ADVERTISEMENT

ವಿಜಯಪುರ: ನಗರದಲ್ಲೇ ಹೆಚ್ಚು ಓಪನ್ ಜಿಮ್‌

ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2019, 12:32 IST
Last Updated 24 ಜೂನ್ 2019, 12:32 IST
ವಿಜಯಪುರದಲ್ಲಿ ₹1 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೋಮವಾರ ಭೂಮಿಪೂಜೆ ನೆರವೇರಿಸಿದರು
ವಿಜಯಪುರದಲ್ಲಿ ₹1 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೋಮವಾರ ಭೂಮಿಪೂಜೆ ನೆರವೇರಿಸಿದರು   

ವಿಜಯಪುರ: ‘ಬೆಂಗಳೂರು ಮಹಾನಗರದ ನಂತರ ಸಾರ್ವಜನಿಕ ಉದ್ಯಾನಗಳಲ್ಲಿ ಅತೀ ಹೆಚ್ಚಿನ ಬಯಲು ಜಿಮ್ ಹೊಂದಿರುವ ನಗರ ವಿಜಯಪುರವಾಗಿದೆ’ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಇಲ್ಲಿಯ ಎಂ.ಬಿ.ಪಾಟೀಲ ನಗರದ ‘ಸಿ’ ಬ್ಲಾಕ್‌ನಲ್ಲಿ ಸೋಮವಾರ ₹1ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಸಾರ್ವಜನಿಕ ಉದ್ಯಾನಗಳು ಜನರಿಗೆ ಬಳಕೆಯಾಗಬೇಕು. ಅಲ್ಲಿ ಗಿಡ ಮರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಸಲಾಗುವುದು. ಪ್ರತಿ ಉದ್ಯಾನಗಳಲ್ಲಿ ವಾಕಿಂಗ್ ಟ್ರ್ಯಾಕ್ ಮತ್ತು ಓಪನ್ ಜಿಮ್ ಕಲ್ಪಿಸಲು ಕ್ರಮಕೈಗೊಳ್ಳಲಾಗಿದೆ. ಪ್ರತಿಯೊಬ್ಬರು ತಮ್ಮ ಮನೆ ಹಾಗೂ ಉದ್ಯಾನದಲ್ಲಿ ಒಂದೊಂದು ಗಿಡ ನೆಡಬೇಕು’ ಎಂದರು.

ADVERTISEMENT

‘ಆಲಮಟ್ಟಿ ಜಲಾಶಯದ ನೀರನ್ನು ಎಂ.ಬಿ.ಪಾಟೀಲ ಅವರು ಖಾಲಿ ಮಾಡಿದ್ದಾರೆ ಎಂದು ಸಚಿವರೊಬ್ಬರು ಹೇಳಿದ್ದಾರೆ. ಎಂ.ಬಿ.ಪಾಟೀಲ ಅವರೇನು ತಮ್ಮ ಹೊಲಕ್ಕೆ ನೀರು ಬಿಟ್ಟುಕೊಂಡಿಲ್ಲ. ರೈತರಿಗೆ ಅನುಕೂಲವಾಗಲಿ ಎಂದು ಕಾಲುವೆಗೆ ನೀರು ಹರಿಸಿದ್ದಾರೆ. ಇದನ್ನು ಅರಗಿಸಿಕೊಳ್ಳಲು ಆಗದಿದ್ದರೆ ಹೇಗೆ’ ಎಂದು ಪ್ರಶ್ನಿಸಿದರು.

ಎಂ.ಬಿ.ಪಾಟೀಲ ನಗರ ನಿವಾಸಿಗಳ ಸಂಘದ ಪರವಾಗಿ ಡಾ.ಮಹಾಂತೇಶ ಬಿರಾದಾರ ಮಾತನಾಡಿ, ‘ಈ ಬಡಾವಣೆಯನ್ನು ‘ಎ’, ‘ಬಿ’ ಮತ್ತು ‘ಸಿ’ ವಲಯಗಳಾಗಿ ವಿಂಗಡಿಸಲಾಗಿದೆ. ಮೂರೂ ವಲಯಗಳಲ್ಲಿ ಉದ್ಯಾನ, ಉತ್ತಮ ರಸ್ತೆಗಳು, ಒಳಚರಂಡಿ, ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ’ ಎಂದು ತಿಳಿಸಿದರು.

ಮೇಯರ್ ಶ್ರೀದೇವಿ ಲೋಗಾಂವಿ, ಪಾಲಿಕೆ ಸದಸ್ಯರಾದ ಉಮೇಶ ವಂದಾಲ, ರಾಹುಲ ಜಾಧವ, ನಿವಾಸಿಗಳ ಸಂಘದ ಅಧ್ಯಕ್ಷ ಬಾಬು ಚವ್ಹಾಣ, ಉಪಾಧ್ಯಕ್ಷ ಗುರುಶಾಂತ ಕಾಪಸೆ, ಕಾರ್ಯದರ್ಶಿ ಶಿವು ಬಿರಾದಾರ, ಬಸವರಾಜ ಪಾರಶೆಟ್ಟಿ, ಹಣಮಂತ ಕುಚನೂರ, ಅಣ್ಣಸಾಬ ನಗಾರ್ಚಿ, ಪ್ರದೀಪ ಸೂರ್ಯವಂಶಿ, ರಘು ವಡ್ಡರ, ಸುಭಾಷ ಚವ್ಹಾಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.