
ಮುದ್ದೇಬಿಹಾಳ: ತಾಲ್ಲೂಕಿನಾದ್ಯಂತ ಕಳೆದ ವಾರದಿಂದೀಚೆ ಸುರಿಯುತ್ತಿರುವ ಭಾರಿ ಮಳೆಯಿಂದ ಜಮೀನುಗಳಲ್ಲಿನ ಫಲವತ್ತಾದ ಮಣ್ಣು ಕೊಚ್ಚಿ ಹೋಗಿದ್ದು ರೈತರು ನಷ್ಟ ಅನುಭವಿಸಿದ್ದಾರೆ. ಸರ್ಕಾರ ರೈತರಿಗೆ ಸೂಕ್ತ ಪರಿಹಾರ ನೀಡುವ ಕಾರ್ಯ ಮಾಡಬೇಕು ಎಂದು ಕುಂಟೋಜಿ ಭಾಗದ ರೈತರಾದ ಸಂಗಮೇಶ ಗಸ್ತಿಗಾರ, ಯಲ್ಲವ್ವ ಹುಲಗಣ್ಣಿ, ಬಸವರಾಜ ಹುಲಗಣ್ಣಿ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ರೈತರು, ಪ್ರವಾಹೋಪಾದಿಯಲ್ಲಿ ನೀರು ಹರಿದಿದ್ದರಿಂದ ಈ ಭಾಗದ ರೈತರ ಜಮೀನುಗಳ ಒಡ್ಡುಗಳು ಒಡೆದು ಫಲವತ್ತಾದ ಮಣ್ಣು ಕೊಚ್ಚಿ ಹೋಗಿ ಭಾರಿ ಪ್ರಮಾಣದ ಹಾನಿ ಉಂಟಾಗಿದೆ.
ನಿರಂತರವಾಗಿ ಹಲವು ಗಂಟೆಗಳವರೆಗೆ ಸುರಿದ ಮಳೆಯಿಂದ ರೈತರ ಜಮೀನುಗಳಲ್ಲಿ ಮಳೆನೀರಿನಿಂದ ಪ್ರವಾಹ ಉಂಟಾಗಿ ಹಳ್ಳ ಕೊಳ್ಳಗಳು ತುಂಬಿ ಹರಿದು ಕುಂಟೋಜಿ, ಅಬ್ಬಿಹಾಳ, ಹೊಕ್ರಾಣಿ, ಮಡಿಕೇಶ್ವರ, ಢವಳಗಿ, ತಾರನಾಳ, ಬಳವಾಟ, ನಡಹಳ್ಳಿ, ಗುಡಿಹಾಳ ಮುಂತಾದ ಅನೇಕ ಗ್ರಾಮಗಳ ರೈತರ ಹೊಲದಲ್ಲಿನ ಒಡ್ಡುಗಳು ಒಡೆದು ಫಲವತ್ತಾದ ಮಣ್ಣು ಕೊಚ್ಚಿ ಹೋಗಿ ರೈತರಿಗೆ ನಷ್ಟ ಉಂಟಾಗಿದೆ ಎಂದು ತಿಳಿಸಿದ್ದಾರೆ.
ಬರಗಾಲದ ಬವಣೆಯಲ್ಲಿ ನೊಂದ ರೈತನಿಗೆ ಬೀಜ ಗೊಬ್ಬರ ಖರೀದಿ ಮಾಡುವುದೇ ದುಸ್ತರವಾಗಿರುವ ಸಂದರ್ಭದಲ್ಲಿ ಹೊಲದ ಮಣ್ಣು ಕೊಚ್ಚಿ ಹೋಗಿದ್ದು, ಆಗಿರುವ ನಷ್ಟವನ್ನು ದುರಸ್ತಿ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೊಲಗಳ ಒಡ್ಡುಗಳಿಗೆ ಒಳಗಟ್ಟಿ, ಬದು ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಿ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ರೈತರಾದ ಚಂದಪ್ಪ ಗಸ್ತಿಗಾರ, ಸಿದ್ದರಾಮ ಅಂಗಡಿ, ಕರಿಬಸಯ್ಯ ಮಠ, ಗಂಗಪ್ಪ ಹೊಸಮನಿ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.