
ಈಚೆಗೆ ಅಂಗಾಂಗ ದಾನ ಮಾಡಿದ ಬಲರಾಮ ಕೃಷ್ಣ ಕುಟುಂಬಸ್ಥರನ್ನು ಸಚಿವ ಎಂ.ಬಿ.ಪಾಟೀಲ ಸನ್ಮಾನಿಸಿದರು.
ವಿಜಯಪುರ: ‘ಸಾರ್ವಜನಿಕರಲ್ಲಿ ಅಂಗಾಂಗ ದಾನದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಾನೇ ಸ್ವತಃ ಅಂಗಾಂಗ ದಾನ ಮಾಡಲು ವಾಗ್ದಾನ ಮಾಡುತ್ತೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.
ನಗರದಲ್ಲಿ ಇತ್ತೀಚೆಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡ ಬಳಿಕ ಎರಡು ಕಣ್ಣು (ಕಾರ್ನಿಯಾ) ಮತ್ತು ಎರಡು ಕಿಡ್ನಿಗಳನ್ನು ದಾನ ಮಾಡಿದ ಬಲರಾಮ ಕೃಷ್ಣ ಬಾಗಲಕೋಟ ಕುಟುಂಬದ ಸದಸ್ಯರನ್ನು ಬಿಎಲ್ಡಿಇ ಸಂಸ್ಥೆಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಅವರು ಮಾತನಾಡಿದರು.
‘ಅಂಗಾಂಗ ದಾನ ಮಾಡುವುದರಿಂದ ಸತ್ತ ಮೇಲೂ ಬದುಕುತ್ತೇವೆ. ಹತ್ತಾರು ಜನರಿಗೆ ಜೀವದಾನ ಮಾಡುತ್ತೇವೆ ಎಂಬ ಅರಿವು ಜನರಲ್ಲಿ ಮೂಡಬೇಕಾಗಿದೆ. ಈ ನಿಟ್ಟಿನಲ್ಲಿ ಅಂಗಾಂಗ ದಾನದ ಮಹತ್ವವನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಬಿಎಲ್ಡಿಇ ಸಂಸ್ಥೆಯಿಂದ ಅಭಿಯಾನ ಆರಂಭಿಸಲಾಗುವುದು’ ಎಂದು ತಿಳಿಸಿದರು.
‘ವಿಜಯಪುರ, ಬಾಗಲಕೋಟೆ ಅವಳಿ ಜಿಲ್ಲೆಗಳಲ್ಲಿ ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಯಿಂದ ಅಂಗಾಂಗ ದಾನ ಪಡೆದಿರುವುದು ಇದೇ ಮೊದಲ ಸಲವಾಗಿದೆ. ಬಿ.ಎಂ.ಪಾಟೀಲ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಅಂಗಾಂಗಗಳನ್ನು ಬೇರ್ಪಡಿಸಲಾಗಿದೆ. ನಮ್ಮ ಆಸ್ಪತ್ರೆಯ ವೈದ್ಯರ ತಂಡವನ್ನು ಅಭಿನಂದಿಸುತ್ತೇನೆ’ ಎಂದು ಹೇಳಿದರು.
‘ಬಲರಾಮ ಅವರ ಮಿದುಳು ನಿಷ್ಕ್ರಿಯವಾದ ಬಳಿಕ ಅವರ ಕುಟುಂಬದವರು ಅಂಗಾಂಗವನ್ನು ದಾನ ಮಾಡಿ ಇಬ್ಬರು ವ್ಯಕ್ತಿಗಳಿಗೆ ಜೀವದಾನ ಮಾಡಿದ್ದಾರೆ. ಈ ಮೂಲಕ ಅವರು ಇತರರಿಗೆ ಮಾದರಿಯಾಗುವ ಕೆಲಸ ಮಾಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಲರಾಮ ಕುಟುಂಬದವರಿಗೆ ಬಿಎಲ್ಡಿಇ ಸಂಸ್ಥೆಯಲ್ಲಿ ಶಿಕ್ಷಣ, ಉದ್ಯೋಗ ಒದಗಿಸುವುದಾಗಿ ಸಚಿವರು ಭರವಸೆ ನೀಡಿದರು.
ಬಲರಾಮ ಅವರ ಸಹೋದರಿಯರಾದ ಶೃತಿ ಹಳ್ಳದಮನಿ, ರೂಪಾ, ಸಹೋದರ ಪರಶುರಾಮ ಬಾಗಲಕೋಟ, ಮಾವಂದಿಯರಾದ ಕಾಶಿನಾಥ, ಶವಣಕುಮಾರ ಅವರಿಗೆ ಕೃತಜ್ಞತೆ ಸಲ್ಲಿಸಿ, ಅವರಿಗೆ ಬಿಎಲ್ಡಿಇ ಆರೋಗ್ಯ ಕಾರ್ಡ್ ವಿತರಿಸಿದರು.
ಯಾವಾವ ಅಂಗಾಂಗ ದಾನ: ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ದೇಹದಿಂದ ಹೃದಯ, ಶ್ವಾಸಕೋಶ(ಲಂಗ್ಸ್), ಲಿವರ್, ಕಿಡ್ನಿ, ಪ್ಯಾನ್ಕ್ರಿಯಾಸ್, ಕಣ್ಣುಗುಡ್ಡೆಗಳು, ಚರ್ಮ, ಎಲುಬುಗಳು, ಹೃದಯದ ವಾಲ್ವ್ಗಳು, ರಕ್ತನಾಳಗಳು, ಎಲ್ಲ ಕೋಶಗಳನ್ನು ದಾನ ಮಾಡಬಹುದಾಗಿದೆ. ಅವಕಾಶವಿದ್ದಾಗ ಜನರು ಅಂಗಾಂಗ ದಾನ ಮಾಡಲು ಮುಂದೆ ಬರಬೇಕು ಎಂದು ಮನವಿ ಮಾಡಿದರು.
ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಕುಲಪತಿ ಡಾ. ಅರುಣ ಇನಾಮದಾರ, ಬಿ. ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ.ವಿಜಯಕುಮಾರ ಕಲ್ಯಾಣಪ್ಪಗೋಳ, ಯುರಾಲಜಿ ವಿಭಾಗ ಮುಖ್ಯಸ್ಥ ಡಾ.ಎಸ್.ಬಿ.ಪಾಟೀಲ, ಪ್ರಾಚಾರ್ಯರಾದ ಡಾ. ತೇಜಶ್ವಿನಿ ವಲ್ಲಭ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.