ADVERTISEMENT

ಹದಗೆಟ್ಟ ರಸ್ತೆ; ಸಂಚಾರಕ್ಕೆ ಸಂಚಕಾರ

ಕನಕನಾಳ-ಮಹಾರಾಷ್ಟ್ರದ ರಸ್ತೆ ದುಸ್ಥಿತಿ

ಕೆ.ಎಸ್.ಈಸರಗೊಂಡ
Published 12 ಅಕ್ಟೋಬರ್ 2020, 6:24 IST
Last Updated 12 ಅಕ್ಟೋಬರ್ 2020, 6:24 IST
ಹೊರ್ತಿ ಸಮೀಪದ ಇಂಚಗೇರಿಯಿಂದ-ಕನಕನಾಳದ ರಸ್ತೆ ಹದಗೆಟ್ಟಿರುವುದು
ಹೊರ್ತಿ ಸಮೀಪದ ಇಂಚಗೇರಿಯಿಂದ-ಕನಕನಾಳದ ರಸ್ತೆ ಹದಗೆಟ್ಟಿರುವುದು   

ಹೊರ್ತಿ: ಮಹಾರಾಷ್ಟ್ರದ ಗಡಿ ಗ್ರಾಮಗಳಾದ ಇಂಚಗೇರಿಯಿಂದ ಕನಕನಾಳ-ಮಹಾರಾಷ್ಟ್ರದ ಗಡಿ ಸೇರುವ 5 ಕಿ.ಮೀ ರಸ್ತೆಗೆ ಡಾಂಬರ್‌ ಇಲ್ಲದೆ ಸಂಪೂರ್ಣ ಹದಗೆಟ್ಟಿದೆ.

ಇಂಚಗೇರಿಯಿಂದ ಕನಕನಾಳ ಮೂಲಕ ಈ ರಸ್ತೆಯು ಮಹಾರಾಷ್ಟ್ರದ ಗುಡ್ಡಾಪೂರ, ಜತ್, ಉಮದಿ, ಲಮಾನಟ್ಟಿ, ಕಾತ್ರಾಳ ಇತರೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಹಾಗಾಗಿ ಇಲ್ಲಿ ವಾಹನಗಳ ಸಂಚಾರ ಅಧಿಕ. ರಸ್ತೆಯುದ್ದಕ್ಕೂ ಮುಳ್ಳು ಕಂಟಿಗಳು ಆವರಿಸಿದ್ದು, ಎದುರು ಬರುವ ವಾಹನಗಳು ಕಾಣಿಸುವುದಿಲ್ಲ. ರಸ್ತೆ ಹದಗೆಟ್ಟಿರುವ ಕಾರಣ ಪ್ರಯಾಣಿಕರು ಸಂಚರಿಸಲು ಪ್ರಯಾಸಪಡುವಂತಾಗಿದೆ.

ರಸ್ತೆಗೆ ಮಾರ್ಗ ಸೂಚಿಗಳು ಇಲ್ಲದಿರುವುದು ಅಪಘಾತಕ್ಕೆ ಅಹ್ವಾನ ನೀಡುವಂತಿವೆ. ಪರಿಸ್ಥಿತಿ ಹೀಗಿದ್ದರೂ ಲೋಕೋಪಯೋಗಿ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಈ ಬಗ್ಗೆ ಗಮನ ಹರಿಸಿಲ್ಲ ಎಂಬುದು ಗ್ರಾಮಸ್ಥರ ದೂರು.

ADVERTISEMENT

‘ಈ ರಸ್ತೆಯಲ್ಲಿ ಸಂಚರಿಸುವುದೇ ದುಸ್ತರ. ಅಪಾಯ ಯಾವ ಸಂದರ್ಭದಲ್ಲಾದರೂ ಸಂಭವಿಸಬಹುದಾಗಿದ್ದು, ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವಂತಾಗಿದೆ’ ಎಂದು ಕನಕನಾಳ ಗ್ರಾಮದ ಭಗೀರಥ ಮಹರ್ಷಿ ಯುವ ಮುಖಂಡ ಪ್ರಕಾಶ ಪಾಟೀಲ ದೂರಿದರು. ಸುನೀಲ ಪವಾರ, ಮಾಸಿದ್ಧ ಗಿರಡೆ, ವಾಸದೇವ ಬಿರಾದಾರ, ಜಕ್ಕಪ್ಪ ಬಿರಾದಾರ, ಅನೀಲ ನವತ್ರೆ ,ಸಿದ್ಧು ನರಳೆ, ಜಕ್ಕಪ್ಪ ಗಿರಡೆ, ಸಾಯಬಣ್ಣ ಬಿರಾದಾರ, ಯಲ್ಲಪ್ಪ ನವತ್ರೆ, ಮಲಕಾರಿ ಘೇರಡೆ, ಸುರೇಶ ಢಗೆ ಇದಕ್ಕೆ ದನಿಗೂಡಿಸಿದರು.

ಶೀಘ್ರವೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ರಸ್ತೆ ದುರಸ್ತಿ ಮಾಡಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡದಿದ್ದರೇ ಪ್ರತಿಭಟನೆ ನಡೆಸಲಾಗುವುದು ಎಂದು ಕನಕನಾಳ-ಇಂಚಗೇರಿಯ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.