ವಿಜಯಪುರ: ಭೀಮಾ ನದಿಗೆ ಸೊನ್ನ ಗ್ರಾಮದಲ್ಲಿ ಬ್ಯಾರೇಜ್ ನಿರ್ಮಾಣದಿಂದ ಮುಳುಗಡೆಯಾಗಿ ಮನೆ ಕಳೆದುಕೊಂಡ ಸಿಂದಗಿ ತಾಲ್ಲೂಕಿನ ಬ್ಯಾಡಗಿಹಾಳ ಗ್ರಾಮದ ನಿರಾಶ್ರಿತರಿಗೆ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ನಿವೇಶನ ಹಕ್ಕು ಪತ್ರ ವಿತರಿಸಿದರು.
ಬ್ಯಾಡಗಿಹಾಳ ಗ್ರಾಮದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಸಚಿವರು 311 ನಿರಾಶ್ರಿತರಿಗೆ ನಿವೇಶನಗಳ ಹಕ್ಕುಪತ್ರ ವಿರತರಿಸಿದರು.
ಅಫಜಲಪುರ ತಾಲ್ಲೂಕಿನ ಸೊನ್ನ ಗ್ರಾಮದಲ್ಲಿ ಬ್ಯಾರೇಜ್ ನಿರ್ಮಾಣದಿಂದ ಈ ಗ್ರಾಮದ ಜನರು ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದರು. ಸುಮಾರು 30 ಎಕರೆ ಪ್ರದೇಶದಲ್ಲಿ ನಿರಾಶ್ರಿತರಿಗೆ ನಿವೇಶನ ಜೊತೆಗೆ ಶಾಲೆ, ಉದ್ಯಾನವನ, ದೇವಸ್ಥಾನ, ಸಮುದಾಯ ಭವನ, ನೀರಿನ ಟ್ಹಾಂಕ್, ವಿದ್ಯುತ್ ಕಂಬಗಳ ಹಾಕಲು ಕ್ರಮ ವಹಿಸಲಾಗಿದೆ.
ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿದ್ದು, ಗ್ರಾಮದ ಜನರ ಸಮ್ಮುಖದಲ್ಲಿಯೇ ಇಂಡಿ ಉಪ ವಿಭಾಗಾಧಿಕಾರಿ, ಸಿಂಧಗಿ ತಹಶೀಲ್ದಾರ್, ಅಫಜಲಪುರ ಕೆಎನ್ ಎನ್ ಎಲ್ ಕಾರ್ಯಪಾಲಕ ಎಂಜನೀಯರ್, ಸಿಂಧಗಿ ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿಗಳು ವಿಡಿಯೊ ಚಿತ್ರೀಕರಣದ ಮೂಲಕ ಪಾರದರ್ಶಕವಾಗಿ ಫಲಾನುಭವಿಗಳ ಆಯ್ಕೆ ಮಾಡಿದ್ದಾರೆ.
ಬ್ಯಾಡಗಿಹಾಳ ಮಹಾಸಂಸ್ಥಾನದ ಬಸವರತ್ನ ಮಹಾಲಿಂಗೇಶ್ವರ ಮಹಾ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯರಾದ ಹನುಮಂತ ನಿರಾಣಿ, ಅರುಣ ಶಹಾಪುರ, ಲಿಂಬೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಶೋಕ ಅಲ್ಲಾಪುರ, ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದಕುಮಾರ್, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಗೋವಿಂದರೆಡ್ಡಿ, ಉಪವಿಭಾಗಾಧಿಕಾರಿ ರಾಹುಲ್ ಶಿಂಧೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.