ವಿಜಯಪುರ: ಜಿಲ್ಲೆಗೆ ಕೋವಿಡ್-19 ಎರಡನೇ ಅಲೆ ಆಗಮಿಸುವ ಸಂಭವದ ಹಿನ್ನೆಲೆಯಲ್ಲಿ ಎಲ್ಲ ಆಸ್ಪತ್ರೆಗಳಲ್ಲಿ ಹಾಸಿಗೆಗಳ ವ್ಯವಸ್ಥೆ ಸೇರಿದಂತೆ ಸಕಲ ಸಿದ್ಧತೆಗಳೊಂದಿಗೆ ಸನ್ನದ್ಧರಾಗಿರುವಂತೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ವೈದ್ಯರಿಗೆ ಸೂಚನೆ ನೀಡಿದರು.
ನಗರದ ಚೌಧರಿ ಆಸ್ಪತ್ರೆಗೆ ಭೇಟಿ ನೀಡಿ ಕೋವಿಡ್-19 ಸಾವಿನ ಪ್ರಕರಣಗಳನ್ನು ಪರಿಶೀಲಿಸಿದ ಬಳಿಕ ತಜ್ಞ ವೈದ್ಯರೊಂದಿಗೆ ಚರ್ಚಿಸಿದರು.
ಕೋವಿಡ್-19 ಲಕ್ಷಣವಿರುವ ಪ್ರತಿ ರೋಗಿಯನ್ನು ಪೋರ್ಟಲ್ದಲ್ಲಿ ನೋಂದಣಿ ಮಾಡಿಕೊಂಡು ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸುವಂತೆ ಸೂಚಿಸಿದರು.
ಮುಂಬರುವ ದಿನಗಳಲ್ಲಿ ಎರಡನೇ ಅಲೆ ಸಂಭವ ಇರುವುದರಿಂದ ಸನ್ನದ್ಧರಾಗಲು ಈಗಿನಿಂದಲೇ ಅವಶ್ಯಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ವೈದ್ಯರಿಗೆ ಮತ್ತು ಅಧಿಕಾರಿಗಳಿಗೆ ಸೂಚಿಸಿದರು.
ಶ್ವಾಸಕೋಶ ಸೋಂಕು ಸಂಬಂಧಿತ, ಐಎಲ್ಐ, ಸಾರಿ ಮತ್ತು ಕೋವಿಡ್ ಲಕ್ಷಣವಿರುವ ಪ್ರಕರಣಗಳನ್ನು 5 ಮತ್ತು 14ನೇ ದಿನದಂದು ಕಡ್ಡಾಯವಾಗಿ ಆರ್ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಬೇಕು. ರೋಗ ಲಕ್ಷಣವಿರುವವರನ್ನು ತಕ್ಷಣ ತೀವ್ರ ನಿಗಾ ಘಟಕದಲ್ಲಿ ದಾಖಲು ಮಾಡಿಕೊಂಡು ಚಿಕಿತ್ಸೆಗೆ ಒಳಪಡಿಸಬೇಕು. ಕೋವಿಡ್ ಲಕ್ಷಣವಿರುವವರನ್ನು ಪೂರ್ವ ಪತ್ತೆ ಹಚ್ಚುವುದು ಅತ್ಯಂತ ಅವಶ್ಯಕವಾಗಿದ್ದು, ಸಾವಿನ ಪ್ರಮಾಣ ಕಡಿಮೆಗೊಳಿಸುವಂತೆ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಆಸ್ಪತ್ರೆಗಳಿಗೆ ಬರುವ ಪ್ರತಿಯೊಬ್ಬ ರೋಗಿಗಳಿಗೆ ಸಕಾಲಕ್ಕೆ ಅತ್ಯುತ್ತಮ ಚಿಕಿತ್ಸೆ ಒದಗಿಸುವಂತೆ ಅವರು ಸೂಚಿಸಿದರು.
ಜಿಲ್ಲಾಸ್ಪತ್ರೆಯ ಪ್ರಭಾರ ಶಸ್ತ್ರಚಿಕಿತ್ಸಕ ಡಾ.ಲಕ್ಕಣ್ಣನವರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಂ.ಬಿ.ಬಿರಾದಾರ, ಡಾ.ಸಂತೋಷ ನೇಮಗೌಡ, ಪೀಟರ್ ಅಲೆಕ್ಸಾಂಡರ್, ಡಾ. ಬಿರಾದಾರ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.