ವಿಜಯಪುರ: ಮಾರುಕಟ್ಟೆಯಲ್ಲಿ ಆಗುತ್ತಿರುವ ಜನಸಂದಣಿ, ನೂಕುನುಗ್ಗಲು ತಪ್ಪಿಸುವ ಉದ್ದೇಶದಿಂದ ಎಲ್ಲ ರೀತಿಯ ಸಂತೆ, ವಾರದ ಸಂತೆಗಳನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.
ಬೆಳಿಗ್ಗೆ 6ರಿಂದ ಸಂಜೆ 6ರ ವರೆಗೆ ಹಾಪ್ಕಾಮ್ಸ್, ಎಲ್ಲ ಹಾಲಿನ ಬೂತ್, ತಳ್ಳುವ ಗಾಡಿ ಮೂಲಕ ಹಣ್ಣು-ತರಕಾರಿಗಳನ್ನು ಮಾರುಕಟ್ಟೆ ಬೆಲೆಗೆ ಮಾರಾಟ ಮಾಡಬೇಕು ಎಂದು ಸೂಚಿಸಿದ್ದಾರೆ.
ಎಪಿಎಂಸಿ ಹಾಗೂ ದಿನಸಿ ಅಂಗಡಿಗಳನ್ನು ಬೆಳಗ್ಗೆ 6 ರಿಂದ ಮಧ್ಯಾಹ್ನ 12ರ ವರೆಗೆ ಮಾತ್ರ ತೆರೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಕಳಪೆ ಗುಣಮಟ್ಟದ ವಸ್ತು ಮಾರಾಟ ಮಾಡಿದರೆ ಕ್ರಮ:ಜಿಲ್ಲೆಯ ಎಲ್ಲ ಅಗತ್ಯ ವಸ್ತುಗಳ ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳು ನಿಗದಿತ ಬೆಲೆಯಲ್ಲಿ ಹಾಗೂ ಗುಣಮಟ್ಟದ ವಸ್ತುಗಳನ್ನು ಗ್ರಾಹಕರಿಗೆ ಮಾರಾಟ ಮಾಡಬೇಕು. ಕೃತಕ ಅಭಾವ ಸೃಷ್ಟಿಸಿ ಬೆಲೆಯಲ್ಲಿ ಹೆಚ್ಚಳ ಮಾಡುವುದು ಮತ್ತು ಕಳಪೆ ಮಟ್ಟದ ವಸ್ತುಗಳನ್ನು ವಿತರಣೆ ಮಾಡಿದ್ದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಿರುವುದು ಕಂಡುಬಂದಲ್ಲಿ ಸಾರ್ವಜನಿಕರು ಜಿಲ್ಲಾಧಿಕಾರಿಗಳ ಕಚೇರಿಯ ಮೊಬೈಲ್ ಸಂಖ್ಯೆ 9380443752ಕ್ಕೆ ಕಚೇರಿ ಸಮಯದಲ್ಲಿ ಕರೆ ಮಾಡಿ ದೂರು ದಾಖಲಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಅಗತ್ಯ ವಸ್ತುಗಳ ದರ ನಿಗದಿ
ಕೋವಿಡ್ ಲಾಕ್ಡೌನ್ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಚಿಲ್ಲರೆ ದರ ಪ್ರತಿ ಕೆ.ಜಿ.ಗೆ ಈ ಕೆಳಕಂಡಂತೆ ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.
ಸಕ್ಕರೆ ಪ್ರತಿ ಕೆ.ಜಿ ಗೆ ₹ 35, ಮೈದಾ ₹ 28, ಬಾಂಬೆ ರವಾ ₹ 30, ಕೆಸರಿ ರವಾ ₹ 40, ತೊಗರಿಬೇಳೆ (ಮೀಡಿಯಂ) ₹ 95, ತೊಗರಿಬೇಳೆ (ಪಟಾಕ) ₹ 103, ಕಡ್ಲೆಬೇಳೆ ₹ 70, ಗೋಧಿ ಹಿಟ್ಟು ₹ 28, ಇಡ್ಲಿ ರವ ₹ 35, ಉದ್ದಿನಬೇಳೆ ₹ 110, ಅವಲಕ್ಕಿ (ಮೀಡಿಯಂ) ₹ 35, ಅವಲಕ್ಕಿ(ಉತ್ತಮ)₹ 40, ಹೆಸರು ಬೇಳೆ ₹ 100, ಬೆಲ್ಲ ₹ 40, ಶೇಂಗಾ(ಹಸಿ) ₹ 95, ಶೇಂಗಾ (ಹುರಿದಿದ್ದು) ₹ 120, ಪುಟಾಣಿ ₹ 85 ನಿಗದಿಪಡಿಸಲಾಗಿದೆ.
ಕೊಬ್ಬರಿ ₹ 200, ಬೆಳ್ಳುಳ್ಳಿ ₹ 60, ಬಿಳಿಜೋಳ ₹ 38, ಗೋಧಿ ₹ 35, ಅಲಸಂದಿ ₹ 80, ಹುಣಸೆಹಣ್ಣು ₹ 90, ಪಾಮ್ ಆಯಿಲ್ ₹ 135, ಸೂರ್ಯಪಾನ ಆಯಿಲ್ ₹ 175, ಅಕ್ಕಿ ಸೋನಾ ₹ 40,ಅಕ್ಕಿ ಜೀರಾ ₹ 50, ಅಕ್ಕಿ ಕೋಲಂ ₹ 58 ಹಾಗೂ ಇನ್ನಿತರ ವಸ್ತುಗಳ ಪ್ಯಾಕ್ ಮಾಡಿ ಎಂ.ಆರ್.ಪಿ ದರದಲ್ಲಿ ಮಾರಾಟ ಮಾಡುವಂತೆ ಸೂಚಿಸಿದ್ದಾರೆ.
ನಿಗದಿತ ದರಕ್ಕಿಂತ ಚಿಲ್ಲರೆ ವರ್ತಕರು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದಲ್ಲಿ ಗ್ರಾಹಕರು ಜಿಲ್ಲಾಧಿಕಾರಿಗಳ ಕಚೇರಿಯ ಆಹಾರ ಶಾಖೆಯ ದೂರವಾಣಿ ಸಂಖ್ಯೆ 9380443752 ಗೆ ಕಚೇರಿ ಸಮಯದಲ್ಲಿ ಕರೆ ಮಾಡಿ ದೂರು ದಾಖಲಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.