ವಿಜಯಪುರ: ಪ್ರಧಾನಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳಿಗೆ ಯೋಗ್ಯ ದರದಲ್ಲಿ ಮನೆಗಳನ್ನು ನೀಡುವಂತೆಶಾಸಕ ಬಸನಗೌಡ ಪಾಟೀಲ ಯತ್ನಾಳ ಸೂಚಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಸಭಾಭವನದಲ್ಲಿ ಶುಕ್ರವಾರ ಮಹಾನಗರ ಪಾಲಿಕೆಯ ಆಶ್ರಯ ಸಮಿತಿ ವಿವಿಧ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ನಿರ್ಮಿಸಲಾಗುತ್ತಿರುವ ಒಟ್ಟು 3750 ಮನೆಗಳಲ್ಲಿ ಮೊದಲ ಹಂತದಲ್ಲಿ 1493 ಮನೆಗಳ ಭೂಮಿ ಪೂಜೆ ನವೆಂಬರ್ ಮೊದಲ ವಾರದಲ್ಲಿ ವಸತಿ ಸಚಿವ ವಿ. ಸೋಮಣ್ಣ ಅವರಿಂದ ನೆರವೇರಿಸಲಾಗುವುದು ಎಂದರು.
ಈಗಾಗಲೇ ಸರ್ವೇ ಮಾಡಲಾಗಿರುವ ಬಸವ ನಗರ, ಬ್ಲಾಕ್ ‘ಎ’ ಮತ್ತು ಬ್ಲಾಕ್ ‘ಬಿ’ ವ್ಯಾಪ್ತಿಯ ಫಲಾನುಭವಿಗಳ ಆಯ್ಕೆ ಮಾಡಲಾಯಿತು.
ಇನ್ನುಳಿದ ಕೌಜಲಗಿ ತಾಂಡಾ, ಸ್ಪಿನ್ನಿಂಗ್ ವಿಲ್ ತಾಂಡಾ, ಕಂಡಸಾರಿ ತಾಂಡಾ, ಲೀಡಕರ್ ಕಾಲೊನಿ, ಬಾವಿಕಟ್ಟಿ ತಾಂಡಾ, ಸೇವಾಲಾಲ ನಗರ, ಕಾಲೇಭಾಗ, ಕಾಲೇಭಾಗ ತಾಂಡಾ, ಗಾಂಧಿನಗರ ಮತ್ತು ಗಾಂಧಿನಗರ ತಾಂಡಾ ಸರ್ವೇ ಕಾರ್ಯವನ್ನು ಪ್ರಾರಂಭಿಸುವಂತೆ ತಿಳಿಸಿದರು.
ಕಾರ್ಮಿಕ ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ಯೋಗ್ಯ ಫಲಾನುಭವಿಗಳಿಗೆ ದೊರಕಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಮಿಕ ಇಲಾಖೆಯಿಂದ ಈಗಿರುವ ಸೌಲಭ್ಯ ಸಾರ್ವಜನಿಕರಿಗೆ ತಿಳಿಯುವಂತೆ ಮಾಹಿತಿ ನೀಡಲು ಪ್ರಚಾರ ಮಾಡಿ ಸೌಲಭ್ಯ ಕಲ್ಪಿಸಿ ಬಡವರಿಗೆ ಅನಕೂಲ ಮಾಡಿಕೊಡಿ ಎಂದರು.
ನಾಗಠಾಣ ಶಾಸಕ ದೇವಾನಂದ ಚವ್ಹಾಣ, ಆಶ್ರಯ ಕಮಿಟಿ ಸದಸ್ಯರಾದ ಮಲ್ಲಿಕಾರ್ಜುನ ನುಚ್ಚಿ, ಅಶೋಕ ಸೌದಾಗರ, ವಿಜಯಕುಮಾರ ಡೇವಿಡ್, ಸುಧಾತಾಯಿ ಪಾಂಡೆ, ಮಹಾನಗರ ಪಾಲಿಕೆ ಆಯುಕ್ತ ಶ್ರೀಹರ್ಷ ಶೇಟ್ಟಿ, ಮಹಾನಗರ ಪಾಲಿಕೆ ಸಹಾಯಕ ಆಯುಕ್ತ ಬಲರಾಮ ಲಮಾಣಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಔದ್ರಾಮ್, ತಹಶೀಲ್ದಾರ್ ಮೋಹನಕುಮಾರಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.