ADVERTISEMENT

ಕೋವಿಡ್‌ ಅವ್ಯವಹಾರ ಪ್ರಕರಣ ತನಿಖೆಯಾಗಲಿ: ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2023, 15:38 IST
Last Updated 30 ಡಿಸೆಂಬರ್ 2023, 15:38 IST
ಬಿ.ವೈ.ವಿಜಯೇಂದ್ರ
ಬಿ.ವೈ.ವಿಜಯೇಂದ್ರ   

ವಿಜಯಪುರ: ‘ಕೋವಿಡ್‌ ಹೆಸರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅವ್ಯವಹಾರ ನಡೆದಿದೆಯೆಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದ್ದು, ರಾಜ್ಯ ಸರ್ಕಾರ ತನಿಖೆ ನಡೆಸಲಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.

‘ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧವೂ ಆರೋಪವಿದ್ದರೆ, ರಾಜ್ಯ ಸರ್ಕಾರ ಅನುಕಂಪ ತೋರಿಸುವುದು ಅಗತ್ಯವಿಲ್ಲ. ಸಂಬಂಧಪಟ್ಟವರಿಂದ ದಾಖಲೆ ಪಡೆದು ತನಿಖೆ ನಡೆಸಲಿ. ನಾವು ಯಾವುದೇ ಕಾರಣಕ್ಕೂ ಭಯಪಡುವುದಿಲ್ಲ’ ಎಂದು ಅವರು  ಸುದ್ದಿಗಾರರಿಗೆ ಶನಿವಾರ ತಿಳಿಸಿದರು.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಚೆಕ್‌ ಬೌನ್ಸ್ ಆಗಿದೆ. ಹಣ ಜಮೆ ಮಾಡದಿದ್ದರೆ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಇದು ರಾಜ್ಯದ ಸಚಿವರ ಸ್ಥಿತಿ.
ಬಿ.ವೈ.ವಿಜಯೇಂದ್ರ, ಅಧ್ಯಕ್ಷ, ಬಿಜೆಪಿ ರಾಜ್ಯ ಘಟಕ

‘ಕೇಂದ್ರ ಸರ್ಕಾರದ ಬಳಿ ನಾನು ಅಥವಾ ಪಕ್ಷದ ಮುಖಂಡರು ಚಾಡಿ, ದೂರುಗಳನ್ನು ಹೇಳಿಲ್ಲ. ಅದರ ಅವಶ್ಯಕತೆಯೂ ನಮಗಿಲ್ಲ. ಭವಿಷ್ಯದಲ್ಲಿ ಪರಿಸ್ಥಿತಿ ಬಂದಂತೆ ಕೇಂದ್ರದಲ್ಲಿ ವರಿಷ್ಠರು ತೀರ್ಮಾನಿಸಿ, ಅಗತ್ಯ ಕ್ರಮ ತೆಗೆದುಕೊಳ್ಳುತ್ತಾರೆ’ ಎಂದು ಅವರು ತಿಳಿಸಿದರು.

ADVERTISEMENT

‘ರಾಜ್ಯ ಸರ್ಕಾರದ ಆದ್ಯತೆ ಅಲ್ಪಸಂಖ್ಯಾತರು ಆಗಿದ್ದಾರೆಯೇ ಹೊರತು ರೈತರಲ್ಲ. ಅಲ್ಪಸಂಖ್ಯಾತರ ತುಷ್ಟೀಕರಣದ ನೀತಿಗಳು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮುಳುವಾಗಲಿವೆ. ಎಲ್ಲವನ್ನೂ ಗಮನಿಸುತ್ತಿರುವ ಜನರು ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ’ ಎಂದರು.

ಯಾವುದೇ ಕ್ಷಣ ವಿಧಾನಸಭಾ ಚುನಾವಣೆ

'ಇದಕ್ಕೂ ಮುನ್ನ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಬಿ.ವೈ.ವಿಜಯೇಂದ್ರ ಮಾತನಾಡಿ, ರಾಜ್ಯದಲ್ಲಿ ಯಾವುದೇ ಕ್ಷಣ ವಿಧಾನಸಭೆ ಚುನಾವಣೆ ಎದುರಾಗಲಿದ್ದು, ಕಾರ್ಯಕರ್ತರು ಸನ್ನದ್ಧರಾಗಿಬೇಕು. ಯಾವಾಗ ಚುನಾವಣೆ ನಡೆದರೂ ಬಿಜೆಪಿ 140 ಸ್ಥಾನಗಳನ್ನು ಗೆಲ್ಲಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.