ADVERTISEMENT

ಮೂರನೇ ಅಲೆ ತಡೆಗೆ ಅಗತ್ಯ ಕ್ರಮ: ಡಿಸಿ ಪಿ.ಸುನೀಲ್‌ ಕುಮಾರ್

ಬಂಜಾರಾ ಆಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2022, 16:12 IST
Last Updated 17 ಜನವರಿ 2022, 16:12 IST
ವಿಜಯಪುರ ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್ ನೇತೃತ್ವದ ಕೋವಿಡ್‌ ವಿಶೇಷ ತಜ್ಞರನ್ನೊಳಗೊಂಡ ಸಮಿತಿ ನಗರದ ಬಂಜಾರಾ ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿತು
ವಿಜಯಪುರ ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್ ನೇತೃತ್ವದ ಕೋವಿಡ್‌ ವಿಶೇಷ ತಜ್ಞರನ್ನೊಳಗೊಂಡ ಸಮಿತಿ ನಗರದ ಬಂಜಾರಾ ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿತು   

ವಿಜಯಪುರ: ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್ ನೇತೃತ್ವದ ಕೋವಿಡ್‌ವಿಶೇಷ ತಜ್ಞರನ್ನೊಳಗೊಂಡ ಸಮಿತಿ ನಗರದ ಬಂಜಾರಾ ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿತು.

ಬಂಜಾರಾ ಆಸ್ಪತ್ರೆಯಲ್ಲಿ ಕೋವಿಡ್‌ನಿಂದ ಮಹಿಳೆಯೊಬ್ಬರು ಇತ್ತೀಚೆಗೆ ಸಾವಿಗೀಡಾದ ಹಿನ್ನೆಲೆಯಲ್ಲಿ ಭೇಟಿ ನೀಡಿದ ಡಿಸಿ ಮತ್ತು ತಜ್ಞರು, ವಾರ್ಡ್‍ಗಳ ಐಸಿಯು ಬೆಡ್‍ಗಳನ್ನು ಪರಿಶೀಲಿಸಿದರು.

ಸರ್ಕಾರದ ಮಾರ್ಗಸೂಚಿಗಳನ್ವಯ ಚಿಕಿತ್ಸೆ ನೀಡಲು ಹಾಗೂ ಆಸ್ಪತ್ರೆಯಲ್ಲಿ ವೆಂಟಿಲೇಟರ್‌, ಎಚ್‍ಎಫ್‍ಎನ್‍ಸಿ ಹಾಗೂ ಮಲ್ಟಿಪ್ಯಾರಾ ಮಾನಿಟರ್‌ ಲಭ್ಯತೆಯ ಬಗ್ಗೆ ಪರಿಶೀಲನೆ ನಡೆಸಿದರು.

ADVERTISEMENT

ಕೋವಿಡ್ ಮೂರನೇ ಅಲೆಯಲ್ಲಿ ಮಕ್ಕಳಿಗೆ ಸೋಂಕು ಹರಡಿರುವ ಬಗ್ಗೆ ಹಾಗೂ ಅದಕ್ಕಾಗಿ ತೆಗೆದುಕೊಂಡ ಕ್ರಮಗಳ ಬಗ್ಗೆ ಚರ್ಚಿಸಿದ ಅವರು, ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಮೂರನೇ ಅಲೆ ನಿಯಂತ್ರಿಸುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಚಿಕ್ಕ ಮಕ್ಕಳ ವಾರ್ಡ್‍ನ್ನು ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದರು.

ಬೆಡ್‍ಗಳ ಲಭ್ಯತೆ ಹಾಗೂ ಅಲಭ್ಯತೆ ಮಾಹಿತಿಯನ್ನು ತಂತ್ರಾಂಶದಲ್ಲಿ ಕಾಲಕಾಲಕ್ಕೆ ನಮೂದಿಸಬೇಕು ಹಾಗೂ ಆಸ್ಪತ್ರೆಯ ಆವರಣದಲ್ಲಿ ಪ್ರದರ್ಶಿಸಬೇಕು. ಅದೇ ರೀತಿ ಬೇರೆ ಜಿಲ್ಲೆಗಳಿಂದ ದಾಖಲಾಗುವ ಪ್ರಕರಣಗಳನ್ನು ಬೆಡ್ ಮ್ಯಾನೇಜ್‍ಮೆಂಟ್ ಪೋರ್ಟಲ್ ಮೂಲಕ ದಾಖಲು ಮಾಡಿ, ಉಚಿತ ಚಿಕಿತ್ಸೆ ಒದಗಿಸಬೇಕು ಎಂದು ಅವರು ಸೂಚಿಸಿದರು.

ಆಕ್ಸಿಜನ್ ದಾಸ್ತಾನನ್ನು ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಿಸಿಟ್ಟುಕೊಳ್ಳಬೇಕು. ಆಕ್ಸಿಜನ್ ಕೊರತೆಯಿಂದಾಗಿ ಯಾವುದೇ ರೋಗಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಸೂಚನೆ ನೀಡಿದರು.

ಎಬಿ ಎಆರ್‌ಕೆ ಅಡಿಯಲ್ಲಿ ಅಥವಾ ಸ್ವಂತ ಖರ್ಚಿನಲ್ಲಿ ಚಿಕಿತ್ಸೆ ಪಡೆದುಕೊಳ್ಳುವ ಕುರಿತು ಪ್ರತಿ ರೋಗಿಯಿಂದ ಒಪ್ಪಿಗೆ ಪತ್ರ ಪಡೆದುಕೊಳ್ಳಬೇಕು ಎಂದು ಅವರು ಸೂಚಿಸಿದರು.

ಎಬಿ ಎಆರ್‌ಕೆ ಅಡಿಯಲ್ಲಿ ನೀಡುವ ಚಿಕಿತ್ಸೆಗಳ ವಿವರದ ಬೋರ್ಡ್‍ಗಳನ್ನು ಸಾರ್ವಜನಿಕರಿಗೆ ಕಾಣಿಸುವಂತೆ ಪ್ರದರ್ಶಿಸಬೇಕು ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಜಕುಮಾರ ಯರಗಲ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಎಲ್ ಲಕ್ಕಣ್ಣವರ, ಅಲ್ ಅಮೀನ್‌ ವೈದ್ಯಕೀಯ ಮಹಾವಿದ್ಯಾಲಯದ ಡಾ.ರಾಜೇಂದ್ರಕುಮಾರ್, ಬಿಎಲ್‍ಡಿಇ ವೈದ್ಯಕೀಯ ಮಹಾವಿದ್ಯಾಲಯದ ಡಾ.ಸಂತೋಷ ನೇಮಿಗೌಡ, ಐಎಂಎ ಅಧ್ಯಕ್ಷ ಡಾ.ಸಂತೋಷ ನಂದಿ, ಸ್ವಯಂ ಸೇವಾ ಸಂಸ್ಥೆಯ ಪೀಟರ್ ಅಲೆಕ್ಸಾಂಡರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.