ಮುದ್ದೇಬಿಹಾಳ: ಸಾಮಾನ್ಯ ಕಾನೂನಿನ ಅರಿವು ವ್ಯಾಪಕವಾಗಿ ಹದಿಹರೆಯದ ಮಕ್ಕಳ ಪಠ್ಯಕ್ರಮದಲ್ಲಿ ಅಳವಡಿಕೆಯಾದಾಗ ಮಾತ್ರವೇ ದೇಶದ ಬದಲಾವಣೆ ಸಾಧ್ಯ ಎಂದು ಕರ್ನಾಟಕ ಸರ್ಕಾರ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ್ವರ ಬಬಲೇಶ್ವರ ಹೇಳಿದರು.
ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರ ಸಮೂಹ ವಿದ್ಯಾ ಸಂಸ್ಥೆಯಲ್ಲಿ ಭಾನುವಾರ ನಡೆದ ವಿದ್ಯಾ ಭಾರತಿ ಕರ್ನಾಟಕ ವಿಜಯಪುರ ಜಿಲ್ಲಾ ಸಂಕುಲಗಳ ಶಾಲೆಗಳ 2025-26ನೇ ಸಾಲಿನ ಶೈಕ್ಷಣಿಕ ಸಹಮಿಲನದಲ್ಲಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು.
ಸಂಸ್ಕಾರದ ಆಯ್ಕೆಯಲ್ಲಿ ಬದುಕಿನ ಉಸಿರು ಅಡಗಿರುತ್ತದೆ. ತಾಯಿ, ರೈತ, ಶಿಕ್ಷಕ ರುಗಳಿಗೆ ಯಾವುದೇ ಜಾತಿ, ಭೇದ-ಭಾವ ಸಂಕೋಲೆಗಳ ಬಂಧನವಿಲ್ಲ. ಸಮಾಜದ ಅನಿಷ್ಟ ಪದ್ಧತಿ ದೂರವಾಗಬೇಕಾದರೆ ವಿದ್ಯಾರ್ಥಿ ದೆಸೆಯಲ್ಲಿಯೆ ವ್ಯಾಸಂಗಮಾಡಿರಬೇಕು ಎಂದು ಹೇಳಿದರು.
ಕೇತ್ರ ಶಿಕ್ಷಣಾಧಿಕಾರಿಗಳಾದ ಬಿ.ಎಸ್.ಸಾವಳಗಿ ಮಾತನಾಡಿ, ವಿದ್ಯಾ ಭಾರತಿ ಸಂಕುಲಗಳು ಭಾರತೀಯ ಚಿಂತನೆಗಳನ್ನು ಎತ್ತರಿಸುವ ಪ್ರಯತ್ನ ಮಾಡುತ್ತಿದೆ. ನಮ್ಮೆಲ್ಲರಲ್ಲಿ ನಾವೆಲ್ಲ ಒಂದು ಎನ್ನುವ ಭಾವೆನೆ ಸದಾ ಇರಬೇಕು. ಶಿಕ್ಷಕರು ತಮ್ಮಲ್ಲಿ ವಿದ್ಯಾರ್ಥಿಗಳನ್ನ ವಿವಿಧ ಕ್ಷೇತ್ರದ ಬೆಳವಣಿಗೆಗೆ ಬೇಕಾದ ತ್ಯಾಗಕ್ಕೆ ಸಿದ್ದರಾಗುವ , ರೈತರನ್ನು ಹಾಗೂ ಶಿಕ್ಷಕರನ್ನು ತಯಾರುಮಾಡಬೇಕಾಗಿದೆ. ಮಕ್ಕಳನ್ನು ದೇಶದ ರತ್ನವನ್ನಾಗಿ ತಯಾರುಮಾಡುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ ಎಂದು ಹೇಳಿದರು.
ಆರ್.ಎಸ್.ಎಸ್ ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ ನಾಗೇಶ ಚಿನ್ನಾರೆಡ್ಡಿ ಉಪನ್ಯಾಸ ನೀಡಿದರು.
ವಿದ್ಯಾ ಭಾರತಿ ಜಿಲ್ಲಾ ಅಧ್ಯಕ್ಷರಾದ ಪ್ರಭು ಕಡಿ, ಪ್ರಾಂತ ವಿದ್ಯಾ ಭಾರತಿ ಕಾರ್ಯದರ್ಶಿ ವಸಂತ ಮಾಧವ, ಜ್ಞಾನ ಭಾರತಿ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಬಿ.ಪಿ.ಕುಲಕರ್ಣಿ, ವಿದ್ಯಾ ಭಾರತಿ ಜಿಲ್ಲಾ ಉಪಾಧ್ಯಕ್ಷರಾದ ಚಂದ್ರಶೇಖರ ಕವಟಗಿ, ಕರ್ನಾಟಕ ಬ್ಯಾಂಕ್ ನಿರ್ದೇಶಕರಾದ ಸತೀಶ ಓಸ್ವಾಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.