ADVERTISEMENT

ಮುಖ್ಯಮಂತ್ರಿ ಆಗುವ ಅರ್ಹತೆ ನನಗಿದೆ: ಉಮೇಶ್ ಕತ್ತಿ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2022, 8:14 IST
Last Updated 26 ಜುಲೈ 2022, 8:14 IST
   

ಆಲಮಟ್ಟಿ(ವಿಜಯಪುರ): ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆ ನನಗಿದೆ ಎಂದು ಅರಣ್ಯ ಖಾತೆ ಸಚಿವ ಉಮೇಶ್ ಕತ್ತಿ ಪ್ರತಿಪಾದಿಸಿದರು.

ಆಲಮಟ್ಟಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಇನ್ನೂ 60 ವರ್ಷ , ಬಿಜೆಪಿಯ ನಿಯಮದ ಪ್ರಕಾರ ಸಕ್ರಿಯ ರಾಜಕಾರಣದಲ್ಲಿರಲು ಇನ್ನೂ 15 ವರ್ಷ ಅವಕಾಶವಿದೆ, ಅಷ್ಟರೊಳಗೆ ನಮಗೂ ಮುಖ್ಯಮಂತ್ರಿ ಅವಕಾಶ ಬರುತ್ತದೆ, ನಾನೂ 9 ಬಾರಿ ಶಾಸಕನಾಗಿ ಆರಿಸಿಬಂದಿರುವೆ ಎಂದು ತಮ್ಮ ಹಕ್ಕು ಮಂಡನೆ ಮಾಡಿದರು.

ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ತಾರತಮ್ಯ ಮುಂದುವರೆದರೇ ಪ್ರತ್ಯೇಕ ರಾಜ್ಯದ ಕೂಗು ಅನಿವಾರ್ಯ, ಅದಕ್ಕೆ ಉತ್ತರ ಕರ್ನಾಟಕದ ಬಹುತೇಕ ಶಾಸಕ, ಸಂಸದರ ಸಹಮತವಿದೆ, ಕೆಲ ಒತ್ತಡದ ಕಾರಣ ಮಾತನಾಡದೇ ಸುಮ್ಮನಿದ್ದಾರೆ ಎಂದರು.
ಅಧಿಕಾರಕ್ಕೆ ಬರುವ ಮುನ್ನವೇ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಗದ್ದುಗೆಗೆ ಗುದ್ದಾಟ ನಡೆದಿದ್ದು, ಇದರಿಂದಾಗಿ ಶೀಘ್ರದಲ್ಲಿಯೇ ಕಾಂಗ್ರೆಸ್ ಪಕ್ಷ ಚೂರು ಚೂರಾಗಲಿದೆ ಎಂದು ಹೇಳಿದರು.

ADVERTISEMENT

ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದ್ದರೂ ಸಿದ್ಧರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಬೆಂಬಲಿಗರು ಪರಸ್ಪರ ಬಡಿದಾಡಿಕೊಳ್ಳುತ್ತಿದ್ದಾರೆ. ಅವರಿಗೆ ಯಾವ ಹುಚ್ಚು ಹಿಡಿದಿದೆಯೋ ಗೊತ್ತಿಲ್ಲ, ಇದರಿಂದ ಕಾಂಗ್ರೆಸ್ ದಿವಾಳಿಯಾಗಲಿದೆ ಎಂದರು. ಉತ್ತಮ ಯೋಜನೆಗಳಿಂದಾಗಿ ಬಿಜೆಪಿ ಮುಂದಿನ ಐದೂ ವರ್ಷ ಅಧಿಕಾರದಲ್ಲಿರಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.