ADVERTISEMENT

ವಿಜಯಪುರ: ಉರುಸ್‌ಗೆ ಸೂಫಿ ನಾಡು ‘ತಾಂಬಾ’ ಸಜ್ಜು

ಜೂನ್ 28ರಿಂದ ಮೂರು ದಿನ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜನೆ

ಸಿದ್ದು ತ.ಹತ್ತಳ್ಳಿ
Published 26 ಜೂನ್ 2022, 6:00 IST
Last Updated 26 ಜೂನ್ 2022, 6:00 IST
ಹಜರತ್‌ ದಾವಲ್‌ ಮಲಿಕ್‌ ದೇವರು
ಹಜರತ್‌ ದಾವಲ್‌ ಮಲಿಕ್‌ ದೇವರು   

ತಾಂಬಾ:ತಾಂಬಾ ಪುಣ್ಯದ ಬೀಡು, ಇಲ್ಲಿ ಹಲವಾರು ಶರಣರು, ಸೂಫಿ ಸಂತರು, ಮಹಾತ್ಮರು ಹುಟ್ಟಿ, ನಾಡು-ನುಡಿ, ಧರ್ಮ-ಸಂಸ್ಕೃತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟು ಲೋಕ ಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ.

ಅಂತಹ ಸೂಫಿ ಸಂತರಲ್ಲಿ ಪ್ರಮುಖರಾದಹಜರತ್‌ ದಾವಲ್‌ ಮಲಿಕ್‌ ಅವರುತಾಂಬಾ ಗ್ರಾಮದಲ್ಲಿ ನೆಲೆಸಿದ್ದರು. ತಮ್ಮ ಹೃದಯ ವೈಶಾಲ್ಯತೆಯಿಂದ ಜನಸಾಮನ್ಯರ ಮನೆ, ಮನ ತಲುಪಿದ ಅವರು ಅಂಧಶ್ರದ್ಧೆ, ಮೂಢನಂಬಿಕೆ ಆಚರಣೆಗಳ ವಿರುದ್ಧ ಜನರಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಿದವರು. ಜತೆಗೆ ಜನರಲ್ಲಿ ಆಧ್ಯಾತ್ಮಿಕತೆ ಬಿತ್ತಿದರು.

ಹಲವು ಪವಾಡ ಮಾಡಿದ್ದ ಹಜರತ್‌ ದಾವಲ್‌ ಮಲಿಕ್‌, ಜಾತಿ-ಮತ, ಪಂಥ ಮೀರಿ ಸರ್ವ ಧರ್ಮೀಯರಿಗೆ ತಾಂಬಾವನ್ನು ಮುಕ್ತಿ ಕೇಂದ್ರವಾಗಿ ಮಾಡಿದರು. ಗ್ರಾಮವು ಕೋಮು ಸೌಹಾರ್ದಕ್ಕೆ ಹೆಸರಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮದ ಎಲ್ಲ ಸಮಾಜದ ಆರಾಧ್ಯ ದೇವರಾದ ಸಂತ ಹಜರತ್‌ ದಾವಲ್‌ ಮಲಿಕ್‌ ಅವರ ಉರುಸು ಸಾಕ್ಷಿಯಾಗಿದೆ.

ADVERTISEMENT

ಹಿಂದೂ ಮುಸ್ಲಿಂ ಸಮುದಾಯ ದವರು ಜಾತ್ರೆಯನ್ನು ಆಚರಿಸವರು. ಇದು ಧಾರ್ಮಿಕ, ಸಾಮಾಜಿಕ ಹಾಗೂ ಭಾವೈಕ್ಯದ ಸಂಕೇತವಾಗಿ ಗುರುತಿಸಿಕೊಂಡಿದೆ. ಸುಮಾರು ವರ್ಷಗಳ ಹಿಂದೆ ಹಜರತ್‌ ದಾವಲ್‌ ಮಲಿಕ್‌ ದೇವರು ಇಲ್ಲಿ ಬಂದು ನೆಲೆಸಿದ್ದರು. ಅಂದಿನಿಂದ ಇಂದಿನ ವರಿಗೂ ಪ್ರತಿವರ್ಷವೂ ಅತೀ ವಿಜೃಂಭಣೆ ಯಿಂದ ಜಾತ್ರೆ ಜರುಗುವುದು.

ಈ ಜಾತ್ರೆಗೆ ಕರ್ನಾಟಕ ಮತ್ತು ಮಹಾರಾಷ್ಟ್ರದ ವಿವಿಧೆಡೆಯಿಂದ ಭಕ್ತರು ಬರುತ್ತಾರೆ.

ಜೂನ್ 28 ಮಂಗಳವಾರ ರಾತ್ರಿ 9ಕ್ಕೆ ವಾದ್ಯ ವೈಭವದೊಂದಿಗೆ ದೇವರಿಗೆ ಗಂಧ ಹಾಗೂ ದೇವರಿಗೆ ಗಲೀಪ ಸಮರ್ಪಿಸುವುದು. ರಾತ್ರಿ 9.30ಕ್ಕೆ ಬಾಳಿಗೇರಿ ಗ್ರಾಮದ ಲಕ್ಷ್ಮೀಬಾಯಿ ಅ.ಕೊಣ್ಣುರ, ಅಬ್ಯಾಳ ಗ್ರಾಮದ ಪರಶುರಾಮ ಬಡಿಗೇರ ಮತ್ತು ಖ್ಯಾಡಗಿ ಗ್ರಾಮದ ಶಾಂತಪ್ಪ ಸಿ. ತಳವಾರ ಅವರಿಂದ ಗೀಗೀ ಪದಗಳ ಗಾಯನ ನಡೆಯಲಿದೆ. 29ರಂದು ಬೆಳಿಗ್ಗೆ 6ಕ್ಕೆ ಹಜರತ್‌ ದಾವಲ್‌ ಮಲಿಕ್‌ ದೇವರ ಗದ್ದುಗೆಗೆ ವಿಶೇಷ ಪೂಜಾ ಕಾರ್ಯಕ್ರಮ, ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಪ್ರಸಾದ ವಿತರಣೆ ಮತ್ತು ಜಾತ್ರೆ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

30ರಂದು ಬೆಳಿಗ್ಗೆ 8ಕ್ಕೆ ಜಾತ್ರೆಯಲ್ಲಿ ಭಾಗವಹಿಸಿದ್ದ ವಿವಿಧ ಕಲಾ ತಂಡಗಳಿಗೆ ಪ್ರಶಸ್ತಿಪತ್ರ ಕೊಡುವ ಮೂಲಕ ಕಲಾವಿದರಿಗೆ ಗೌರವಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.