ADVERTISEMENT

ಸಿಂದಗಿ: ಚಿನ್ನಾಭರಣ ಅಂಗಡಿ ಮಾಲೀಕನ ಮೇಲೆ ಗುಂಡಿನ ದಾಳಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2023, 15:35 IST
Last Updated 13 ಫೆಬ್ರುವರಿ 2023, 15:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸಿಂದಗಿ(ವಿಜಯಪುರ): ಪಟ್ಟಣದ ಶಾಂತೇಶ್ವರ ರಸ್ತೆಯಲ್ಲಿನ ಚಾಮುಂಡೇಶ್ವರಿ ಜ್ಯುವೇಲರ್ಸ್ ಅಂಗಡಿಯಲ್ಲಿ ಐದು ಜನ ಒಳಹೊಕ್ಕು ಎರಡು ಸುತ್ತು ಗುಂಡಿನ ದಾಳಿ ನಡೆಸಿದ ಘಟನೆ ಸೋಮವಾರ ಸಂಜೆ ನಡೆದಿದೆ.

‘ಎರಡು ಬೈಕುಗಳಲ್ಲಿ ಬಂದ ಐವರು ಮರಾಠಿಯಲ್ಲಿ ಮಾತನಾಡುತ್ತಿದ್ದರು. ಪಿಸ್ತೂಲ್ ತೋರಿಸಿ ಹೆದರಿಸಲು ಮುಂದಾದಾಗ ನಾನು ಪ್ರತಿರೋಧಿಸಿದೆ. ಆಗ ಗಾಳಿಯಲ್ಲಿ ಗುಂಡು ಹಾರಿಸಿದರು. ನನಗೆ ಯಾವುದೇ ತೊಂದರೆಯಾಗಿಲ್ಲ. ನಾನು ತೀವ್ರ ಪ್ರತಿರೋಧ ತೋರಿಸಿದಾಗ ಮತ್ತು ಕೂಗಾಡಿದಾಗ ಸುತ್ತಮುತ್ತಲಿನ ಜನ ಸೇರುತ್ತಿದ್ದಂತೆ ಹೊರ ಓಡಿ ಹೋದರು’ ಎಂದು ಜ್ಯುವೇಲರ್ಸ್ ಅಂಗಡಿ ಮಾಲೀಕ ನಾಗರಾಜ ಪತ್ತಾರ ಆಲಮೇಲ ತಿಳಿಸಿದರು.

ಒಂದು ಬೈಕಿನಲ್ಲಿ ಮೂವರು ಪಾರಾರಿಯಾದರು. ಆದರೆ, ಇನ್ನಿಬ್ಬರು ಇನ್ನೊಂದು ಬೈಕಿನಲ್ಲಿ ಹೋಗಲು ಮುಂದಾದಾಗ ಬೈಕ್ ಚಾಲು ಆಗದೇ ಕೈಕೊಟ್ಟಿತು. ನಂಬರ್ ಪ್ಲೇಟ್ ಇಲ್ಲದೇ ಇರುವ ಬೈಕ್ ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದಾರೆ. ಜೊತೆಗೆ ಒಂದು ನಾಡ ಪಿಸ್ತೂಲ್ ಎರಡು ಜೀವಂತ ಗುಂಡು ಬೈಕ್ ಹತ್ತಿರ ಸಿಕ್ಕಿವೆ. ಅವರು ಹಳೆಯ ಬಜಾರದ ಮೂಲಕ ಜೈಹನುಮಾನ ಚೌಕದಿಂದ ಬೂದಿಹಾಳ ಮನೆ ಮಾರ್ಗವಾಗಿ ಓಡುತ್ತಿರುವಾಗ ಕೈಯಲ್ಲಿ ಮಚ್ಚು ಇರುವುದನ್ನು ಗಮನಿಸಿದ ಸಾರ್ವಜನಿಕರು ಬೆನ್ನು ಹತ್ತಿ ಹಿಡಿದಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ADVERTISEMENT

2013ರಲ್ಲಿ ಇದೇ ಸ್ಥಳದ ಹತ್ತಿರದಲ್ಲಿಯೇ ಇರುವ ಇನ್ನೊಂದು ಜ್ಯುವೇಲರ್ಸ್ ಅಂಗಡಿ ಮಾಲೀಕನ ಮೇಲೆ ಗುಂಡಿನ ದಾಳಿ ನಡೆದಿತ್ತು. ಆಗ ಅಂಗಡಿ ಮಾಲೀಕ ದಯಾನಂದ ಪತ್ತಾರ ಅವರ ತಲೆಗೆ ಮಚ್ಚಿನಿಂದ ಗಾಯಗೊಳಿಸಿದ್ದರು.

ಜನನಿಬಿಡ ಸ್ಥಳದಲ್ಲಿಯೇ ಸಂಜೆ ಸಮಯದಲ್ಲಿ ಈ ಘಟನೆ ನಡೆದಿರುವುದು ಜನತೆಯಲ್ಲಿ ಭಯ ಹುಟ್ಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.