ADVERTISEMENT

ಕನ್ನಡ ಸಾಹಿತ್ಯಕ್ಕೆ ಹಳಕಟ್ಟಿ, ಶಂ.ಗು.ಬಿರಾದಾರ ಕೊಡುಗೆ ಅಪಾರ: ವಿ.ಡಿ.ಐಹೊಳ್ಳಿ

ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಾಹಿತಿ ವಿ.ಡಿ.ಐಹೊಳ್ಳಿ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 15:50 IST
Last Updated 20 ಜುಲೈ 2024, 15:50 IST
ವಿಜಯಪುರ ನಗರದಲ್ಲಿ ಎ.ಎಸ್.ಹಿಪ್ಪರಗಿ ಪ್ರತಿಷ್ಠಾನದಿಂದ ಶನಿವಾರ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ರಮೇಶ ತೇಲಿ ಮಾತನಾಡಿದರು
ವಿಜಯಪುರ ನಗರದಲ್ಲಿ ಎ.ಎಸ್.ಹಿಪ್ಪರಗಿ ಪ್ರತಿಷ್ಠಾನದಿಂದ ಶನಿವಾರ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ರಮೇಶ ತೇಲಿ ಮಾತನಾಡಿದರು   

ವಿಜಯಪುರ: ‘ಫ.ಗು. ಹಳಕಟ್ಟಿಯವರು ಅಂದಾಜು 10 ಸಾವಿರಕ್ಕೂ ಹೆಚ್ಚು ವಚನಗಳನ್ನು ಸಂಗ್ರಹಿಸಿ, ಪ್ರಕಟಿಸಿದ್ದಾರೆ. ಅವರು ತಮ್ಮ ಬದುಕನ್ನು ಸಮಾಜ ಮತ್ತು ಸಾಹಿತ್ಯಕ್ಕೆ ಮುಡುಪಾಗಿಟ್ಟಿದ್ದರು. ಶರಣರಂತೆಯೇ ಬದುಕು ಸಾಗಿಸಿದ ಹಳಕಟ್ಟಿಯವರು ಎಲ್ಲರಿಗೂ ಮಾದರಿಯಾಗಿದ್ದಾರೆ’ ಎಂದು ಸಾಹಿತಿ ವಿ.ಡಿ.ಐಹೊಳ್ಳಿ ಹೇಳಿದರು.

ನಗರದಲ್ಲಿ ಎ.ಎಸ್.ಹಿಪ್ಪರಗಿ ಪ್ರತಿಷ್ಠಾನ ಹಾಗೂ ಅಂಜುಮನ್ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಶನಿವಾರ ಸಿದ್ದಣ್ಣ ಕೋಳೂರ ಮತ್ತು ದಿ. ಮಲಕಾಜಪ್ಪ ವಡವಡಗಿ ಅವರ ಸ್ಮರಣಾರ್ಥ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಜಯಪುರ ಜಿಲ್ಲೆಯಲ್ಲಿ ಶೈಕ್ಷಣಿಕ, ಸಾಮಾಜಿಕ ಕ್ರಾಂತಿ ಮಾಡಿದ ಹಳಕಟ್ಟಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಂ.ಗು. ಬಿರಾದಾರ ಅವರ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕನ್ನಡ ಸಾಹಿತ್ಯಕ್ಕೆ ಅವರಿಬ್ಬರ ಕೊಡುಗೆ ಅಪಾರ ಎಂದು ಹೇಳಿದರು.

ADVERTISEMENT

ಶರಣ ಸಾಹಿತ್ಯ ಪರಿಷತ್‍ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ ಮಾತನಾಡಿ, ಮಕ್ಕಳ ಕವನ, ಕಥೆ, ಕಾದಂಬರಿಗಳನ್ನು ರಚಿಸುವ ಮೂಲಕ ಓದುಗರ ಹೃದಯದಲ್ಲಿ ಶಾಶ್ವತವಾಗಿ ಉಳಿಯುವ ಸಾಹಿತ್ಯವನ್ನು ನೀಡಿದ ಶಂ.ಗು.ಬಿರಾದಾರ ಅವರು ಇಂದಿನ ಸಾಹಿತಿಗಳಿಗೆ ಪ್ರೇರಣೆಯಾಗಿದ್ದಾರೆ. ಮಕ್ಕಳ ಸಾಹಿತ್ಯ ಕಮ್ಮಟಗಳನ್ನು ಅಯೋಜಿಸಿ ಅನೇಕ ಮಕ್ಕಳ ಸಾಹಿತಿಗಳಿಗೆ ಸಾಹಿತ್ಯ ರಚನೆಗೆ ಪ್ರಚೋದನೆ ನೀಡಿದ್ದಾರೆ ಎಂದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ರಮೇಶ ತೇಲಿ ಮಾತನಾಡಿ, ಸಿದ್ಧೇಶ್ವರ ಬ್ಯಾಂಕ್ ಸ್ಥಾಪಿಸಿ ಜನ ಸಾಮಾನ್ಯರಿಗೆ ಆರ್ಥಿಕ ಸಹಾಯ ದೊರೆಯುವಂತೆ ಮಾಡಿ, ವಚನ ಸಾಹಿತ್ಯದ ಮುದ್ರಣಕ್ಕಾಗಿ ಫಕೀರನಂತೆ ಬದುಕಿದವರು ಹಳಕಟ್ಟಿಯವರು ಎಂದು ಹೇಳಿದರು.

ಅಂಜುಮನ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಶಾರದಾಮಣಿ ಹುಣಸ್ಯಾಳ ಮಾತನಾಡಿದರು. ಶಿವಶರಣ ಕೋಳೂರ, ಅಶೋಕ ಕೋಳೂರ, ಸಂಗಮೇಶ ಬದಾಮಿ, ಅಶೋಕ ಹಿಪ್ಪರಗಿ, ಬಿ.ಕೆ.ಗೋಟ್ಯಾಳ, ವಿದ್ಯಾವತಿ ಅಂಕಲಗಿ, ಪರಶುರಾಮ ಪೋಳ, ಇತರರು ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.