ವಿಜಯಪುರ: ಭಾಸ್ಕರಾಚಾರ್ಯರ ವಿಧಾನದ ಮೂಲಕ ಗಣಿತದ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಬಹುದಾಗಿದೆ ಎಂದು ಮಹಿಳಾ ವಿವಿಯ ನೂತನ ಕುಲಪತಿ ಪ್ರೊ. ವಿಜಯಾ ಬಿ ಕೋರಿಶೆಟ್ಟಿ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಗಣಿತ ಅಧ್ಯಯನ ವಿಭಾಗ ಹಾಗೂ ಭಾಸ್ಕರಾಚಾರ್ಯ ಅಧ್ಯಯನ ಪೀಠದ ಅಡಿಯಲ್ಲಿ ವಿಶ್ವವಿದ್ಯಾನಿಲಯದ ಪ್ರಸಾರಾಂಗದಿಂದ ಶುಕ್ರವಾರ ಆಯೋಜಿಸಿದ್ದ ಗ್ರಂಥಗಳ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಾಮಾನ್ಯ ಪ್ರಕಟಿತ ಪಠ್ಯಪುಸ್ತಕಗಳ ಕಠಿಣ ಶೈಲಿಯಿಂದ ಹೊರಬಂದು, ವಿದ್ಯಾರ್ಥಿಗಳನ್ನು ಅರ್ಥಗರ್ಭಿತ, ಜ್ಯಾಮಿತೀಯ ಹಾಗೂ ಕಾವ್ಯಾತ್ಮಕ ರೀತಿಯಲ್ಲಿ ಚಿಂತಿಸಲು ಭಾಸ್ಕರಾಚಾರ್ಯರ ಗಣಿತ ಪ್ರೋತ್ಸಾಹಿಸುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಸಂಕಲನಶಾಸ್ತ್ರ, ಬೀಜಗಣಿತ ಮತ್ತು ಸಂಖ್ಯಾಸಿದ್ಧಾಂತದ ಪರಿಕಲ್ಪನೆಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ ಎಂದರು.
ಹಿಂದೈ ಗಣಿತ ಐತಿಹಾಸಿಕ-ಒಂದು ಮೂಲ ಗ್ರಂಥ ಭಾಗ- II , ಭಾರತದಲ್ಲಿ ಶ್ರೇಣಿ ಗಣಿತ, ಭಾರತೀಯ ಗಣಿತ ಶಾಸ್ತ್ರದ ಚಾರಿತ್ರೆ ಭಾಗ-1, ಬ್ರಹ್ಮಗುಪ್ತಮ್-1 ಗ್ರಂಥಗಳನ್ನು ಬಿಡುಗಡೆಗೊಳಿಸಲಾಯಿತು.
ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ, ಗ್ರಂಥಗಳ ಲೇಖಕ ಡಾ.ವೇಣುಗೋಪಾಲ ಹೆರೂರ ಹಾಗೂ ಗುಲಬರ್ಗಾ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ಎನ್.ಬಿ ನಡುವಿನಮನಿ ಉಪಸ್ಥಿತರಿದ್ದರು.
ಭಾಸ್ಕರಾಚಾರ್ಯ ಅಧ್ಯಯನ ಪೀಠದ ಸಂಯೋಜಕ ಪ್ರೊ.ಜಿ.ಜಿ.ರಜಪೂತ, ಪ್ರಸಾರಾಂಗ ನಿರ್ದೇಶಕರಾದ ಪ್ರೊ.ರಾಜು ಬಾಗಲಕೋಟ, ವಿದ್ಯಾರ್ಥಿನಿಯರಾದ ಸಹನಾ ದೇಶಪಾಂಡೆ, ಸೌಂದರ್ಯ, ಆಸಿಯಾ ದೌಲತಕೋಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.