
ವಿಜಯಪುರ: ಮಾದಕ ವಸ್ತುಗಳ ಸಹವಾಸ ವ್ಯಕ್ತಿಯನ್ನು ವಿನಾಶದ ಕಡೆಗೆ ಕರೆದೊಯ್ಯುತ್ತದೆ. ಅವುಗಳಿಂದ ದೂರ ನಿಲ್ಲುವ ದೃಢವಾದ ನಿರ್ಧಾರ ಮಾತ್ರ ನಿಮ್ಮ ಭದ್ರ ಭವಿಷ್ಯಕ್ಕೆ ಬುನಾದಿ ಹಾಕಬಲ್ಲದು ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಭಗವಾನ್ ಬಿ.ಸಿ.ತಿಳಿಸಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಮೈದಾನದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಶುಕ್ರವಾರ ನಡೆದ ನಶಾ ಮುಕ್ತ ಕ್ಯಾಂಪಸ್, ಅಂಗಾಂಗ ದಾನ ಅಭಿಯಾನದಲ್ಲಿ ಅವರು ಮಾತನಾಡಿದರು.
ರಾಜ್ಯದ ಎಲ್ಲ ಕಾಲೇಜುಗಳ ಆವರಣಗಳನ್ನು ಸಂಪೂರ್ಣ ನಶಾಮುಕ್ತ ಮಾಡುವ ನಮ್ಮ ಬದ್ಧತೆಯ ಭಾಗವಾಗಿ ಈಗಾಗಲೇ 10 ಜಿಲ್ಲೆಗಳಲ್ಲಿ ನಶಾಮುಕ್ತ ಕ್ಯಾಂಪಸ್ ಅಭಿಯಾನ ನಡೆಸಿದ್ದೇವೆ. ಸುಮಾರು 300 ಕಾಲೇಜುಗಳ ಸುಮಾರು 55 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಜಾಥಾಗಳಲ್ಲಿ ಪಾಲ್ಗೊಂಡಿದ್ದಾರೆ. ನಮ್ಮ ಎಲ್ಲಾ ಕಾಲೇಜುಗಳನ್ನು ಸಂಪೂರ್ಣ ನಶಾಮುಕ್ತ ಹಾಗೂ ಆರೋಗ್ಯಪೂರ್ಣ ಮಾಡುವತನಕ ನಮ್ಮ ಈ ನಡೆ ನಿಲ್ಲುವುದಿಲ್ಲ ಎಂದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ, ನಶೆ ವಿದ್ಯಾರ್ಥಿಗಳನ್ನು ಹಾಳು ಮಾಡುತ್ತದೆ. ಮಾದಕ ವಸ್ತುಗಳು ಯುವಶಕ್ತಿಯ ಚೈತನ್ಯವನ್ನು ಕಸಿಯುತ್ತವೆ. ಇಂತಹ ದುಶ್ಚಟಗಳಿಂದ ಯುವಜನರನ್ನು ಉಳಿಸಲು ಚಳವಳಿ ರೂಪದ ಪ್ರಯತ್ನಗಳು ನಡೆಯಬೇಕಿದೆ ಎಂದು ಹೇಳಿದರು.
ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ಇದು ಕೇವಲ ಒಂದು ಅಭಿಯಾನವಲ್ಲ, ಯುವ ಸಮುದಾಯಕ್ಕೆ ಮಾದರಿ ಪಥವನ್ನು ತೋರಿಸುವ ಮಹಾನ್ ಕಾರ್ಯ ಎಂದರು.
ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಗಂಗಾಧರ ಎಸ್. ಸಂಬಣ್ಣಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ನಾರ್ಕೊಟಿಕ್ ಕಂಟ್ರೋಲ್ ಬ್ಯೂರೊದ ಭಾವನಾ ಆರ್, ದಿಶಾಬೋಧ್ ಫೌಂಡೇಶನ್ ನಿರ್ದೇಶಕ ಯೋಗಿ ದೇವರಾಜ್ ಭಾಗವಹಿಸಿದ್ದರು.
ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಿಂದ ಆರಂಭವಾದ ವಾಕಥಾನ್ ಡಾ. ಬಿ.ಆರ್. ಅಂಬೇಡ್ಕರ್ ಮೈದಾನದವರೆಗೆ ಸಾಗಿತು. ಏರುತ್ತಿರುವ ಬಿಸಿಲನ್ನೂ ಲೆಕ್ಕಿಸದೇ ಸುಮಾರು 6 ಸಾವಿರ ವಿದ್ಯಾರ್ಥಿಗಳು, ಸಾವಿರಾರು ಸಂಖ್ಯೆಯ ಸಿಬ್ಬಂದಿ ಹಾಗೂ ನಾಗರಿಕರು ನಡಿಗೆಯಲ್ಲಿ ಜೊತೆಯಾದರು.
Highlights -
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.