು ತೆರವುಗೊಳಿಸಿರುವುದನ್ನು ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ವಿಜಯಪುರ ಜಿಲ್ಲಾ ಘಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ, ಅಪರ ಜಿಲ್ಲಾಧಿಕಾರಿ ಔದ್ರಾಮ್ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ಬೆಳಗಾವಿ ವಿಭಾಗಿಯ ಸಚಾಲಕ ಸಂಜು ಕಂಬಾಗಿ ಮಾತನಾಡಿ, ವಿಜಯಪುರ ಜಿಲ್ಲೆ ಕೋಲ್ಹಾರ ತಾಲ್ಲೂಕಿನ ಮಟ್ಟಿಹಾಳದಲ್ಲಿ 12 ದಲಿತ ಕುಟುಂಬಗಳನ್ನು ಅಲ್ಲಿಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಪ್ರಭಾರಿ ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆಯವರು ನೋಟಿಸ್ ನೀಡದೆ ಶೆಡ್ಗಳನ್ನು ಜೆ.ಸಿ.ಬಿ. ಮೂಲಕ ತೆರವುಗೊಳಿಸಿದ್ದು, ಇದರಿಂದ ಅಲ್ಲಿರುವ ದಲಿತ ಕುಟುಂಬಗಳು ಬೀದಿಯಲ್ಲಿ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಅದೇ ಜಾಗದಲ್ಲಿ ಸುಮಾರು 12-13 ದಿನಗಳಿಂದ ದಲಿತ ಕುಟುಂಬಗಳು ಬೀದಿಯಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡರೂ ಯಾವುದೇ ಅಧಿಕಾರಿಗಳಾಗಲಿ, ರಾಜಕಾರಣಿಗಳಾಗಲಿ ಬಂದಿಲ್ಲ. ದಲಿತರ ಗೋಳು ಕೇಳುವವರು ಯಾರು ಇಲ್ಲದಂತಾಗಿದೆ. ಬೀದಿ ಪಾಲಾಗಿರುವ ದಲಿತ ಕುಟುಂಬಗಳಿಗೆ ಮತ್ತೆ ಅದೇ ಜಾಗದಲ್ಲಿ ಶೆಡ್ ಗಳನ್ನು ನಿರ್ಮಿಸಿಕೊಡಬೇಕು ಹಾಗೂ ಶೆಡ್ ತೆರವುಗೊಳಿಸಿದ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮಜರುಗಿಸಬೇಕೆಂದು ಒತ್ತಾಯಿಸಿದರು.
ರಾಜ್ಯ ಸಂಘಟನಾ ಸಂಚಾಲಕಿ ಪ್ರತಿಭಾ ಹೊಸಮನಿ, ಚೇತನ್ ತೂರವಿ, ಬೀಮು ಉತ್ತನಾಳ, ಸವಿತಾ ವಗ್ಗರ್, ಮಹಾಂತೇಶ ರಾಠೋಡ, ವಿಜಯ ಮೇತ್ರಿ, ದಿಲೀಪ್ ರಣದೇವಿ, ಶಂಕರ್ ಚಲವಾದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.