
ಸೋಲಾಪುರ: ಇಲ್ಲಿನ ಐಟಿ ಪಾರ್ಕ್ಗಾಗಿ ಹೊಟಗಿಯಲ್ಲಿರುವ ನೀರಾವರಿ ಇಲಾಖೆಯ 20 ಹೆಕ್ಟೇರ್ (50 ಎಕರೆ) ಜಮೀನು ಕೈಗಾರಿಕಾ ಅಭಿವೃದ್ಧಿ ಮಹಾಮಂಡಳಿಗೆ ಹಸ್ತಾಂತರಿಸುವಂತೆ ವಿಭಾಗೀಯ ಆಯುಕ್ತ ಡಾ. ಚಂದ್ರಕಾಂತ ಪುಲಕಂಡವಾರ ಅವರು ಜಿಲ್ಲಾಧಿಕಾರಿ ಕುಮಾರ ಆಶೀರ್ವಾದ ಅವರಿಗೆ ಆದೇಶ ನೀಡಿದ್ದಾರೆ ಎಂಬ ಮಾಹಿತಿಯನ್ನು ಉಸ್ತುವಾರಿ ಸಚಿವ ಜಯಕುಮಾರ ಗೋರೆ ನೀಡಿದ್ದಾರೆ.
ಉಸ್ತುವಾರಿ ಸಚಿವ ಜಯಕುಮಾರ ಗೋರೆ ಮುಖ್ಯಮಂತ್ರಿ ಕಾರ್ಯಾಲಯದಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಸೋಲಾಪುರದಲ್ಲಿ ಐಟಿ ಪಾರ್ಕ್ ಸ್ಥಾಪಿಸಲು 50 ಎಕರೆ ಜಮೀನು ಮಂಜೂರು ಮಾಡಲು ವಿಭಾಗೀಯ ಆಯುಕ್ತರಿಗೆ ಆದೇಶ ನೀಡಬೇಕೆಂದು ಮನವಿ ಮಾಡಿದರು. ಈ ವೇಳೆ ಶಾಸಕ ದೇವೇಂದ್ರ ಕೋಟೆ ಉಪಸ್ಥಿತರಿದ್ದರು.
ಉಸ್ತುವಾರಿ ಸಚಿವ ಜಯಕುಮಾರ ಗೋರೆ ಮಾತನಾಡಿ, ಸೋಲಾಪುರದಲ್ಲಿ ಐಟಿ ಪಾರ್ಕ್ ಆರಂಭಿಸಲು ಶಾಸಕ ದೇವೇಂದ್ರ ಕೋಟೆ ಸೇರಿದಂತೆ ಇತರ ಜನಪ್ರತಿನಿಧಿಗಳು ನಿರಂತರವಾಗಿ ಸರ್ಕಾರಕ್ಕೆ ದಾಖಲೆಗಳನ್ನು ಒದಗಿಸುತ್ತಿದ್ದರು. ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡನವೀಸ್ ಸೋಲಾಪುರದಲ್ಲಿ ಐಟಿ ಪಾರ್ಕ್ ಸ್ಥಾಪಿಸುವುದಾಗಿ ಭರವಸೆ ನೀಡಿದ್ದರು ಎಂದು ಹೇಳಿದರು.
ಸಚಿವ ಗೋರೆ, ವಿಭಾಗೀಯ ಆಯುಕ್ತ ಡಾ. ಚಂದ್ರಕಾಂತ ಪುಲಕಂಡವಾರ ಆದೇಶಾನುಸಾರ 20 ಹೆಕ್ಟೇರ್ (50 ಎಕರೆ) ಜಮೀನು ಕೈಗಾರಿಕಾ ಅಭಿವೃದ್ಧಿ ಮಹಾಮಂಡಳಿಗೆ ಹಸ್ತಾಂತರಿಸುವ ಪ್ರಕ್ರಿಯೆ ಆರಂಭವಾಗಿದೆ. ನಂತರ ಐಟಿ ಪಾರ್ಕ್ ನಿರ್ಮಾಣಕ್ಕೆ ವೇಗ ಸಿಗಲಿದೆ ಎಂದು ತಿಳಿಸಿದರು.
ಸೋಲಾಪುರದ ವಸ್ತ್ರೋದ್ಯಮಕ್ಕೆ ಇಚಲಕರಂಜಿಯ ಮಾದರಿಯಲ್ಲಿ ಉತ್ತೇಜನ ನೀಡುವ ಕುರಿತು ಮುಂದಿನ ಅಧಿವೇಶನದಲ್ಲಿ ಸಭೆ ನಡೆಸಲಾಗುತ್ತದೆ. ಸೋಲಾಪುರದ ವಿಮಾನ ಸೇವೆ ಹಾಗೂ ಸಮಾಂತರ ಜಲವಾಹಿನಿ ಯೋಜನೆಗಳ ಕಾರ್ಯಗಳು ಪೂರ್ಣಗೊಂಡಿವೆ. ಮುಂದಿನ ದಿನಗಳಲ್ಲಿ ನೀರುಪೂರೈಕೆ ಸಂಬಂಧಿತ ಕಾಮಗಾರಿಗಳೂ ಶೀಘ್ರದಲ್ಲೇ ಆರಂಭವಾಗಲಿವೆ ಎಂದು ಉಸ್ತುವಾರಿ ಸಚಿವ ಜಯಕುಮಾರ ಗೋರೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.