ADVERTISEMENT

‘ಸಾರ್ವಜನಿಕರ ಸೇವೆಗೆ ಬದ್ಧ’

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2019, 15:33 IST
Last Updated 17 ಸೆಪ್ಟೆಂಬರ್ 2019, 15:33 IST
ಕೊಲ್ಹಾರದಲ್ಲಿ ಮಂಗಳವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧ ವಿತರಣಾ ಸಮಾರಂಭದಲ್ಲಿ ಸಬ್‌ ಇನ್‌ಸ್ಪೆಕ್ಟರ್ ಅನಿಲ್ ಕುಂಬಾರ ಮಾತನಾಡಿದರು
ಕೊಲ್ಹಾರದಲ್ಲಿ ಮಂಗಳವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧ ವಿತರಣಾ ಸಮಾರಂಭದಲ್ಲಿ ಸಬ್‌ ಇನ್‌ಸ್ಪೆಕ್ಟರ್ ಅನಿಲ್ ಕುಂಬಾರ ಮಾತನಾಡಿದರು   

ಕೊಲ್ಹಾರ: ‘ಪೊಲೀಸ್ ವ್ಯವಸ್ಥೆ ಬಲಿಷ್ಟವಾದಷ್ಟು ಸಮಾಜದ ಸ್ವಾಸ್ಥ್ಯ ಚೆನ್ನಾಗಿರುತ್ತದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಹಗಲಿರುಳು ಕಂಕಣ ಬದ್ಧವಾಗಿರುತ್ತದೆ’ ಎಂದು ಕೊಲ್ಹಾರ ಪೊಲೀಸ್ ಠಾಣೆ ಸಬ್‌ ಇನ್‌ಸ್ಪೆಕ್ಟರ್ ಅನಿಲ್ ಕುಂಬಾರ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಬಸವನಬಾಗೇವಾಡಿಯ ಅಮರೇಶ್ವರ ಕ್ಲಿನಿಕ್‌ ವೈದ್ಯ ಡಾ.ಅಮರೇಶ ಮಿಣಜಗಿ ನೇತೃತ್ವದಲ್ಲಿ ‘ಆರಕ್ಷಕರ ನಡಿಗೆ ಆರೋಗ್ಯದ ಕಡೆಗೆ’ ಅಭಿಯಾನದ ಅಂಗವಾಗಿ ಮಂಗಳವಾರ ಜರುಗಿದ ಪೊಲೀಸರ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧಿ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸಾರ್ವಜನಿಕರು ಎಲ್ಲದಕ್ಕೂ ಪೊಲೀಸರನ್ನು ದೂಷಿಸದೇ ಪೊಲೀಸರೊಂದಿಗೆ ಕೈಜೋಡಿಸಬೇಕು. ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಲು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ADVERTISEMENT

ವೈದ್ಯ ಡಾ.ಅಮರೇಶ ಮಿಣಜಗಿ ಮಾತನಾಡಿ, ‘ಪೊಲೀಸರು ಹಾಗೂ ಸೈನಿಕರು ದೇಶದ ಎರಡು ಕಣ್ಣುಗಳಿದ್ದಂತೆ. ಸೈನಿಕರು ಗಡಿ ರಕ್ಷಣೆ ಮಾಡಿದರೆ, ಪೊಲೀಸರು ನಾಡಿನ ರಕ್ಷಣೆ ಮಾಡುತ್ತಾರೆ. ಈ ಇಬ್ಬರು ತಮ್ಮ ವಯಕ್ತಿಕ ಹಾಗೂ ಕೌಟುಂಬಿಕ ಜೀವನದ ಸುಖ ದುಃಖಗಳನ್ನು ಬದಿಗಿಟ್ಟು ದಿನದ 24 ಗಂಟೆಯೂ ಸಮಾಜಕ್ಕಾಗಿ ತಮ್ಮನ್ನು ತಾವು ಮುಡಿಪಾಗಿಟ್ಟಿದ್ದಾರೆ’ ಎಂದು ಹೇಳಿದರು.

ಹಿರಿಯ ವೈದ್ಯ ಡಾ.ಪ್ರೇಮನಾಥ ಕಿರಗಿ ಮಾತನಾಡಿದರು. ಠಾಣೆಯ ಎಲ್ಲಾ ಪೊಲೀಸ್ ಸಿಬ್ಬಂದಿ ಆರೋಗ್ಯ ತಪಾಸಣೆ ನಡೆಸಿ, ಉಚಿತ ಔಷಧಿ ವಿತರಿಸಲಾಯಿತು. ಸಹಾಯಕ ಸಬ್‌ ಇನ್‌ಸ್ಪೆಕ್ಟರ್ ವಿ.ಎಚ್.ಹತ್ತಳ್ಳಿ ಹಾಗೂ ಎಸ್.ಎಸ್.ಲಕಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.