ವಿಜಯಪುರ: ಎಸ್ಸೆಸ್ಸೆಲ್ಸಿಪರೀಕ್ಷೆಯಲ್ಲಿ ಜಿಲ್ಲೆಯ ಕಾರಜೋಳದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿ ಐಶ್ವರ್ಯ ಕಣಸೆ 625ಕ್ಕೆ 625ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಟಾಪರ್ ಆಗಿದ್ದಾರೆ.
ವಿಜಯಪುರದ ನೆಹರು ನಗರದ ನಿವಾಸಿಯಾಗಿರುವ ಅರಕೇರಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಲಕ್ಷ್ಮಣ ಕಣಸೆ ಮತ್ತು ಸರಸ್ವತಿ ದಂಪತಿ ಪುತ್ರಿಯಾಗಿರುವ ಐಶ್ವರ್ಯ ಕಣಸೆ, ಯಾವುದೇ ಕೋಚಿಂಗ್, ಟ್ಯೂಷನ್ ಇಲ್ಲದೇ ಕೇವಲ ಶಾಲೆಯ ಶಿಕ್ಷಕರ ಪಾಠ, ಮಾರ್ಗದರ್ಶನದಿಂದ ಈ ಸಾಧನೆ ಮಾಡಿರುವುದು ವಿಶೇಷ.
ಈ ಕುರಿತು 'ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಐಶ್ವರ್ಯ, ಈ ಬಾರಿಯ ಎಸ್ಸೆಸ್ಸೆಲ್ಸಿಪ್ರಶ್ನೆ ಪತ್ರಿಕೆ ಬಹಳ ಸರಳವಾಗಿತ್ತು. ಹೀಗಾಗಿ ಹೆಚ್ಚಿನ ಅಂಕಗಳ ನಿರೀಕ್ಷೆ ಇತ್ತು. ಆದರೆ, 625 ಅಂಕ ಬಂದಿರುವುದು ಖುಷಿನೀಡಿದೆ. ಈ ಸಾಧನೆಗೆ ನಮ್ಮ ಶಾಲೆಯ ಶಿಕ್ಷಕರು ಮತ್ತು ಪೋಷಕರ ಪ್ರೋತ್ಸಾಹ, ಮಾರ್ಗದರ್ಶನ ಕಾರಣ ಎಂದು ಹೇಳಿದರು.
ಪ್ರತಿದಿನ 6-7ಗಂಟೆ ಅಭ್ಯಾಸ ಮಾಡುತ್ತಿದ್ದೆ. ಶಾಲೆಯಲ್ಲಿ ಪ್ರತಿದಿನ ಹೆಚ್ಚುವರಿ ತರಗತಿ ತೆಗೆದುಕೊಂಡು ಉತ್ತಮವಾಗಿ ಕಲಿಸುತ್ತಿದ್ದರು. ಇದರಿಂದ ಹೆಚ್ಚಿನ ಅಂಕ ಗಳಿಸಲು ನೆರವಾಯಿತು ಎಂದರು.
ಪಿಯುಸಿಯಲ್ಲಿ ವಿಜ್ಞಾನ ವಿಷಯದಲ್ಲಿ ಓದಬೇಕು ಎಂದುಕೊಂಡಿರುವೆ. ಭವಿಷ್ಯದಲ್ಲಿ ಐಎಎಸ್ ಅಧಿಕಾರಿಯಾಗಬೇಕು ಎಂಬ ಗುರಿ ಇದೆ ಎಂದು ತಿಳಿಸಿದರು.
ಐಶ್ವರ್ಯ ಅವರ ತಂದೆ,ಶಿಕ್ಷಕ ಲಕ್ಷ್ಮಣ ಕಣಸೆ ಅವರಿಗೆ ಮೂವರು ಹೆಣ್ಣುಮಕ್ಕಳು. ಅವರಲ್ಲಿ ಐಶ್ವರ್ಯ ಮೂರನೆಯವರು. ಹಿರಿಯ ಮಗಳು ವಾಣಿ ಕಣಸೆ ಹುಬ್ಬಳ್ಳಿ ಕಿಮ್ಸ್ನಲ್ಲಿ ನರ್ಸಿಂಗ್ ಕಲಿಸುತ್ತಿದ್ದಾರೆ. ಎರಡನೇ ಮಗಳು ವೀಣಾ ಕಣಸೆ ವಿಜಯಪುರ ನಗರದ ಬಿಡಿಇ ಶಿಕ್ಷಣ ಸಂಸ್ಥೆಯಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.