ಆಲಮೇಲ(ವಿಜಯಪುರ): ಪಟ್ಟಣದ ಮುಸ್ಲಿಂ ಮುಖಂಡ ಮಹಿಬೂಬ ಮಸಳಿ ಅವರು ಅನಾಥ ಹಿಂದೂ ಬಾಲಕಿಯನ್ನು ಸಾಕಿ, ಸಲುಹಿ ಪ್ರಾಯಕ್ಕೆ ಬಂದ ಬಳಿಕ ಆಕೆಗೆ ಹಿಂದೂ ಸಮಾಜದ ವರನೊಂದಿಗೆ ಹಿಂದೂ ಸಂಪ್ರದಾಯದಂತೆ ಮದುವೆ ಮಾಡುವ ಮೂಲಕ ಸೌಹಾರ್ದ ಸಾರಿದಿದ್ದಾರೆ.
ಆಲಮೇಲ ಪಟ್ಟಣದ ದನದ ಬಜಾರ್ ಬಡಾವಣೆಯ ಪುಟ್ಟ ಬಾಲಕಿ ಪೂಜಾಳ ತಂದೆ ಹಾಗೂ ತಾಯಿ ಸುಮಾರು 10 ವರ್ಷದ ಹಿಂದೆ ಸಾವಿಗೀಡಾಗಿದ್ದರು. ನಂತರ ಅಜ್ಜಿಯೊಂದಿಗೆ ಇದ್ದ ಪೂಜಾ ಕೊನೆಗೆ ಅವರನ್ನು ಕಳೆದುಕೊಂಡು ದಿಕ್ಕು ತೋಚದಾದಳು. ಈಕೆಗೆ ಸಹೋದರ, ಸಹೋದರಿ ಸೇರಿದಂತೆ ಯಾರೂ ಇರಲಿಲ್ಲ.
ಅದೇ ಬಡಾವಣೆಯ ಮುಸ್ಲಿಂ ಮುಖಂಡ ಮಹಿಬೂಬ ಮಸಳಿ ಅವರು ಅನಾಥೆ ಪೂಜಾ ಶೇಖರ ವಡಿಗೇರಿಗೆ ತಮ್ಮ ಮನೆಯಲ್ಲಿ ಆಶ್ರಯ ನೀಡಿದ್ದರು. ಪ್ರಾಯಕ್ಕೆ ಬಂದ ಪೂಜಾಳಿಗೆ ಮಹಿಬೂಬ ಹಾಗೂ ಅವರ ಪತ್ನಿ ಸೇರಿಕೊಂಡು ಅವಳ ಜಾತಿಗೆ ಸೇರಿದ ವರನನ್ನು ಹುಡುಕಿ, ಆಕೆಯ ಒಪ್ಪಿಗೆ ಮೇರೆಗೆ ಹಿಂದೂ ಸಂಪ್ರದಾಯದ ಪ್ರಕಾರ ಜುಲೈ 30 ರಂದು ಮದುವೆ ಮಾಡಿಸಿದ್ದಾರೆ.
***
ಅನಾಥಳಾದ ನನ್ನನ್ನು ತಮ್ಮ ಮನೆಯಲ್ಲಿ ಮಗಳ ಹಾಗೆ ಸಾಕಿ ಮದುವೆ ಮಾಡಿ ಕೊಟ್ಟಿದ್ದಾರೆ. ಇವರು ನನ್ನ ಪಾಲಿಗೆ ದೇವರ ಹಾಗೆ. ಒಂದು ದಿನವೂ ಅನಾಥ ಪ್ರಜ್ಞೆ ನನಗೆ ಕಾಡಲಿಲ್ಲ. ಅವರ ಋಣ ನಾನೇಂದೂ ತೀರಿಸಲಾಗದು
–ಪೂಜಾ ವಡಿಗೇರಿ, ಮದುಮಗಳು
***
ಪೂಜಾಳ ಸಂಕಷ್ಟ ನೋಡಿ ಅವಳ ಜೀವನಕ್ಕೆ ಒಂದು ದಾರಿ ನೀಡಬೇಕು ಎಂದು ನಿರ್ಧರಿಸಿದೆ. ನನ್ನ ಮಗಳ ಜೊತೆಗೆ ಅವಳು ನನಗೆ ಮಗಳು ಎಂದು ತಿಳಿದು ಸಹಾಯ ಮಾಡಿದ್ದೇನೆ
–ಮಹಿಬೂಬ ಮಸಳಿ,
ಮುಸ್ಲಿಂ ಮುಖಂಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.