ADVERTISEMENT

ವಿಜಯಪುರ: ತೆಪ್ಪ ಮಗುಚಿ ನಾಪತ್ತೆಯಾಗಿದ್ದ ಮೀನುಗಾರರ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2020, 6:59 IST
Last Updated 13 ಜೂನ್ 2020, 6:59 IST
ಕೃಷ್ಣ ನದಿ ತೀರದಲ್ಲಿ ಶೋಧ ಕಾರ್ಯಾಚರಣೆ ವೇಳೆ ಸೇರಿದ್ದ ಜನ
ಕೃಷ್ಣ ನದಿ ತೀರದಲ್ಲಿ ಶೋಧ ಕಾರ್ಯಾಚರಣೆ ವೇಳೆ ಸೇರಿದ್ದ ಜನ   

ವಿಜಯಪುರ: ಕೊಲ್ಹಾರ ಸಮೀಪ ಕೃಷ್ಣಾ ನದಿ ಹಿನ್ನೀರಿನಲ್ಲಿ ಗುರುವಾರ ಸಂಜೆ ಮೀನು ಹಿಡಿಯಲು ಹೋದ ವೇಳೆ ತೆಪ್ಪ ಮಗುಚಿ ನಾಪತ್ತೆಯಾಗಿದ್ದ ಇಬ್ಬರು ಮೀನುಗಾರರ ಶವ ಶನಿವಾರ ಬೆಳಿಗ್ಗೆ ಕೃಷ್ಣಾ ನದಿ ತೀರಗಳಲ್ಲಿ ಪತ್ತೆಯಾಗಿವೆ.

ಸಿದ್ದನಾಥ ತಾಂಡಾದ ಅಕ್ಷಯ್ ಲಮಾಣಿ, ಪರಶುರಾಮ ಲಮಾಣಿ ಹಾಗೂ ರಮೇಶ ಲಮಾಣಿ ಮೂವರು ಮೀನುಗಾರರು ಮೀನು ಹಿಡಿಯಲು ಸಿದ್ದನಾಥ ಬಳಿಯ ಕೃಷ್ಣಾ ನದಿಯಲ್ಲಿ ಸುಮಾರು ಒಂದು ಕಿ.ಮೀನಷ್ಟು ದೂರ ತೆಪ್ಪದಲ್ಲಿ ತೆರಳಿದ್ದರು. ಸಂಜೆ ಮಳೆಗಾಳಿಗೆ ತೆಪ್ಪ ಮಗುಚಿದ ಪರಿಣಾಮ ಮೂವರ ಪೈಕಿ ಅಕ್ಷಯ್ ಈಜಿ ದಡ ಸೇರಿದ್ದು, ಪರಶುರಾಮ ಲಮಾಣಿ (36), ರಮೇಶ ಲಮಾಣಿ (38) ಇಬ್ಬರು ನಾಪತ್ತೆಯಾಗಿದ್ದರು. ಕೊಲ್ಹಾರ ತಾಲ್ಲೂಕಾಡಳಿತ ತಹಶೀಲ್ದಾರ್ ಎಂ.ಎ.ಎಸ್. ಬಾಗವಾನ ನೇತೃತ್ವದಲ್ಲಿ ಕೆಬಿಜೆಎನ್ಎಲ್ ರಕ್ಷಣಾ ತಂಡ, ಅಗ್ನಿಶಾಮಕ ದಳ, ಮೀನುಗಾರಿಕೆ ಇಲಾಖೆ, ಸ್ಥಳೀಯ ಮೀನುಗಾರರ ಸಹಕಾರದೊಂದಿಗೆ ಶುಕ್ರವಾರ ಸಂಜೆವರೆಗೂ ಶೋಧ ಕಾರ್ಯ ನಡೆಸಿದರೂ ಮೀನುಗಾರರ ದೇಹಗಳು ಪತ್ತೆಯಾಗಿರಲಿಲ್ಲ.

ನಿಡಗುಂದಿ ತಾಲ್ಲೂಕಿನ ಗಣಿ ಗ್ರಾಮದ ಬಳಿಯ ನದಿ ದಡೆಗಳಲ್ಲಿ ಶವಗಳು ಪತ್ತೆಯಾಗಿವೆ. ಸ್ಥಳದಲ್ಲಿ ಕೊಲ್ಹಾರ ಹಾಗೂ ನಿಡಗುಂದಿ ಠಾಣೆಗಳ ಪಿಎಸ್ಐ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆಯಾದ ಬಳಿಕ ಮೀನುಗಾರರ ಕುಟುಂಬಸ್ಥರಿಗೆ ದೇಹಗಳನ್ನು ಹಸ್ತಾಂತರಿಸಲಾಗುವುದು ಎಂದು ಕೊಲ್ಹಾರ ತಹಶೀಲ್ದಾರ್ ಎಂಎಎಸ್ ಬಾಗವಾನ ‘ಪ್ರಜಾವಾಣಿ’ ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.