ADVERTISEMENT

ದಿನವಿಡಿ ಜಿಟಿಜಿಟಿ ಮುಂಗಾರು ಮಳೆ: ಕೃಷ್ಣಾ ನದಿ ತೀರದ ಜನರಿಗೆ ಮುನ್ನೆಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2022, 13:01 IST
Last Updated 9 ಜುಲೈ 2022, 13:01 IST
ವಿಜಯಪುರ ನಗರದಲ್ಲಿ ಶನಿವಾರ ಸುರಿದ ಜಿಟಿಜಿಟಿ ಮಳೆಯಲ್ಲಿ ಕಾಲೇಜು ವಿದ್ಯಾರ್ಥಿನಿಯರು ಛತ್ರಿಯ ಆಸರೆಯಲ್ಲಿ ಸಾಗಿದರು–ಪ್ರಜಾವಾಣಿ ಚಿತ್ರ
ವಿಜಯಪುರ ನಗರದಲ್ಲಿ ಶನಿವಾರ ಸುರಿದ ಜಿಟಿಜಿಟಿ ಮಳೆಯಲ್ಲಿ ಕಾಲೇಜು ವಿದ್ಯಾರ್ಥಿನಿಯರು ಛತ್ರಿಯ ಆಸರೆಯಲ್ಲಿ ಸಾಗಿದರು–ಪ್ರಜಾವಾಣಿ ಚಿತ್ರ   

ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶುಕ್ರವಾರ ಸಂಜೆಯಿಂದ ಆರಂಭವಾದ ತುಂತುರು ಮಳೆ ಶನಿವಾರ ದಿನವಿಡೀ ಬಿಟ್ಟು, ಬಿಟ್ಟು ಸುರಿದಿದೆ.

ಮುಂಗಾರು ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗೆ ತೀವ್ರ ಹಿನ್ನೆಡೆಯಾಗಿತ್ತು. ಇದೀಗ ಎರಡು ದಿನಗಳಿಂದ ಆಗಿರುವಹದ ಮಳೆಯಿಂದ ರೈತರಿಗೆ ಅನುಕೂಲವಾಗಿದೆ.ಈಗಾಗಲೇ ಬಿತ್ತನೆಯಾಗಿ ಮೊಳಕೆಯಾಗುವ ಹಂತದಲ್ಲಿದ್ದ ಹಾಗೂ ಬಾಡುವ ಹಂತದಲ್ಲಿದ್ದ ಬೆಳೆಗೆ ಇದೀಗ ಸುರಿದಿರುವ ಮಳೆ ಜೀವಕಳೆ ನೀಡಿದೆ.

ಎರಡು ದಿನಗಳಿಂದ ದಟ್ಟ ಮೋಡಗಳು ಆವರಿಸಿದ್ದು, ಶೀತಗಾಳಿ ಬೀಸುತ್ತಿದೆ. ಜಿಲ್ಲೆಯ ವಾತಾವರಣ ಮಲೆನಾಡಿನಂತಾಗಿದೆ. ಮಳೆ, ಗಾಳಿ ಕಾರಣ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ.

ADVERTISEMENT

ನದಿ ತೀರದ ಜನರಿಗೆ ಮುನ್ನೆಚ್ಚರಿಕೆ:ಮಹಾರಾಷ್ಟ್ರದ ಕೃಷ್ಣಾ ಕೊಳ್ಳದಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿರುವುದರಿಂದ ಆಲಮಟ್ಟಿಯ ಕೃಷ್ಣಾ ಜಲಾಶಯಕ್ಕೆ ಒಳ ಹರಿವು ಹೆಚ್ಚಿದ್ದು, ಅಧಿಕಪ್ರಮಾಣದ ನೀರು ಹರಿದು ಬರುತ್ತಿದೆ.ಜಲಾಶಯ ಅರ್ಧಕ್ಕಿಂತ ಅಧಿಕ ಭರ್ತಿಯಾಗಿದೆ.

123.081 ಟಿಎಂಸಿ ಅಡಿ ಸಾಮರ್ಥ್ಯದ ಆಲಮಟ್ಟಿ ಜಲಾಶಯದಲ್ಲಿ 70.578 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಶನಿವಾರ 78,390 ಕ್ಯುಸೆಕ್ ಒಳಹರಿವು ಇತ್ತು.

ಜಲಾಶಯದಿಂದ ಯಾವುದೇ ಕ್ಷಣದಲ್ಲಾದರೂ ನೀರು ಹೊರಬಿಡುವ ಸಂಭವ ಇರುವುದರಿಂದ ಕೆಳ ಪ್ರದೇಶದಲ್ಲಿ ಬಾಧಿತವಾಗುವ ಗ್ರಾಮಗಳ ಹಾಗೂ ನಗರಗಳ ಜನ, ಜಾನುವಾರು, ಆಸ್ತಿ ಪಾಸ್ತಿ, ನೀರಿನ ಪಂಪು ಸೆಟ್ ಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿಕೊಳ್ಳಬೇಕು ಎಂದು ಆಲಮಟ್ಟಿ ಕೃಷ್ಣಾ ಜಲಾಶಯದ ಕಾರ್ಯಪಾಲಕ ಎಂಜಿನಿಯರ್‌ ಸಾರ್ವಜನಿಕರಿಗೆ ಪ್ರಕಟಣೆಯ ಮೂಲಕ
ಮನವಿ ಮಾಡಿದ್ದಾರೆ.

ಮಳೆ ವಿವರ: ಶನಿವಾರ ಬೆಳಿಗ್ಗೆ 8 ಗಂಟೆ ವರೆಗೆ ಜಿಲ್ಲೆಯಲ್ಲಿ 8 ಮಿ.ಮೀ. ಮಳೆಯಾಗಿದೆ.ಬಸವನ ಬಾಗೇವಾಡಿ 6.2, ವಿಜಯಪುರ 7.5, ಇಂಡಿ 10.2, ಮುದ್ದೇಬಿಹಾಳ 3.3, ಸಿಂದಗಿ 9, ಬಬಲೇಶ್ವರ 8.5, ಚಡಚಣ 15.2, ನಿಡಗುಂದಿ 6.3, ತಾಳಿಕೋಟೆ 6.2, ತಿಕೋಟಾ 7.8, ಕೊಲ್ಹಾರ 8, ದೇವರ ಹಿಪ್ಪರಗಿ 6.1 ಮಿ.ಮೀ. ಮಳೆಯಾಗಿರುವುದಾಗಿ ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.