ADVERTISEMENT

ಶರಣ ಸಾಹಿತ್ಯದ ಕೊಡುಗೆ ಅಪಾರ

ದತ್ತಿ ಕಾರ್ಯಕ್ರಮದಲ್ಲಿ ದಾಕ್ಷಾಯಿಣಿ ಬಿರಾದಾರ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 15:25 IST
Last Updated 14 ಮಾರ್ಚ್ 2020, 15:25 IST
ವಿಜಯಪುರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ದತ್ತಿ ಕಾರ್ಯಕ್ರಮವನ್ನು ದಾಕ್ಷಾಯಿಣಿ ಬಿರಾದಾರ ಉದ್ಘಾಟಿಸಿದರು
ವಿಜಯಪುರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ದತ್ತಿ ಕಾರ್ಯಕ್ರಮವನ್ನು ದಾಕ್ಷಾಯಿಣಿ ಬಿರಾದಾರ ಉದ್ಘಾಟಿಸಿದರು   

ವಿಜಯಪುರ: ‘ಶರಣ ಸಾಹಿತ್ಯವು ವಿಶ್ವ ಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆ ನೀಡಿದೆ. ವಿಶ್ವ ಸಾಹಿತ್ಯಕ್ಕೆ ವಚನ ಸಾಹಿತ್ಯ ಮಾದರಿಯಾಗಿದೆ’ ಎಂದು ದಾಕ್ಷಾಯಿಣಿ ಬಿರಾದಾರ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಲಿಂ. ಗಂಗಾಧರ ಕೋರಳ್ಳಿ, ಲಿಂ. ಮಲ್ಲಪ್ಪ ಯಲಗೋಡ, ಲಿಂ. ವೆಂಕಟೇಶ ನರಹರಿಕಟ್ಟಿ ಸ್ಮರಣಾರ್ಥ ದತ್ತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನೇರ, ನಿಷ್ಠುರ ನಡೆ ನುಡಿಗಳಿಂದ ಶರಣ ಸಮುದಾಯದಲ್ಲೇ ಹೆಸರಾದವರು ನಿಜಶರಣ ಅಂಬಿಗರ ಚೌಡಯ್ಯನವರು. ಅವರ ವಚನಗಳೆಂದರೆ ಬೆಂಕಿಯ ಕಿಡಿಗಳಿದ್ದಂತೆ. ತಾತ್ವಿಕವಾಗಿ ನಿಷ್ಠುರವಾಗಿದ್ದ ಶರಣರು ಬಸವಣ್ಣನವರ ಸಂಪೂರ್ಣ ಅನುಯಾಯಿಯಾಗಿದ್ದರು’ ಎಂದು ಹೇಳಿದರು.

ADVERTISEMENT

ಪ್ರೊ.ಶರಣಗೌಡ ಪಾಟೀಲ ಮಾತನಾಡಿ, ‘ಕನ್ನಡ ಭಾಷೆ ಬಹುಪ್ರಾಚೀನಗಳಲ್ಲಿ ಒಂದು. ಆದಿ ಕವಿ ಪಂಪನಿಂದ ಇಂದಿನವರೆಗೆ ಕನ್ನಡದ ಭಾಷೆ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. 9ನೇ ಶತಮಾನದಲ್ಲಿ ನೃಪತುಂಗನ ಆಸ್ಥಾನದಲ್ಲಿ ಕವಿರಾಜಮಾರ್ಗ ಕನ್ನಡದ ಮೇರು ಕೃತಿ ಕವಿಗಳಿಗೆ ಮಾರ್ಗದರ್ಶನ ನೀಡುವ ಕೃತಿಯಾಗಿ ಹೊರಹೊಮ್ಮಿದ್ದನ್ನು ಕಾಣುತ್ತೇವೆ’ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಮಾತನಾಡಿ, ಪ್ರಾಮಾಣಿಕವಾಗಿ ಜನಸಾಮಾನ್ಯರಿಗೆ ಕಲ್ಯಾಣ ಬಯಸುವ ಸಾಹಿತ್ಯ ಹಿಂದಿನಿಂದಲೂ ಬಂದಿರುವುದನ್ನು ನಾವು ಕಾಣುತ್ತೇವೆ. ಅದರಲ್ಲೂ
ವಚನ ಸಾಹಿತ್ಯ ಮತ್ತು ಶರಣರ ಯುಗದಲ್ಲಿ ಸಮಾಜಕ್ಕೆ, ದೇಶಕ್ಕೆ ಮಾದರಿಯಾಗುವ ಹಾಗೂ ಉಪಯುಕ್ತವಾಗುವ ಸಂದೇಶವನ್ನು ಕಾಣುತ್ತೇವೆ’ ಎಂದರು.

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಶೇಷರಾವ ಮಾನೆ, ನಳಂದಾ ಶಾಲೆಯ ಮುಖ್ಯ ಶಿಕ್ಷಕಿ ಮೀನಾಕ್ಷಿ ಉಟಗಿ, ಸಮಾಜ ಸೇವಕಿ ಭಾರತಿ ಬುಯ್ಯಾರ ಮಾತನಾಡಿದರು.

ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಎಸ್.ಎಸ್.ಖಾದ್ರಿಇನಾಮದಾರ, ಪ್ರೊ.ಬಸವರಾಜ ಕುಂಬಾರ, ಭರತೇಶ ಕಲಗೊಂಡ, ಡಾ.ಎಸ್.ಎಸ್.ಅನಂತಪುರ, ರವಿ ಕಿತ್ತೂರ, ಎಸ್.ವೈ.ನಡುವಿನಕೇರಿ, ಗಿರಿಜಾ ಪಾಟೀಲ, ಸುನಂದಾ ಕೋರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.