ADVERTISEMENT

ದೇವರಹಿಪ್ಪರಗಿ | ಉದ್ಯೋಗ ನೇಮಕಾತಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 2:32 IST
Last Updated 1 ಮಾರ್ಚ್ 2026, 2:32 IST
ದೇವರಹಿಪ್ಪರಗಿ ತಾಲ್ಲೂಕು ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ಉದ್ಯೋಗ ನೇಮಕಾತಿಗಾಗಿ ಒತ್ತಾಯಿಸಿ ತಹಶೀಲ್ದಾರ‌ ನಿಂಗಣ್ಣ ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು
ದೇವರಹಿಪ್ಪರಗಿ ತಾಲ್ಲೂಕು ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ಉದ್ಯೋಗ ನೇಮಕಾತಿಗಾಗಿ ಒತ್ತಾಯಿಸಿ ತಹಶೀಲ್ದಾರ‌ ನಿಂಗಣ್ಣ ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು   

ದೇವರಹಿಪ್ಪರಗಿ: ರಾಜ್ಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ಆರಂಭಿಸಲು ಆಗ್ರಹಿಸಿ ತಾಲ್ಲೂಕು ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ತಹಶೀಲ್ದಾರ್ ನಿಂಗಣ್ಣ ಬಿರಾದಾರ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ದರಾಮಪ್ಪ ಅವಟಿ, ‘ರಾಜ್ಯದಲ್ಲಿ 2.73 ಲಕ್ಷ ಹುದ್ದೆಗಳು ಖಾಲಿ ಇದ್ದು, ಲಕ್ಷಾಂತರ ಉದ್ಯೋಗಿಗಳು ಉದ್ಯೋಗ ನೇಮಕಾತಿಗೆ ಎದುರು ನೋಡುತ್ತಿದ್ದಾರೆ. ಆದರೆ ಸರ್ಕಾರ ಈ ವಿಷಯದಲ್ಲಿ ಯಾವ ಗಂಭೀರ ಹೆಜ್ಜೆ ಇಡುತ್ತಿಲ್ಲ. ರಾಜ್ಯದಲ್ಲಿ ಉದ್ಯೋಗ ಭರ್ತಿಗಾಗಿ ಸಾವಿರಾರು ವಿದ್ಯಾರ್ಥಿಗಳು ಬೀದಿಗೀಳಿದು ಹೋರಾಟ ನಡೆಸಿದ್ದಾರೆ. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಉದ್ಯೋಗಾಕಾಂಕ್ಷಿಗಳು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಆದರೆ ಈ ನ್ಯಾಯಯುತ ಬೇಡಿಕೆ ಈಡೇರಿಸಬೇಕಾದ ಸರ್ಕಾರಗಳು ಈ ವಿಷಯದಲ್ಲಿ ಗಂಭೀರವಾಗಿ ನಡೆದುಕೊಳ್ಳುತ್ತಿಲ್ಲ ಎಂಬುದು ಅತ್ಯಂತ ನೋವಿನ ಸಂಗತಿ’ ಎಂದರು.

ಜಿಲ್ಲಾ ವಕ್ತಾರ ಚನ್ನಪ್ಪಗೌಡ ಬಿರಾದಾರ ಮಾತನಾಡಿ, ‘ರಾಜ್ಯದಲ್ಲಿ 2.73 ಲಕ್ಷ ಹುದ್ದೆಗಳು ಖಾಲಿ ಇವೆ. ಅದರಲ್ಲಿ ಶಿಕ್ಷಣ ಇಲಾಖೆಯಲ್ಲಿ 69,800, ಆರೋಗ್ಯ ಇಲಾಖೆಯಲ್ಲಿ 34,908, ಗೃಹ ಇಲಾಖೆಯಲ್ಲಿ 23,580 ಹೀಗೆ ವಿವಿಧ ಇಲಾಖೆಯಲ್ಲಿ ಉದ್ಯೋಗ ಖಾಲಿ ಇವೆ, ಅತ್ತ ಖಾಲಿ ಹುದ್ದೆಗಳಿಂದಾಗಿ ಆಡಳಿತ ಯಂತ್ರವೂ ಸೂಸೂತ್ರವಾಗಿ ನಡೆಯುತ್ತಿಲ್ಲ. ಜನಸಾಮಾನ್ಯರಿಗೂ ತಮ್ಮ ಕೆಲಸ ಕಾರ್ಯಗಳಿಗೆ ವಿಳಂಬವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕಾಲಹರಣ ಮಾಡದೇ ಆದ್ಯತೆ ಮೇರೆಗೆ ಉದ್ಯೋಗ ಭರ್ತಿಗೆ ಆದ್ಯತೆ ನೀಡುಬೇಕು ಎಂದು ಆಗ್ರಹಿಸಿದರು.

ADVERTISEMENT

ಸಿಂದಗಿ ಘಟಕದ ತಾಲ್ಲೂಕು ಘಟಕದ ಅಧ್ಯಕ್ಷ ಸಂತೋಷ ಮನಗೂಳಿ, ಆಲಮೇಲ ಘಟಕದ ಅಧ್ಯಕ್ಷ ಭೀಮಾಶಂಕರ ಹೇರ, ಸಂಘಟನೆಯ ಪದಾಧಿಕಾರಿಗಳಾದ ರಮೇಶ ರಾಠೋಡ, ನಾಗಪ್ಪ ಹೇರ, ಮಶಾಕ್ ವಾಲಿಕಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.