ADVERTISEMENT

ಕೃಷಿ ಭೂಮಿ ಕೈಗಾರಿಕೆಗೆ ಬೇಡ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 6:47 IST
Last Updated 7 ಡಿಸೆಂಬರ್ 2025, 6:47 IST
ತಿಡಗುಂದಿ ಸಮೀಪ  ಕೃಷಿಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕೆ ಸ್ವಾಧೀನ ಮಾಡಿಕೊಳ್ಳಬಾರದು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರಗೆ ಮನವಿ ಸಲ್ಲಿಸಲಾಯಿತು 
ತಿಡಗುಂದಿ ಸಮೀಪ  ಕೃಷಿಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕೆ ಸ್ವಾಧೀನ ಮಾಡಿಕೊಳ್ಳಬಾರದು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರಗೆ ಮನವಿ ಸಲ್ಲಿಸಲಾಯಿತು    

ವಿಜಯಪುರ: ತಿಡಗುಂದಿ ಸಮೀಪ 1203 ಎಕರೆ ರೈತರ ಫಲವತ್ತಾದ ಕೃಷಿಭೂಮಿಯನ್ನು ಯಾವುದೇ ಕಾರಣಕ್ಕೂ ಕೈಗಾರಿಕಾ ಉದ್ದೇಶಕ್ಕೆ ಸ್ವಾಧೀನ ಮಾಡಿಕೊಳ್ಳಬಾರದು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರಗೆ ಮನವಿ ಸಲ್ಲಿಸಲಾಯಿತು.

ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ‘ಈಗಾಗಲೇ ರಾಜ್ಯದ ಕೈಗಾರಿಕಾ ಸಚಿವ ಎಂ.ಬಿ ಪಾಟೀಲರಿಗೆ, ಮುಖ್ಯಮಂತ್ರಿಗೆ, ರಾಜ್ಯಪಾಲರಿಗೆ ಹಾಗೂ ಕೈಗಾರಿಕಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳಿಗೆ 3 ಬಾರಿ ಮನವಿ ಸಲ್ಲಿಸಲಾಗಿದೆ. ಆದಾಗ್ಯೂ ಕೆ.ಐ.ಡಿ.ಬಿ ಅಧಿಕಾರಿಗಳು ಕೆಲವೊಬ್ಬ ರೈತರನ್ನು ಪ್ರತ್ಯೇಕವಾಗಿ ಕರೆದು ಅವರಿಗೆ ಆಮಿಷ ಒಡ್ಡಿ, ಭೂಮಿ ಸ್ವಾಧೀನಕ್ಕೆ ತೆರೆಮರೆಯಲ್ಲಿ ಹುನ್ನಾರ ನಡೆಸಿರುವುದು ಖಂಡನೀಯ’ ಎಂದರು.

‘ತಿಡಗುಂದಿ ವ್ಯಾಪ್ತಿಯ ರೈತರ ಫಲವತ್ತಾದ 1203 ಎಕರೆ ಕಪ್ಪು ಮಣ್ಣಿನ ಎರಿ ಜಮೀನುಗಳನ್ನು ಕೈಗಾರಿಕಾ ಪ್ರದೇಶಕ್ಕೆ ಬಳಸಿಕೊಳ್ಳಲು ತಯಾರಿ ನಡೆದಿದೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಈ ಭಾಗದ ಯಾವ ರೈತರೂ ಈ ಬೆಲೆ ಬಾಳುವ ಫಲವತ್ತಾದ ಭೂಮಿಯನ್ನು ಕಳೆದುಕೊಳ್ಳಲು ತಯಾರಿಲ್ಲ. ಕೂಡಲೇ ಈ ಯೋಜನೆಯನ್ನು ಇಲ್ಲಿಗೆ ಕೈಬಿಡಬೇಕು ಅಥವಾ ಬೇರೆಡೆಗೆ ಕೃಷಿಗೆ ಯೋಗ್ಯವಿರದ ಭೂಮಿಯಲ್ಲಿ ಮುಂದುವರೆಸಬಹುದು’ ಎಂದು ಆಗ್ರಹಿಸಿದರು.

ADVERTISEMENT

ಮುಖಂಡರಾದ ಗಿರೀಶ ತಾಳಿಕೋಟಿ ಮಾತನಾಡಿ, ಎಂ.ಬಿ ಪಾಟೀಲರೇ ನಮ್ಮ ಭಾಗಕ್ಕೆ ನೀರಿನ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ, ಪದವೀಧರರು ಬೇರೆ ಕಡೆ ಕೆಲಸ ಮಾಡುವುದು ಬೇಡ ನಮ್ಮ ಜಮೀನಿನಲ್ಲಿಯೇ ದುಡಿದು ಮಾಲೀಲಿಕರಾಗಿ ಇರೋಣ ಎನ್ನುವ ಆಸೆಯಿಂದ ನಮ್ಮ ಸ್ವಗ್ರಾಮಕ್ಕೆ ಬಂದು ವ್ಯವಸಾಯ ಮಾಡಿಕೊಂಡು ಸಂತೋಷದಿಂದ ಇದ್ದೇವೆ. ಆದರೆ, ಈಗ ಏಕಾಏಕಿ ಕೈಗಾರಿಕೆಗಾಗಿ ಒಳ್ಳೆಯ ಜಮೀನನ್ನು ಬಳಸಿಕೊಳ್ಳುವುದು ಯಾವ ನ್ಯಾಯ, ನಾವ್ಯಾರೂ ನಮ್ಮ ಭೂಮಿಯನ್ನು ಮಾರಿಕೊಳ್ಳಲ್ಲು ತಂದಾರಿಲ್ಲ ಎಂದರು.

