ವಿಜಯಪುರ:ವಿಜಯಪುರ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಹೊಸ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಮಹಾನಗರ ಪಾಲಿಕೆಯ 15ನೇ ಹಣಕಾಸು ಯೋಜನೆಯಲ್ಲಿ ಮಂಜೂರಾದ ₹ 22.50 ಲಕ್ಷ ಮೊತ್ತದಲ್ಲಿ ವಾರ್ಡ್ ನಂ. 22ರ ಸಾಯಿಪಾರ್ಕ್ನಲ್ಲಿ ಬರುವ ಗುರುದೇವ ನಗರ ಸೆಪ್ಟಿಕ್ ಟ್ಯಾಂಕ್ದಿಂದ ಕೆ.ಎಚ್.ಬಿ ಕಾಲೊನಿ ವರೆಗಿನ ಒಳಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಕೊಳಗೇರಿ ಅಭಿವೃದ್ಧಿ ಮಂಡಳಿ ಕಚೇರಿ, ಹೊಸ ಜಿಲ್ಲಾ ಕ್ರೀಡಾಂಗಣ , ದ್ರಾಕ್ಷಿ ಅಭಿವೃದ್ಧಿ ಮಂಡಳಿ, ವಿವಿಧೆಡೆ ಸ್ಯಾಟಲೈಟ್ ಬಸ್ ನಿಲ್ದಾಣ ನಿರ್ಮಾಣ, ಸರ್ಕಾರಿ ಶಾಲೆಗಳ ನವೀಕರಣ, ಪಾಲಿಕೆಯಿಂದ ಮಳಿಗೆಗಳ ಸಂಕೀರ್ಣ ನಿರ್ಮಿಸಿ, ಪಾಲಿಕೆಗೆ ಆದಾಯ ಹೆಚ್ಚಿಸುವುದು ಮತ್ತು ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸಲಾಗುವುದು ಎಂದರು.
ನಗರದ ಅಲ್ಲಲ್ಲಿ ವಾಕಿಂಗ್ ಟ್ರ್ಯಾಕ್, ಓಪನ್ ಜಿಮ್, ಗಾರ್ಡನ್, ಯೋಗಾ ಪ್ಲಾಟ್ಫಾರ್ಮ, ಮಕ್ಕಳ ಉದ್ಯಾನ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದರು.
ನಗರದಲ್ಲಿ ಅಲ್ಲಲ್ಲಿ ಸಿದ್ಧಸಿರಿ ಸೌಹಾರ್ದ ಸಹಕಾರಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲಾಗಿದ್ದು, ಇನ್ನು ಅಗತ್ಯವಿರುವೆಡೆ ಶುದ್ಧ ಕುಡಿಯುವ ನೀರಿನ ಘಟಕಗಳು ಅಳವಡಿಸಲಾಗುವುದು ಎಂದು ಹೇಳಿದರು.
ನಗರಾಭಿವೃದ್ಧಿ ಪ್ರಾಧಿಕಾರದಿಂದ ಹೊಸ ಬಡಾವಣೆಗಳನ್ನು ನಿರ್ಮಿಸಲಾಗುವುದು, ಕಿತ್ತೂರು ರಾಣಿ ಚನ್ನಮ್ಮ ನಾಟಕ ಮಂದಿರದ ಹೊಸ ಕಟ್ಟಡ, ನಗರದ ವಿವಿಧಡೆ ಗಣ್ಯರ, ಹುತಾತ್ಮರ, ಸ್ವಾತಂತ್ರ್ಯ ಯೋಧರ ವೃತ್ತ ನಿರ್ಮಾಣ ಹಾಗೂ ರಸ್ತೆ ನಾಮಕರಣ ಮಾಡಲಾಗುತ್ತಿದೆ ಎಂದು ತಿಳಿಸಿದರು.
ವಾರ್ಡ್ ನಂ. 35 ರ ಅಥಣಿ ರಸ್ತೆಯ ನಂದಿ ನಗರದಲ್ಲಿ ಮಹಾನಗರ ಪಾಲಿಕೆಯ 15ನೇ ಹಣಕಾಸು ಯೋಜನೆಯಲ್ಲಿ ಮಂಜೂರದ ₹ 37.50 ಲಕ್ಷ ಮೊತ್ತದ ಒಳಚರಂಡಿ ಹಾಗೂ ₹ 35 ಲಕ್ಷ ಮೊತ್ತದ ಆಂತರಿಕ ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಮಹಾ ನಗರ ಪಾಲಿಕೆ ಆಯುಕ್ತ ಶ್ರೀಹರ್ಷ ಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಸದಸ್ಯರಾದ ಲಕ್ಷ್ಮಣ ಜಾಧವ್, ವಿಕ್ರಮ್ ಗಾಯಕವಾಡ, ಪಾಲಿಕೆ ಮಾಜಿ ಸದಸ್ಯ ಪ್ರೇಮಾನಂದ ಬಿರಾದಾರ, ಸಂತೋಷ ದೊಡ್ಡಮನಿ, ಚಂದ್ರು ಚೌಧರಿ,ಪಾಂಡುಸಾಹುಕಾರ ದೊಡ್ಡಮನಿ, ಪ್ರಕಾಶ ಚವ್ಹಾಣ, ಜಿ.ಎಸ್.ತೆಲಗಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.