ADVERTISEMENT

ಸ್ವತಂತ್ರ ಧರ್ಮಕ್ಕಾಗಿ ಟೊಂಕ ಕಟ್ಟಿ ನಿಲ್ಲಿ: ಲಿಂಗಾಯತರಿಗೆ ಜಾಮದಾರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 14 ಮೇ 2019, 11:37 IST
Last Updated 14 ಮೇ 2019, 11:37 IST
ಸೊಲ್ಲಾಪುರ ತಾಲ್ಲೂಕಿನ ಕಂದಲಗಾವದ ಯಶರಾಜ ಫಾರ್ಮ್‌ ಹೌಸ್‌ನಲ್ಲಿ ನಡೆದ ಲಿಂಗಾಯತ ಸ್ವತಂತ್ರ ಧರ್ಮ ಕುರಿತ ಚರ್ಚಾಕೂಟದಲ್ಲಿ ಡಾ.ಎಸ್‌.ಎಂ.ಜಾಮದಾರ ಮಾತನಾಡಿದರು
ಸೊಲ್ಲಾಪುರ ತಾಲ್ಲೂಕಿನ ಕಂದಲಗಾವದ ಯಶರಾಜ ಫಾರ್ಮ್‌ ಹೌಸ್‌ನಲ್ಲಿ ನಡೆದ ಲಿಂಗಾಯತ ಸ್ವತಂತ್ರ ಧರ್ಮ ಕುರಿತ ಚರ್ಚಾಕೂಟದಲ್ಲಿ ಡಾ.ಎಸ್‌.ಎಂ.ಜಾಮದಾರ ಮಾತನಾಡಿದರು   

ಸೊಲ್ಲಾಪುರ: ‘ಲಿಂಗಾಯತ ಸ್ವತಂತ್ರ ಧರ್ಮ. ಸ್ವತಂತ್ರ ಪೂರ್ವದಲ್ಲಿ ಸೊಲ್ಲಾಪುರದ ಸಿದ್ಧರಾಮನ ನೆಲದಲ್ಲಿ ಮೊದಲ ಬಾರಿಗೆ ಪ್ರತ್ಯೇಕ ಲಿಂಗಾಯತ ಧರ್ಮದ ಧ್ವನಿ ಎದ್ದಿತ್ತು’ ಎಂದು ನಿವೃತ್ತ ಐಎಎಸ್ ಅಧಿಕಾರಿ ಡಾ.ಎಸ್‌.ಎಂ.ಜಾಮದಾರ ಹೇಳಿದರು.

ತಾಲ್ಲೂಕಿನ ಕಂದಲಗಾವದ ಯಶರಾಜಫಾರ್ಮ್‌ ಹೌಸ್‌ನಲ್ಲಿ ಈಚೆಗೆ ಲಿಂಗಾಯತ ಸೇವಾ ಸಂಘ ಏರ್ಪಡಿಸಿದ್ದ ಲಿಂಗಾಯತ ಸ್ವತಂತ್ರ ಧರ್ಮ ಕುರಿತ ರಾಜ್ಯ ಮಟ್ಟದ ಚರ್ಚಾಕೂಟದಲ್ಲಿ ಅವರು ಮಾತನಾಡಿದರು.

‘1942ರಲ್ಲಿ ಸೊಲ್ಲಾಪುರದಲ್ಲಿ ಸ್ಥಾಪನೆಗೊಂಡ ವೀರಶೈವ ಮಹಾಸಭೆಯ ಅಧ್ಯಕ್ಷರಾಗಿದ್ದ ಮಲ್ಲಪ್ಪ ವಾರದ ಮತ್ತು ಸರದಾರ ಮಡಿವಾಳೇಶ್ವರರ ನೇತೃತ್ವದಲ್ಲಿ ಪ್ರತ್ಯೇಕಲಿಂಗಾಯತ ಧರ್ಮದ ಹೋರಾಟ ಆರಂಭಗೊಂಡಿತು. ಅಂದಿನ ಬ್ರಿಟಿಷ್ ಪಾರ್ಲಿಮೆಂಟ್‌ನ ಪ್ರತಿನಿಧಿಯಾಗಿ ಭಾರತಕ್ಕೆ ಬಂದಿದ್ದ ಸೈಫ್‌ನ್ಕ್ರಿಸ್‌ಗೆ ಹಾಗೂ ಸಂವಿಧಾನ ರಚನಾ ಸಮಿತಿಗೆ ಈ ಕುರಿತಂತೆ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಸಂಬಂಧಿಸಿದ ದಾಖಲೆಗಳಿವೆ ಎಂದ ಅವರು, ಲಿಂಗಾಯತ ಅಸ್ಮಿತೆಗಾಗಿ ಹೋರಾಟ ಅನಿವಾರ್ಯ ಆಗಿರುವುದರಿಂದ ಸಮಾಜದವರು ಟೊಂಕ ಕಟ್ಟಿ ನಿಲ್ಲಬೇಕು’ ಎಂದರು.

ADVERTISEMENT

ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ‘ಮಹಾರಾಷ್ಟ್ರದ ಲಿಂಗಾಯತರಿಂದಲೇ ಕರ್ನಾಟಕದ ಲಿಂಗಾಯತರು ಎಚ್ಚೆತ್ತುಗೊಂಡಿದ್ದು, ಅದಕ್ಕಾಗಿಯೇ ಸೊಲ್ಲಾಪುರದಲ್ಲಿ ಚರ್ಚಾಕೂಟ ಆಯೋಜಿಸಲಾಗಿದೆ. ಸ್ವತಂತ್ರ ಧರ್ಮಕ್ಕಾಗಿ ಎಲ್ಲರೂ ಹೋರಾಟ ಮಾಡಬೇಕಿದೆ’ ಎಂದು ತಿಳಿಸಿದರು.

ಕೋರಣೇಶ್ವರ ಸ್ವಾಮೀಜಿ, ಬಸವೇಶ್ವರ ಯರಟೆಅಪ್ಪ, ಮಹಾನಂದಾ ತಾಯಿ, ಡಾ.ಅಶೋಕ ನಗರಕರ, ಶಿವಾನಂದ ಹೈಬತಪುರೆ, ವಿಜಯಕುಮಾರ ಶೆಠೆ, ಸರಂಚ ಪಾಟೀಲ, ಜಗದೀಶ ಪಾಟೀಲ, ರಾಜಶೇಖರ ಶಿವಧಾರೆ, ವಿಜಯಕುಮಾರ ಹತ್ತುರೆ, ಸಕಲೇಶ ಬಾಭುಳಗಾವಕರ, ಸುಧೀರ ಥೋಬಡೆ, ಅಮೋಲ ಮಿಟಕರಿ, ಸಾರಿಕಾ ಭರಲೆ ಇದ್ದರು.

ಡಾ.ಮಹಾದೇವ ಜೋಕಾರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀನಿವಾಸ ಬಡೂರೆ ನಿರೂಪಿಸಿದರು. ಸುನೀಲ ಸಮಾಣೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.