ಮುಖಂಡರಾದ ಮಡಿವಾಳ ತಿಲ್ಯಾಳ ಮಾತನಾಡಿ, ‘ಜಿಲ್ಲೆಯಲ್ಲಿ ಈ ಮುಂಚೆ ಬೇರೆ ಬೇರೆ ಉದ್ದೇಶಕ್ಕಾಗಿ ನಿಗದಿ ಮಾಡಿರುವ ಭೂಮಿಯನ್ನು ಸಂಪೂರ್ಣವಾಗಿ ಬಳಸಿಕೊಂಡು ನಂತರದಲ್ಲಿ ಹೊಸ ಯೋಜನೆಗಳಿಗೆ ಕೈಹಾಕಿದರೆ ಚೆನ್ನಾಗಿರುತ್ತದೆ. 10 ವರ್ಷ ಕಳೆದರೂ ಮುಳವಾಡದ 3500 ಎಕರೆ ಕೈಗಾರಿಕಾ ಪ್ರದೇಶ ಇನ್ನು ಖಾಲಿ ಬಿದ್ದಿದೆ. ರೈತರಿಗೆ ಕೊಡಬೇಕಾಗಿರುವ ಪರಿಹಾರದ ಹಣ ಕೂಡಾ ಇನ್ನು ಬರದೇ ರೈತರ ಗೋಳಾಡುತ್ತಿದ್ದಾರೆ. ಮೊದಲು ಅಲ್ಲಿ ರೈತರಿಗೆ ಬರಬೇಕಾದ ಪರಿಹಾರ ಕೊಡಿ’ ಎಂದು ಆಗ್ರಹಿಸಿದರು.

‘ಜಿಲ್ಲೆಯಲ್ಲಿಯ ಕೃಷಿಗೆ ಯೋಗ್ಯವಿರುವ ಯಾವ ಭೂಮಿಯನ್ನು ಅನ್ಯ ಕಾರ್ಯಗಳಿಗೆ ಬಳಸಿಕೊಳ್ಳಬೇಡಿ, ಪಾಳುಬಿದ್ದಿರುವ ಗುಡ್ಡಗಾಡು ಪ್ರದೇಶಗಳಲ್ಲಿ ನೀವೂ ಕೈಗಾರಿಕೆ ಆರಂಭಿಸಿ, ನಮ್ಮದೇನು ಅಭ್ಯಂತರ ಇಲ್ಲ’ ಎಂದರು.

ರೈತ ಮುಖಂಡರಾದ ಅಶೋಕಗೌಡ ಬಿರಾದಾರ, ಸಿದ್ದರಾಮ ಪೂಜಾರಿ, ಗೋಪಾಲ ಬೋಸಲೆ, ಸಾಗರ ಗಡಚಿ, ಈಶ್ವರಪ್ಪ ಬೆಳ್ಳುಂಡಗಿ, ಮಡಿವಾಳ ತಿಲ್ಲಿಹಾಳ, ಸಾಹೇಬಗೌಡ ಬಿರಾದಾರ, ಮಾಳಪ್ಪ ಜಂಬಗಿ, ಹಣಮಂತ ಜಂಬಗಿ, ಅರವಿಂದ ಗಡಚಿ, ಬಿ. ಬಿ. ಮೇಲಿನಮನಿ, ಸಾಬುರಾವ್ ಛಲವಾದಿ, ಶಿವಪ್ಪ ಜಂಬಗಿ ಇದ್ದರು.

ಒಂದು ವೇಳೆ ಈ ಯೋಜನೆಯನ್ನು ತಿಡಗುಂದಿಯಲ್ಲಿ ಮುಂದುವರೆಸಿದ್ದೇ ಆದರೆ 1203 ಎಕರೆಯ ಸುಮಾರು 350 ಕುಟುಂಬಗಳು ಬೀದಿಗೆ ಬೀಳಲಿವೆ. ಈ ಕುರಿತು ಜಿಲ್ಲೆಯಾದ್ಯಂತ ತೀವ್ರ ಹೋರಾಟ ಮಾಡಲಾಗುವುದು 
ಸಂಗಮೇಶ ಸಗರ ಜಿಲ್ಲಾ ಘಟಕದ ಅಧ್ಯಕ್ಷ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.