ವಿಜಯಪುರ: ಕೋವಿಡ್ ಲಾಕ್ಡೌನ್ ಹಿನ್ನೆಲೆಯಲ್ಲಿ ವಾಣಿಜ್ಯ ಬ್ಯಾಂಕ್ ನೌಕರರಿಗೆ ನೀಡಿರುವ ಸೌಲಭ್ಯಗಳನ್ನು ತಮಗೂ ನೀಡಬೇಕು ಎಂದು ಆಗ್ರಹಿಸಿ ಗ್ರಾಮೀಣ ಬ್ಯಾಂಕ್ ನೌಕರರು ಹಾಗೂ ಅಧಿಕಾರಿಗಳು ಪ್ರತಿಭಟನೆ ಆರಂಭಿಸಿದ್ದಾರೆ.
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ನೌಕರರ ಸಂಘಟನೆ ನೇತೃತ್ವದಲ್ಲಿ ಗ್ರಾಮೀಣ ಬ್ಯಾಂಕ್ ಸಿಬ್ಬಂದಿ ಕಪ್ಪು ಬಟ್ಟೆ ಧರಿಸಿ ಮೇ 11ರಿಂದ ಪ್ರಾರಂಭಿಸಿರುವ ಪ್ರತಿಭಟನೆ ಮೇ 16ರ ವರೆಗೆ ನಡೆಯಲಿದೆ.
ದಿನಬಿಟ್ಟು ದಿನ ಸೇವೆ ಸಲ್ಲಿಸಲು ಅವಕಾಶ ನೀಡಬೇಕು, ಲಾಕ್ಡೌನ್ ಸಮಯದಲ್ಲಿನ ಆರು ದಿನಗಳ ಕೆಲಸಕ್ಕೆ ಒಂದು ದಿನದ ಹೆಚ್ಚಿನ ಸಂಬಳ ಕೊಡಬೇಕು, ಎಲ್ಲ ಸಿಬ್ಬಂದಿಗೆ ₹30 ಲಕ್ಷ ವಿಮೆ ಒದಗಿಸಬೇಕು, ಗರ್ಭಿಣಿ ಹಾಗೂ ಅಂಗವಿಕಲ ಸಿಬ್ಬಂದಿಗೆ ಮನೆಯಲ್ಲಿ ಕೆಲಸ ನಿರ್ವಹಿಸಲು ಅವಕಾಶ ನೀಡಬೇಕು, ಗ್ರಾಮೀಣ ಬ್ಯಾಂಕುಗಳ ವಿಲೀನಪೂರ್ವ ಹೊಂದಿದ ಸೌಲಭ್ಯಗಳನ್ನು ವಿಲೀನ ನಂತರವು ನೀಡಬೇಕು ಎಂದು ಒತ್ತಾಯಿಸಿದರು.
ವಾಣಿಜ್ಯ ಬ್ಯಾಂಕ್ ಸಿಬ್ಬಂದಿಗೆ ಕೊಡಮಾಡಿರುವ ಎಲ್ಲ ಸೌಲಭ್ಯಗಳನ್ನು ನಮಗೂ ನೀಡಬೇಕು, ಮಲತಾಯಿ ಧೋರಣೆ ಅನುಸರಿಸಬಾರದು ಎಂದು ಮನವಿ ಮಾಡಿದರು.
ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಗೌರಿಶಂಕರ ಗಾಂಧಿ, ಡಿ.ಎನ್.ತ್ರಿವೇದಿ, ಸಿ.ಎ. ಗಂಟೆಪ್ಪಗೋಳ, ಶಿವಾಜಿ ಇನಾಮದಾರ, ಕಲ್ಲಪ್ಪ ಪರಶೆಟ್ಟಿ, ಗೋಪಾಲ ಕಾಂಬಳೆ, ಸಾಯಬಣ್ಣ ಬೆಳಗಾವಿ, ಪ್ರೇಮಾ, ಕವಿತಾ, ವೀಣಾ, ವಿಜಯಾ ಪರ್ವತಿಕರ, ಅರುಣ ರೆಡ್ಡಿ, ಸವಿತಾ ಕೋರಿ, ಸಿದ್ದು ಗವಾರ ಮತ್ತು ಸುನೀಲ್ ನಾಯಕ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.