ADVERTISEMENT

KPSC ಪ್ರಶ್ನೆ ಪತ್ರಿಕೆಯಲ್ಲಿ ದೋಷ: ಅಧಿಕಾರಿಗಳ ಅಮಾನತ್ತಿಗೆ ಯತ್ನಾಳ ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2024, 11:56 IST
Last Updated 30 ಆಗಸ್ಟ್ 2024, 11:56 IST
   

ವಿಜಯಪುರ: ಕರ್ನಾಟಕ ಲೋಕಸೇವಾ ಆಯೋಗ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗಾಗಿ ನಡೆಸಿದ ಪೂರ್ವಬಾವಿ ‍ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿರುವ ಗೊಂದಲಗಳು, ದೋಷಗಳಿಗೆ, ಭಾಷಾಂತರ ತಪ್ಪುಗಳಿಗೆ ಕಾರಣರಾದ ಅಧಿಕಾರಿಯನ್ನು ಈ ಕೂಡಲೇ ಅಮಾನತ್ತಿನಲ್ಲಿಡಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದ್ದಾರೆ.

ಈ ಕುರಿತಂತೆ ‘ಎಕ್ಸ್’ನಲ್ಲಿ ಟ್ವಿಟ್ ಮಾಡಿರುವ ಅವರು, ಪ್ರಮುಖ ದಿನ ಪತ್ರಿಕೆಗಳಲ್ಲಿ ಪ್ರಶ್ನೆ ಪತ್ರಿಕೆಗಳ ತಪ್ಪುಗಳ ಬಗ್ಗೆ ಚರ್ಚೆಯಾದಾಗ ಅಭ್ಯರ್ಥಿಗಳು ಆಕ್ಷೇಪಣೆ ಸಲ್ಲಿಸಬಹುದು ಎಂದು ಪ್ರಕಟಣೆ ಹೊರಡಿಸಿರುವುದು ಆಯೋಗದ ಅಸಮರ್ಥತೆ ತೋರಿಸುತ್ತದೆ ಎಂದು ಹೇಳಿದ್ದಾರೆ.

ಪರೀಕ್ಷಾರ್ಥಿಗಳು ಹಾಗೂ ದಿನ ಪತ್ರಿಕೆಗಳು ಸವಿವರವಾಗಿ ಪ್ರಶ್ನೆ ಪತ್ರಿಕೆಯಲ್ಲಾದ ತಪ್ಪುಗಳನ್ನು ಎತ್ತಿ ತೋರಿಸಿದ ಬಳಿಕವೂ ಆಯೋಗದ ಕಣ್ಣಿಗೆ ಬೀಳದಿರುವುದು ವಿಷದನೀಯ. ಈ ಕೂಡಲೇ ಪ್ರಶ್ನೆ ಪತ್ರಿಕೆ ತಯಾರು ಮಾಡಿದ ಅಧಿಕಾರಿಯನ್ನು ಅಮಾನತ್ತಿನಲ್ಲಿಟ್ಟು,  ಇಲಾಖೆಯಲ್ಲಿ ಕಿಂಚಿತ್ತಾದರೂ ಶಿಸ್ತಿದೆ ಎಂಬುದನ್ನು ತೋರಿಸಬೇಕು ಎಂದಿದ್ದಾರೆ.

ADVERTISEMENT

ಪ್ರಶ್ನೆ ಪತ್ರಿಕೆಯಲ್ಲಿರುವ ದೋಷಗಳು ಸ್ವಯಂ ವಿವರಣಾತ್ಮಕ ಆಗಿದೆ. ಯಾವುದೇ ಪ್ರಶ್ನೆ ಪತ್ರಿಕೆ ತಯಾರಾದ ನಂತರ ತರ್ಜುಮೆಯ ಗುಣಮಟ್ಟ, ಆಂಗ್ಲ ಹಾಗೂ ಕನ್ನಡದಲ್ಲಿ ಪ್ರಶ್ನೆಗಳ ಸಾಮ್ಯತೆ, ವ್ಯಾಕರಣ ದೋಷ, ಮುದ್ರಣದ ಗುಣಮಟ್ಟ, ಅಸಂಬದ್ಧ ವಾಕ್ಯ ರಚನೆ, ತದ್ವಿರುದ್ದ ಅರ್ಥಗಳು ಇದ್ದಲ್ಲಿ, ಅದನ್ನು ಸರಿಪಡಿಸಿ ಮತ್ತೊಮ್ಮೆ ಪರೀಕ್ಷೆ ಮಾಡಿ, ಪ್ರೂಫ್ ಮಾಡಿದ ನಂತರ ಬಿಡುಗಡೆ ಮಾಡಬೇಕಿತ್ತು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.