ADVERTISEMENT

ಯತ್ನಾಳ ಹೇಳಿಕೆಗೆ ಕರವೇ ಆಕ್ರೋಶ

ಶಾಸಕರ ಕಚೇರಿ ಎದುರು ಪ್ರತಿಕೃತಿ ದಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2020, 13:26 IST
Last Updated 21 ನವೆಂಬರ್ 2020, 13:26 IST
ವಿಜಯಪುರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು 
ವಿಜಯಪುರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು    

ವಿಜಯಪುರ: ಕನ್ನಡಪರ ಹೋರಾಟಗಾರರನ್ನು ರೋಲ್‌ಕಾಲ್‌ ಹೋರಾಟಗಾರರು ಎಂಬ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.

ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಸರ್ಕಲ್‌ನಿಂದ ಶಾಸಕರ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕರವೇ ಕಾರ್ಯಕರ್ತರು, ಬಳಿಕ ಶಾಸಕರ ಪ್ರತಿಕೃತಿ ದಹಿಸಿ, ದಿಕ್ಕಾರ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸಿ.ಮುಲ್ಲಾ, ಉಪ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಒಂದು ಸಮುದಾಯವನ್ನು ಓಲೈಕೆ ಮಾಡಲು ಪ್ರಾಧಿಕಾರ, ನಿಗಮ, ರಚನೆ ಮಾಡಿರುವ ಮುಖ್ಯಮಂತ್ರಿಗಳ ಕ್ರಮ ಖಂಡನೀಯ ಎಂದರು.

ADVERTISEMENT

ಮರಾಠಾ ಅಭಿವೃದ್ಧಿ ನಿಗಮ ಸ್ಥಾಪಿಸಿರುವುದು ಕನ್ನಡ ಭಾಷಿಕರಿಗೆ ನೋವಾಗಿದ್ದು, ಈ ನಿಟ್ಟಿನಲ್ಲಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ತೀವ್ರಗೊಳಿಸಲು ನಿರ್ಧರಿಸಿರುವಾಗ ಶಾಸಕ ಯತ್ನಾಳ ನಕಲಿ ಹೋರಾಟಗಾರರು ಹಾಗೂ ರೋಲ್‍ಕಾಲ್ ಸಂಘಟನೆಗಳು ಎಂದು ನೀಡಿರುವ ಹೇಳಿಕೆ ಖಂಡನೀಯ ಎಂದು ಹೇಳಿದರು.

ಯತ್ನಾಳ ಒಬ್ಬ ಕನ್ನಡಿಗರ ಜನಪ್ರತಿನಿಧಿಯಾಗಿ ನಡೆದುಕೊಳ್ಳಬೇಕಾಗಿತ್ತು. ಆದರೆ, ಕನ್ನಡಿಗರಿಗೆ ಈ ರೀತಿ ಅವಹೇಳನ ಮಾಡಿದ್ದು ಸರಿಯಲ್ಲ. ಈ ಕೂಡಲೇ ಶಾಸಕರು ಕ್ಷಮೆ ಕೋರಬೇಕು ಎಂದು ಅಗ್ರಹಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಕುಂಬಾರ ಮಾತನಾಡಿ, ಬಾಯಿ ಇದೆ, ನಾಲಿಗೆಗೆ ಎಲುಬು ಇಲ್ಲವೆಂದು ಯತ್ನಾಳ ಅವರು ಮನಬಂದಂತೆ ಮಾತನಾಡುವುದು ತರವಲ್ಲ. ತಮ್ಮ ಮಾತಿನ ಮೇಲೆ ನಿಗಾ ಇರಬೇಕು. ಅಲ್ಲದೇ, ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗುವುದು ಸರಿಯಲ್ಲ ಎಂದರು.

ಯುವ ಘಟಕದ ಜಿಲ್ಲಾಧ್ಯಕ್ಷ ಅಶೋಕ ಹಾರಿವಾಳ, ಶ್ರೀಕಾಂತ ಬಿಜಾಪುರ,ಮಹಾದೇವ ರಾವಜಿ, ಫಯಾಜ್‌ ಕಲಾದಗಿ, ಸಾಯಬಣ್ಣ ಮಡಿವಾಳರ, ಮಲ್ಲು ಮಡಿವಾಳರ, ಮಂಜುನಾಥ ಬಡಿಗೇರ, ಗೌಡಪ್ಪಗೌಡ ಬಿರಾದಾರ, ಸಂತೋಷ ಪಾಟೀಲ, ಸುಭಾಸ ಪಾಟೀಲ, ಮಲಕುಗೌಡ ಪಾಟೀಲ, ಪಂಡಿತ ಪೂಜಾರಿ, ಧರ್ಮು ಸಿಂಧೆ, ಭೀಮಪ್ಪ ಕಾಂಬಳೆ, ಮನೋಹರ ತಾಜವ, ಶಿವಾಜಿ ಜಾಧವ, ಬಸವರಾಜ ಬಿ.ಕೆ., ನಶೀಮ ರೋಜಿಂದಾರ, ವಿನೋದ ದಳವಾಯಿ, ಪಿದಾ ಕಲಾದಗಿ, ರಾಜು ಹಜೇರಿ, ಮೃತ್ಯುಂಜಯ ಹಿರೇಮಠ, ಮಲ್ಲಿಕಾರ್ಜುನ ಬಿರಾದಾರ, ರಮೇಶ ಜಾವಗರ, ಸುರೇಶ ಪೂಜಾರಿ, ಸೋಮು ಕರನಾಳ, ಎಸ್.ವೈ.ನಡುವಿನಕೇರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.