
ವಿಜಯಪುರ ನಗರದ ಶಿವಾಜಿ ಸರ್ಕಲ್ನಿಂದ ಪ್ರಾರಂಭಗೊಂಡ ರಾಷ್ಟ್ರೀಯ ಏಕತಾ ನಡೆಗೆ ಸಂಸದ ರಮೇಶ ಜಿಗಜಿಣಗಿ ಚಾಲನೆ ನೀಡಿದರು
ವಿಜಯಪುರ: ರಾಷ್ಟ್ರೀಯ ಏಕತಾ ದಿನವು ಭಾರತದ ಶಕ್ತಿ ವೈವಿಧ್ಯತೆಯಲ್ಲಿ ಏಕತೆಯಲ್ಲಿದೆ ಎಂದು ನಮಗೆ ನೆನಪಿಸುತ್ತದೆ. ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರೂ ಪಣತೊಡಬೇಕಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಯುವ ಜನ ಮತ್ತು ಕ್ರೀಡಾ ಮಂತ್ರಾಲಯ, ಮೈ ಭಾರತ್ ಇಲಾಖೆ, ಎನ್.ಎಸ್.ಎಸ್. ಘಟಕದ ಆಶ್ರಯದಲ್ಲಿ ಸರ್ಧಾರ್ ವಲ್ಲಭಾಯಿ ಪಟೇಲ್ ಅವರ 150ನೇ ಜನ್ಮ ದಿನಾಚರಣೆ ಅಂಗವಾಗಿ ನಗರದ ಶಿವಾಜಿ ಸರ್ಕಲ್ನಿಂದ ಪ್ರಾರಂಭಗೊಂಡ ರಾಷ್ಟ್ರೀಯ ಏಕತಾ ನಡೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರನ್ನು ಗೌರವಿಸಲು ರಾಷ್ಟ್ರೀಯ ಏಕತಾ ದಿನವನ್ನು ಆಚರಿಸಲಾಗುತ್ತಿದೆ. ಭಾರತ ಐಕತೆ ಮತ್ತು ಸಮಗ್ರತೆಯನ್ನು ಪುನರುಚ್ಚಿಸಲು ಕೇಂದ್ರ ಸರ್ಕಾರ 2014 ರಿಂದ ಆಚರಣೆ ಮಾಡುತ್ತಾ ಬಂದಿದೆ. ಪಟೇಲರ ಸಾಧನೆಗಳು ನಮ್ಮೆಲ್ಲರಿಗೂ ಸ್ಪೂರ್ತಿಯಾಗಿವೆ. ಐಕತೆ, ಸಮಗ್ರತೆ, ಆಂತರಿಕ ಭದ್ರತೆ ನಿಟ್ಟಿನಲ್ಲಿ ಒಗ್ಗೂಡಿಸಿ ಕಾರ್ಯ ನಿರ್ವಹಿಸಲು ಈ ಏಕತಾ ದಿನ ಆಚರಣೆ ಪ್ರೇರಣೆಯಾಗಿದೆ ಎಂದರು.
ಜಿಲ್ಲಾಧಿಕಾರಿ ಆನಂದ ಕೆ.ಮಾತನಾಡಿ, ಭಾರತದ ಉಕ್ಕಿನ ಮನುಷ್ಯ ಸರ್ದಾರ ವಲ್ಲಭಬಾಯಿ ಪಟೇಲ್ ಅವರು ವೈವಿಧ್ಯಮಯ ರಾಜ್ಯ ಪ್ರಭುತ್ವಗಳನ್ನು ಒಗ್ಗೂಡಿಸಿ ಆಧುನಿಕ ಭಾರತವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಾರತದ ನಾಗರಿಕರಲ್ಲಿ ರಾಷ್ಟ್ರೀಯ ಏಕತೆ ದೇಶಭಕ್ತಿ ಮತ್ತು ಸಾಮರಸ್ಯ ಆದರ್ಶಗಳನ್ನು ಪಾಲಿಸಲು ಪ್ರತಿಯೊಬ್ಬ ಭಾರತೀಯ ಪ್ರಜೆಯ ಕರ್ತವ್ಯವಾಗಿದೆ ಎಂದರು.
ಮೇಯರ್ ಎಂ.ಎಸ್. ಕರಡಿ, ಜಾವಿದ್ ಜಮಾದಾರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಭೀಮಾಂಶಕರ ಹದನೂರ, ಚಂದ್ರಶೇಖರ ಕವಟಗಿ, ಈರಣ್ಣ ರಾವೂರ, ಮಲ್ಲು ಕಲಾದಗಿ, ಶ್ರೀಧರ ಬಿಜ್ಜರಗಿ, ಸುರೇಶ ಬಿಜಾಪುರ, ಉಮೇಶ ಕೂಳಕೂರ, ವಿಜಯ ಜೋಶಿ, ಮಹಾನಗರ ಪಾಲಿಕೆ ಸದಸ್ಯರಾದ ಮಳುಗೌಡ ಬಿರಾದಾರ, ಎನ್.ಎಸ್.ಎಸ್.ಅಧಿಕಾರಿ ಗಂಗಾಧರ ಅಗಸರ, ಸೇವಾದಳದ ನಾಗೇಶ ಡೋಣೂರ, ಜಿಲ್ಲಾ ಯುವ ಅಧಿಕಾರಿ ಗೌತಮ ರೆಡ್ಡಿ ಉಪಸ್ಥಿತರಿದ್ದರು.