ADVERTISEMENT

ಮರಾಠಾ ಪ್ರಾಧಿಕಾರಕ್ಕೆ ವಿರೋಧ ಬೇಡ

ಕರ್ನಾಟಕ ಬಂದ್‌ ಕರೆ ಕೈಬಿಡಲು ಮರಾಠಾ ಸಮುದಾಯದ ಮನವಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2020, 12:49 IST
Last Updated 21 ನವೆಂಬರ್ 2020, 12:49 IST
ವಿಜಯಪುರ ಶ್ರೀಛತ್ರಪತಿ ಶಿವಾಜಿ ಫೌಂಡೇಶನ್‌ ಅಧ್ಯಕ್ಷ ಕಿರಣ ಕಾಳೆ ಮಾತನಾಡಿದರು
ವಿಜಯಪುರ ಶ್ರೀಛತ್ರಪತಿ ಶಿವಾಜಿ ಫೌಂಡೇಶನ್‌ ಅಧ್ಯಕ್ಷ ಕಿರಣ ಕಾಳೆ ಮಾತನಾಡಿದರು   

ವಿಜಯಪುರ: ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದುಳಿದ ಮರಾಠಾ ಸಮುದಾಯಕ್ಕೆ ನೆರವಾಗುವ ಉದ್ದೇಶದಿಂದ ರಾಜ್ಯ ಸರ್ಕಾರ ಮರಾಠಾ ಪ್ರಾಧಿಕಾರ ರಚಿಸಿದ್ದು, ಇದಕ್ಕೆ ಕನ್ನಡಪರ ಸಂಘಟನೆಗಳು ವಿರೋಧಿಸುವುದನ್ನು ಬಿಡಬೇಕು ಎಂದುವಿಜಯಪುರ ಶ್ರೀಛತ್ರಪತಿ ಶಿವಾಜಿ ಫೌಂಡೇಶನ್‌ ಅಧ್ಯಕ್ಷ ಕಿರಣ ಕಾಳೆ ಮನವಿ ಮಾಡಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾವೇನೂ ಪಾಕಿಸ್ತಾನದಿಂದ ಬಂದವರಲ್ಲ. ಈ ನೆಲದಲ್ಲೇ ಹುಟ್ಟಿ, ಇಲ್ಲೇ ಬೆಳೆದಿದ್ದೇವೆ. ನಮ್ಮ ಮಾತೃ ಭಾಷೆ ಮರಾಠಿಯಾದರೂ ಮನೆಯಲ್ಲೂ ಶೇ 80ರಷ್ಟು ಕನ್ನಡವನ್ನೇ ಮಾತನಾಡುತ್ತೇವೆ. ನಾವೂ ಕನ್ನಡಿಗರೆ ಅಗಿದ್ದೇವೆ’ ಹೇಳಿದರು.

ರಾಜ್ಯ ಸರ್ಕಾರ ನೂತನವಾಗಿ ಸ್ಥಾಪಿಸಿರುವ ಮರಾಠಾ ಪ್ರಾಧಿಕಾರ ಮರಾಠಾ ಸಮುದಾಯದ ಅಭಿವೃದ್ಧಿ ಪ್ರಾಧಿಕಾರವಾಗಿದೆಯೇ ಹೊರತು; ಭಾಷೆಯ ಪ್ರಾಧಿಕಾರ ಅಲ್ಲ. ಈ ಹಿನ್ನೆಲೆಯಲ್ಲಿ ಕರ್ನಾಟಕ ಬಂದ್‌ ಕರೆಯನ್ನು ವಾಪಸ್ ಪಡೆಯಬೇಕು ಎಂದರು.

ADVERTISEMENT

ಎಂಇಎಸ್‌ಗೂ ನಮಗೂ ಯಾವುದೇ ಸಂಬಂಧವಿಲ್ಲ. ಎಂಇಎಸ್‌ ಅನ್ನು ನಾವು ಎಂದೂ ಬೆಂಬಲಿಸುವುದಿಲ್ಲ. ಮತ್ತು ಬೆಳಗಾವಿ, ನಿಪ್ಪಾಣಿ, ಕಾರವಾರ ಎಂದಿಗೂ ಕರ್ನಾಟಕದ ಭಾಗವೇ ಹೊರತು ಮಹಾರಾಷ್ಟ್ರಕ್ಕೆ ಸೇರಿದವಲ್ಲ ಎಂಬುದು ನಮ್ಮ ನಿಲುವಾಗಿದೆ ಎಂದು ಹೇಳಿದರು.

