
ವಿಜಯಪುರ: ‘ಉತ್ತರ ಕರ್ನಾಟಕಕ್ಕೆ ನಿತ್ಯ ಅನ್ಯಾಯವಾಗುತ್ತಿದೆ. ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ, ಹೀಗಾಗಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ರಚನೆಯ ಹೋರಾಟವನ್ನು ನಾವು ಇನ್ನಷ್ಟೂ ತೀವ್ರಗೊಳಿಸಲಿದ್ದೇವೆ’ ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿಯ ಪ್ರಮುಖ ನಾಗೇಶ ಗೋಲಶೆಟ್ಟಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾವು ನಾಡು ವಿಭಜನೆ ಮಾಡುತ್ತಿಲ್ಲ, ಇದು ವಿಭಜನೆಯಲ್ಲ, ಕಳೆದ ಹಲವಾರು ವರ್ಷಗಳಿಂದ ಉತ್ತರ ಕರ್ನಾಟಕ ಭಾಗಕ್ಕೆ ದೊಡ್ಡ ಪ್ರಮಾಣದ ಅನ್ಯಾಯವಾಗುತ್ತಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಹೇರಳವಾದ ಸಂಪನ್ಮೂಲಗಳಿದ್ದರೂ ಉ.ಕ. ಭಾಗದ ಜನತೆ ದೊಡ್ಡ ಸಂಕಷ್ಟಗಳ ಸರಮಾಲೆಯನ್ನೇ ಎದುರಿಸುವಂತಾಗಿದೆ. ರಾಜು ಕಾಗೆ ಸೇರಿದಂತೆ ಅನೇಕ ಶಾಸಕರು ಈ ನಿಲುವಿನ ಪರವಾಗಿದ್ದಾರೆ’ ಎಂದರು.
‘ಈ ಭಾಗದ ಯುವಕರಿಗೆ ಉದ್ಯೋಗಾವಕಾಶಗಳು ಸಿಗಲು ಐಟಿಬಿಟಿ ಬಹುರಾಷ್ಟ್ರೀಯ ಕಂಪನಿಗಳು ಸ್ಥಾಪನೆಯಾಗಬೇಕು. ಈ ಭಾಗದ ನೀರಾವರಿ ಯೋಜನೆಗಳು ಪೂರ್ಣಗೊಳ್ಳಬೇಕು. ರೈತರ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಸಿಗಬೇಕು, ಎಲ್ಲ ವರ್ಗದ ಜನರು ಸ್ವಾಭಿಮಾನ, ಸ್ವಾತಂತ್ರ್ಯ, ಸ್ವಾವಲಂಬನೆಯೊಂದಿಗೆ ಸಮಗ್ರ ಅಭಿವೃದ್ಧಿಯಾಗಬೇಕಾದರೆ ಪ್ರತ್ಯೇಕ ರಾಜ್ಯ ಅನಿವಾರ್ಯ’ ಎಂದರು.
‘2018 ರಿಂದ ಉತ್ತರ ಕರ್ನಾಟಕ ಹೋರಾಟ ಸಮಿತಿಯು ಪ್ರತ್ಯೇಕ ರಾಜ್ಯಕ್ಕಾಗಿ ಲಿಖಿತ ಅಭಿಪ್ರಾಯ ಮತ್ತು ಸಹಿ ಸಂಗ್ರಹಣ ಅಭಿಯಾನವನ್ನು ಪ್ರಾರಂಭಿಸಿದೆ’ ಎಂದರು.
ಹೋರಾಟಗಾರ ಎಸ್.ವಿ. ಪಾಟೀಲ ಸಿಂದಗಿ ಮಾತನಾಡಿ, ‘ಎಲ್ಲ ಅಧಿಕಾರ ಬೆಂಗಳೂರು ಕೇಂದ್ರಿಕೃತವಾಗಿವೆ. ಬೆಳಗಾವಿಯಲ್ಲಿ ಸುವರ್ಣಸೌಧ ಎನ್ನುವುದು ಕೇವಲ ಪಕ್ಷಿಗಳ ಸೌಧವಾಗಿದೆ. ವಿಷಯ ಚರ್ಚೆ ನಾಮಕೆವಾಸ್ತೆಯಾಗುತ್ತಿದೆ ಎಂದರು.
ಸಚಿವ ಸ್ಥಾನ ಹಂಚಿಕೆಯಲ್ಲಿಯೂ ಈ ಭಾಗದ ಶಾಸಕರಿಗೆ ಅನ್ಯಾಯ, ಪ್ರಭಾವಿ ಸ್ಥಾನಗಳೆಲ್ಲವೂ ದಕ್ಷಿಣ ಕರ್ನಾಟಕದ ಪಾಲಿಗೆ ಸೀಮಿತ. ಹಳೇ ಮೈಸೂರು ಹಾಗೂ ನಮ್ಮನ್ನು ಹೋಲಿಕೆ ಮಾಡಿದರೆ ನಾವು ಅವರಿಗಿಂತ 40 ವರ್ಷ ಹಿಂದೆ ಇದ್ದೇವೆ, ಇದಕ್ಕೆಲ್ಲವೂ ನಮ್ಮ ಭಾಗಕ್ಕೆ ತೋರಿದ ಮಲತಾಯಿ ಧೋರಣೆಯೇ ಕಾರಣ ಎಂದರು.
ಪ್ರಮುಖರಾದ ಪೀಟರ್ ಅಲೆಕ್ಸಾಂಡ್, ಅಪ್ಪಾಸಾಹೇಬ ಯರನಾಳ, ಚೆನ್ನು ಕಟ್ಟಿಮನಿ, ಶ್ರೀಶೈಲ ಮಳಜಿ, ಸಂಗನಗೌಡ ಪಾಟೀಲ, ಅಪ್ಪಾಸಾಹೇಬ ಬುಗಡೆ, ಭಾಗ್ಯರಾಜ ಸೊನ್ನದ, ನಾರಾಯಣ ಕುಲಕರ್ಣಿ ಇದ್ದರು.
ಪ್ರತ್ಯೇಕ ರಾಜ್ಯಕ್ಕಾಗಿ ಲಿಖಿತ ಅಭಿಪ್ರಾಯ ಮತ್ತು ಸಹಿ ಸಂಗ್ರಹ ಅಭಿಯಾನದಡಿ 1.40 ಕೋಟಿಗೂ ಅಧಿಕ ಜನರ ಸಹಿ ಸಂಗ್ರಹ ಮಾಡಲಾಗಿದೆ.– ನಾಗೇಶ ಗೋಲಶೆಟ್ಟಿ, ಉತ್ತರ ಕರ್ನಾಟಕ ಹೋರಾಟ ಸಮಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.