ADVERTISEMENT

ಕಾರಜೋಳ, ಎಂ.ಬಿ.ಪಾಟೀಲ, ಶಿವಾನಂದ ಪಾಟೀಲಗೆ ಬಂಗಾರದ ಕಿರೀಟ ತೊಡಿಸಿ ಸನ್ಮಾನ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 20:06 IST
Last Updated 23 ನವೆಂಬರ್ 2020, 20:06 IST
ಎಂ.ಬಿ.ಪಾಟೀಲ, ಗೋವಿಂದ ಕಾರಜೋಳ ಮತ್ತು ಶಿವಾನಂದ ಪಾಟೀಲ
ಎಂ.ಬಿ.ಪಾಟೀಲ, ಗೋವಿಂದ ಕಾರಜೋಳ ಮತ್ತು ಶಿವಾನಂದ ಪಾಟೀಲ   

ವಿಜಯಪುರ: ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಸ್ವಗ್ರಾಮ ಕಾರಜೋಳ ಗ್ರಾಮಸ್ಥರು ಪ್ರೀತಿ, ಅಭಿಮಾನದಿಂದ ಡಿಸಿಎಂ ಕಾರಜೋಳ, ಶಾಸಕರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ ಅವರಿಗೆ ತಲಾ ಏಳು ತೊಲ ಬಂಗಾರದ ಕಿರೀಟವನ್ನು ತೊಡಿಸಿ ಸನ್ಮಾನಿಸಿದರು.

ಕಾರಜೋಳ-ಕಾಖಂಡಕಿ-ಬಬಲೇಶ್ವರ ರಸ್ತೆ ನಿರ್ಮಾಣ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನಪ್ರತಿನಿಧಿಗಳಿಗೆ ಗ್ರಾಮಸ್ಥರು ಬಂಗಾರ ಕಿರೀಟ ತೊಡಿಸಿದರು. ಬಂಗಾರ ಕಿರೀಟ ಬೇಡ ಎಂದು ಮೂವರೂ ನಾಯಕರು ನಿರಾಕರಿಸಿದರು. ಆದರೆ, ಗ್ರಾಮಸ್ಥರು ಒತ್ತಾಯಪೂರ್ವಕವಾಗಿ ಕಿರೀಟ ತೊಡಿಸಿದರು.

ಊರಿನ ಮಗ ರಾಜ್ಯದ ಉಪ ಮುಖ್ಯಮಂತ್ರಿಯಂತಹ ದೊಡ್ಡ ಹುದ್ದೆ ಅಲಂಕರಿಸಿರುವುದರಿಂದ ಈ ಸನ್ಮಾನ ಮಾಡಲಾಗಿದೆ ಎಂದು ಗ್ರಾಮಸ್ಥರು ಹೇಳಿದರು. ಕಾರಜೋಳ ಅವರ ರಾಜಕೀಯ ಅದೃಷ್ಟ ಚನ್ನಾಗಿದೆ. ಈಗ ಉಪ ಮುಖ್ಯಮಂತ್ರಿ ಆಗಿದ್ದಾರೆ. ಶೀಘ್ರದಲ್ಲೇ ಅವರು ಮುಂದಿನ ಮುಖ್ಯಮಂತ್ರಿಯಾಗಲಿ, ಅದೂ ಇದೆ ಅವಧಿಯಲ್ಲಿ ಆಗಲಿ ಎಂದು ಶಾಸಕರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ ಆಶಿಸಿದರು

ADVERTISEMENT

ಮುಂದಿನ ಮುಖ್ಯಮಂತ್ರಿ ಕಾರಜೋಳ
‘ಕಾರಜೋಳ ಅವರ ರಾಜಕೀಯ ಅದೃಷ್ಟ ಚನ್ನಾಗಿದೆ. ಈಗ ಉಪ ಮುಖ್ಯಮಂತ್ರಿ ಆಗಿದ್ದಾರೆ. ಶೀಘ್ರದಲ್ಲೇ ಅವರು ಮುಂದಿನ ಮುಖ್ಯಮಂತ್ರಿಯಾಗಲಿ, ಅದೂ ಇದೆ ಅವಧಿಯಲ್ಲಿ ಆಗಲಿ’ ಎಂದು ಶಾಸಕರಾದ ಕಾಂಗ್ರೆಸ್‌ನ ಎಂ.ಬಿ.ಪಾಟೀಲ ಮತ್ತು ಶಿವಾನಂದ ಪಾಟೀಲ ಹೇಳಿದರು.

ಲಿಂಗಾಯತರ ಭವಿಷ್ಯ ಹಾಳು ಮಾಡಿದರು
ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಲಿಂಗಾಯತ ಸಮಾಜವನ್ನು ಪ್ರತ್ಯೇಕ ಧರ್ಮ ಮಾಡುವ ಮೂಲಕ ಧಾರ್ಮಿಕ ಅಲ್ಪಸಂಖ್ಯಾತ ಸೌಲಭ್ಯ ನೀಡಲು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಮುಂದಡಿ ಇಟ್ಟಾಗ ಅನೇಕರು ‘ಧರ್ಮ ಒಡೆಯಲು ಹೊರಟ್ಟಿದ್ದಾರೆ’ ಎಂದು ಆಪಾದಿಸುವ ಮೂಲಕ ಲಿಂಗಾಯರ ಭವಿಷ್ಯವನ್ನು ಹಾಳು ಮಾಡಿದರು ಎಂದು ಶಾಸಕ ಎಂ.ಬಿ.ಪಾಟೀಲ ಕಿಡಿಕಾರಿದರು.

ಕಾರ್ಯಕ್ರಮಕ್ಕೂ ಮುನ್ನಾ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತ್ಯೇಕ ಧರ್ಮ ಪ್ರಸ್ತಾವಕ್ಕೆ ವಿರೋಧ ವ್ಯಕ್ತಪಡಿಸಿದವರು ಇಂದು ವೀರಶೈವ ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ್ದಾರೆ. ಪ್ರತ್ಯೇಕ ಧರ್ಮದಂತ ಆನೆ ಬಿಟ್ಟು ಈಗ ಪ್ರಾಧಿಕಾರದ ಮೂಲಕ ಇಲಿ ಹಿಡಿಯಲು ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದರು.

ಈ ಪ್ರಾಧಿಕಾರ ರಚನೆಯಿಂದ ಯಾವುದೇ ಪ್ರಯೋಜನವಿಲ್ಲ. ಒಂದು ವೇಳೆ ಪ್ರಯೋಜನವಾಗಬೇಕಾದರೆ ಕನಿಷ್ಠ ₹ 5ಸಾವಿರ ಕೋಟಿ ಮೀಸಲಿಡಬೇಕು ಎಂದರು.

***

ರಾಜ್ಯ ಸಚಿವ ಸಂಪುಟ ವಿಸ್ತರಣೆ ನಿರೀಕ್ಷೆಯಿಂತೆ ಶೀಘ್ರ ಆಗಲಿದೆ. ನಾಲ್ಕು ದಿನ ಕಾಯಿರಿ
–ಗೋವಿಂದ ಕಾರಜೋಳ,ಉಪಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.