ಕರ್ನಾಟಕ ಕ್ಞತ್ರೀಯ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಪರಶುರಾಮ ರಜಪೂತ ಮಾತನಾಡಿ, ಮರಾಠಾ, ರಜಪೂತ ಮುಂತಾದ ಸಮುದಾಯ ನೂರಾರು ವರ್ಷಗಳಿಂದ ದಕ್ಷಿಣ ಭಾರತದಲ್ಲಿದ್ದಾರೆ. ಅವರು ಕರ್ನಾಟಕದ ಅವಿಭಾಜ್ಯ ಅಂಗವಾಗಿದ್ದಾರೆ. ಅದಕ್ಕೆ ಮರಾಠಾ ಸಮುದಾಯಕ್ಕೆ ನೀಡಿದಂತ ಈ ಪ್ರಾಧಿಕಾರ ಸಮಾಜದ ಅಭಿವೃದ್ಧಿಗಾಗಿ ಅವಶ್ಯಕತೆಯಾಗಿದೆ ಎಂದರು.

ಕಾಂಗ್ರೆಸ್‌ ಮುಖಂಡ ವಿಜಯಕುಮಾರ ಘಾಟಗೆ ಮಾತನಾಡಿ, ಎಂಇಎಸ್ ಪುಂಡಾಟಿಕೆ ವಿರುದ್ಧ ವಿಜಯಪುರದ ಮರಾಠಾ ಸಮುದಾಯದವರು ಅನೇಕ ಭಾರಿ ಪ್ರತಿಭಟನೆ ಮಾಡಿದ್ದೇವೆ ಮತ್ತು ಆ ಸಂಘಟನೆಯನ್ನು ನಿಷೇಧಿಸಬೇಕು ಎಂದು ಹಲವಾರು ಹೋರಾಟಗಳಲ್ಲಿ ನಾವು ಒತ್ತಾಯಿಸಿದ್ದೇವೆ ಎಂದು ಹೇಳಿದರು.

ಕೆ.ಕೆ.ಎಂ.ಪಿ ಅಧ್ಯಕ್ಷ ಶಿವಾಳ್ಕರ, ಎಂಇಎಸ್‌ನವರು ರೋಲ್‌ಕಾಲ್‌ ಹೋರಾಟಗಾರರಾಗಿದ್ದಾರೆ. ಮಹಾರಾಷ್ಟ್ರದಿಂದ ಲಕ್ಷಾಂತರ ರೂಪಾಯಿ ಅನುದಾನ ತಂದು ತಮ್ಮ ಸಂಸ್ಥೆಗಳನ್ನು ಕಟ್ಟಿಕೊಂಡಿದ್ದಾರೆ ಎಂದು ಆರೋಪಿಸಿದರು.

ಬಂಜಾರ ಸಮಾಜದ ಗುರುಗಳಾದ ಗೋಪಾಲ ಮಹಾರಾಜ, ಕರವೇ(ಪ್ರವೀಣಶೆಟ್ಟಿ ಬಣ) ಜಿಲ್ಲಾ ಘಟಕದಮಾಜಿ ಅಧ್ಯಕ್ಷ ಸಂತೋಷ ಪವಾರ, ಮರಾಠ ಸಮಾಜದ ಅಧ್ಯಕ್ಷ ವಿಜಯಕುಮಾರ ಚವ್ಹಾಣ, ವಕೀಲರಾದ ತುಳಸಿರಾಮ ಸೂರ್ಯವಂಶಿ, ವಿಶ್ವನಾಥ ಭೋಸಲೆ ಇದ್ದರು.

****

ಸಮಾಜದ ಬಡವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಪ್ರಾಧಿಕಾರ ರಚನೆ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇವೆ
ಕಿರಣ ಕಾಳೆ, ಅಧ್ಯಕ್ಷ, ಶ್ರೀಛತ್ರಪತಿ ಶಿವಾಜಿ ಫೌಂಡೇಶನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.